ಕನ್ನಡಪ್ರಭ ವಾರ್ತೆ ಬಂಗಾರಪೇಟೆಶಿಕ್ಷಕರ ವೃತ್ತಿಯು ಆಯ್ಕೆಯಾದರು ಅಥವಾ ಅನಿವಾರ್ಯವಾದರು ಶಿಕ್ಷಕರು ವೃತ್ತಿಗೌರವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಎಂಎಲ್ಸಿ ಡಿ.ಟಿ.ಶ್ರೀನಿವಾಸ ಹೇಳಿದರು. ಪಟ್ಟಣದ ಜೈನ್ ಇಂಟರ್ ನ್ಯಾಷನಲ್ ಶಾಲಾ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದಿಂದ ಸರ್ಕಾರಿ, ಅನುದಾನಿತ, ಖಾಸಗಿ ಪ್ರೌಢಶಾಲೆಗಳ ಶಿಕ್ಷಕರಿಗೆ ತಾಲ್ಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಶೈಕ್ಷಣಿಕ ಕಾರ್ಯಾಗಾರ
ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಕ ದೇಶಕಟ್ಟುವ ಶಿಲ್ಪಿ ಇದ್ದಂತೆ, ನಡೆನುಡಿ ಶುದ್ದವಾಗಿಟ್ಟುಕೊಂಡ ಶಿಕ್ಷಕ ಸಮಾಜದಲ್ಲಿ ಸದಾ ಆದರ್ಶವಾಗಿರಬೇಕು, ರಾಷ್ಟ್ರೀಯ ವಿಚಾರಧಾರೆಗಳನ್ನೂ ಮಕ್ಕಳಿಗೆ ಬೋಧಿಸಬೇಕಾಗಿದೆ. ವಿಶಾಲ ದೃಷ್ಟಿಕೋನ ಹೊಂದಿದ ಶಿಕ್ಷಕರು ಪ್ರಭಾವಯುತವಾಗಿ ಪ್ರಜೆಗಳನ್ನು ರೂಪಿಸಲು ಸಾಧ್ಯವಿದೆ ಎಂದರು.
ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗಳು ಕಡಿಮೆಯಾಗುತ್ತಿದೆ, ಎಸ್ಎಸ್ಎಲ್ಸಿಯಲ್ಲಿ ಫಲಿತಾಂಶ ಕುಸಿಯುತ್ತದೆ ಇದು ನನಗೆ ತೃಪ್ತಿಕರವಾಗಿಲ್ಲ, ಗ್ರಾಮೀಣ ಭಾಗದ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು ನಗರ ಪ್ರದೇಶದ ಶಾಲೆಗಳಲ್ಲಿ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಕ್ಕಳ ಮಾನಸಿಕ ಜ್ಞಾನಕ್ಕೆ ಅನುಗುಣವಾಗಿ ಮಕ್ಕಳಲ್ಲಿರುವ ಪ್ರತಿಭೆ ಹೊರಗೆ ತರುವುದೇ ಶಿಕ್ಷಣ ಎಂದು ಸ್ವಾಮಿ ವಿವೇಕಾನಂದ ಏಕಲವ್ಯನಿಗೆ ದ್ರೋಣಾಚಾರ್ಯ ವಿದ್ಯೆ ಕಲಿಸಲು ನಿರಾಕರಿಸಿದ ಆಗ ದೋಣಾಚಾರ್ಯ ಮೂರ್ತಿ ನಿರ್ಮಾಣ ಮಾಡಿ ವಿದ್ಯೆ ಕಲಿಯುತ್ತಾನೆ, ಆದರೆ ಸಮರ್ಪಕವಾಗಿ ಕಲಿಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಒಬ್ಬ ಶಿಕ್ಷಕ ಇರುತ್ತಾರೆ ಎಂದು ಹೇಳಿದರು.ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಶೈಕ್ಷಣಿಕ ಗುಣಮಟ್ಟದ ಪ್ರಗತಿ ಪರೀಶಿಲನೆಯನ್ನು ಮಾಡಲು ಬಿಇಓಗೆ ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಹೊರೆ ಕಡಿಮೆ ಮಾಡಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಲು ಸರ್ಕಾರದ ಗಮನ ಸೆಳೆಯುವುದಾಗಿ ಹಾಗು ತಾಲ್ಲೂಕಿನಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಬಿ.ಎಂ.ಗೋವಿಂದ, ಬಿಇಓ ಗುರುಮೂರ್ತಿ, ಆರಕ್ಷಕ ನಿರೀಕ್ಷಕ ದಯಾನಂದ.ಆರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ಖಜಾಂಚಿ ವೆಂಕಟೇಶ, ಪ್ರಧಾನ ಕಾರ್ಯದರ್ಶಿ ಸುಜಾತಮ್ಮ, ಕುಂಬಾರಪಾಳ್ಯ ಮಂಜುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯಗೌಡ, ನಿವೃತ್ತ ಉಪನಿರ್ದೇಶಕ ಹಾಗೂ ಸಂಪನ್ಮೂಲ ವ್ಯಕ್ತಿ ವೆಂಕಟರಾಮರೆಡ್ಡಿ, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎಲ್.ರಾಮಕೃಷ್ಣಪ್ಪ ಮತ್ತಿತರರು ಇದ್ದರು.