50 ಮಂದಿಗೆ ಬಿಎಂಟಿಸಿಯಲ್ಲಿ ಅನುಕಂಪದ ನೌಕರಿ; ಉದ್ಯೋಗ ಪತ್ರ ನೀಡಿದ ರಾಮಲಿಂಗಾರೆಡ್ಡಿ

KannadaprabhaNewsNetwork | Updated : Mar 03 2024, 11:56 AM IST

ಸಾರಾಂಶ

ಬಿಎಂಟಿಸಿ ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಅಡಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ನೇಮಕಾತಿ ಆದೇಶಪತ್ರ ವಿತರಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಎಂಟಿಸಿ ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಅಡಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ನೇಮಕಾತಿ ಆದೇಶಪತ್ರ ವಿತರಿಸಿದರು.

ಕಳೆದ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ 200ಕ್ಕೂ ಹೆಚ್ಚಿನ ಮಂದಿ ಮೃತ ನೌಕರರ ಅವಲಂಬಿತರಿಗೆ ದರ್ಜೆ 3 (ಮೇಲ್ವಿಚಾರಕೇತರ) ಮತ್ತು ದರ್ಜೆ 4ರಲ್ಲಿನ ಖಾಲಿ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. 

ಇದೀಗ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ಮೃತ ಅವಲಂಬಿತ 50 ಮಂದಿಗೆ ಕಿರಿಯ ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್‌, ದರ್ಜೆ 3 (ಮೇಲ್ವಿಚಾರಕೇತರ) ಹುದ್ದೆಗಳಿಗೆ ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದೆ.

ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳು ನೌಕರರು ಹಾಗೂ ಅವರ ಕುಟುಂಬದವರನ್ನು ಕಾಪಾಡಲು ಎಲ್ಲ ಕ್ರಮಕೈಗೊಳ್ಳಲಿವೆ. ಅದರಂತೆ ಮೃತ ನೌಕರರ ಕುಟುಂಬದವರೊಬ್ಬರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದರು.

ನೇಮಕಾತಿಗೆ ನಿರ್ಧಾರ: ಬಿಎಂಟಿಸಿ ಸೇವೆ ಮತ್ತಷ್ಟು ಉತ್ತಮಗೊಳಿಸಲು ಖಾಲಿ ಇರುವ 2,500 ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 

ಮಾ.10ರಿಂದ ಏ.4ವರೆಗೆ www.kea.kar.nic.inನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಸೂಚಿಸಿರುವ ವಿದ್ಯಾರ್ಹತೆ, ದೈಹಿಕ ದೃಢತೆ, ಷರತ್ತು ಮತ್ತು ಸೂಚನೆಗಳನ್ವಯ ಅರ್ಜಿ ಸಲ್ಲಿಸಬೇಕು ಎಂದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್‌, ಮಾಹಿತಿ ತಂತ್ರಜ್ಞಾನದ ನಿರ್ದೇಶಕಿ ಎಂ.ಶಿಲ್ಪಾ ಇದ್ದರು.

Share this article