ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ತಿನಿಂದ ದೂರು ದಾಖಲಿಸಿದ ನಂತರ ದೂರದಾರರಾದ ನರಸಿಂಹಮೂರ್ತಿ ಮಾತನಾಡಿ, ಈಚೆಗೆ ದಾವಣಗೆರೆ ಜಿಲ್ಲೆ ಹರಿಹರದಲ್ಲಿನ ಬಿ.ಕೃಷ್ಣಪ್ಪವನದಲ್ಲಿ ನಡೆದ ಪ್ರೊ. ಬಿ. ಕೃಷ್ಣಪ್ಪ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೆ.ಎಸ್. ಭಗವಾನ್ ರವರು ಭಾಗವಹಿಸಿ ಹಿಂದೂ ಧರ್ಮ, ಪ್ರಭು ಶ್ರಿರಾಮಚಂದ್ರರ ಹಾಗೂ ಹಿಂದೂ ಧರ್ಮಗ್ರಂಥಗಳ ಕುರಿತು ಅತ್ಯಂತ ತುಚ್ಚ, ಅಶ್ಲೀಲ, ಅವಹೇಳನ ಹಾಗೂ ಪ್ರಚೋದನಕಾರಕವಾಗಿ ಮಾತನಾಡಿ ಹಿಂದುಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ಪ್ರಭು ಶ್ರೀರಾಮರು ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುತ್ರಕಾಮೇಷ್ಠಿಯಾಗದ ಸಂದರ್ಭದಲ್ಲಿನ ಪುರೋಹಿತರಿಗೆ ಹುಟ್ಟಿದ್ದು ಎಂದು ಅಸಂಬದ್ಧ ವ್ಯಾಖ್ಯಾನದ ಮೂಲಕ ಹಿಂದೂಗಳ ಭಾವನೆಯನ್ನು ಕೆಡಿಸುವ ಉದ್ದೇಶದಿಂದ ಕಪೋಲಕಲ್ಪಿತ ಕಥೆಯನ್ನು ಕಟ್ಟಿ ಹೇಳಿದ್ದಾರೆ. ಶ್ರೀರಾಮನನ್ನು ಪೂಜಿಸಬೇಡಿ, ಹಿಂದೂ ದೇವರುಗಳು ಕೊಲೆ ಮಾಡುವ ದೇವರುಗಳೆಂದು ಡಾ. ಅಂಬೇಡ್ಕರ್ ಹೇಳಿದ್ದಾರೆ ಎಂದು ಹಾಗೂ ವಾಲ್ಮೀಕಿ ರಾಮಯಾಣದ ಬಗ್ಗೆ ತಪ್ಪು ಮಾಹಿತಿನೀಡಿ ಧರ್ಮಗ್ರಂಥವನ್ನು ಅಪಮಾನಿಸಿದ್ದಾರೆ ಎಂದರು.
ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಹಿಂದೂ ಧರ್ಮ ಜೀವಂತವಾಗಿದೆ. ವಿಶ್ವದಲ್ಲಿ ಎಷ್ಟೋ ಸಂಸ್ಕೃತಿಗಳು ಹುಟ್ಟಿ, ಅಭಿವೃದ್ಧಿ ಹೊಂದಿ ಕೊನೆಗೆ ನಾಶವಾಗಿವೆ. ಆದರೆ ಸಿಂಧೂ ನದಿಯ ದಂಡೆಯ ಮೇಲೆ ಹುಟ್ಟಿದ ಹಿಂದೂ ನಾಗರಿಕತೆ ಇಂದಿಗೂ ಅಭಿವೃದ್ಧಿ ಹೊಂದುತ್ತಲೇ ಸಾಗಿದೆ ಎಂದರು.ಪ್ರಬುದ್ಧ ಜನತೆಯ ಮನದಾಳದಿಂದ ಈಗಾಗಲೆ ತಿರಸ್ಕರಿಸಲ್ಪಟ್ಟ ಈ ಸ್ವಯಂಘೋಷಿತ ಚಿಂತಕ, ತನ್ನ ಜೀವಮಾನದಲ್ಲಿ ಸಮಾಜದಲ್ಲಿ ಒಂದಾದರೂ ಉತ್ತಮ ಕೆಲಸಮಾಡದೆ, ಯಾರನ್ನೂ ಉದ್ಧಾರ ಮಾಡದೆ, ಕೇವಲ ಯಾವುದೋ ಕೆಲಸಕ್ಕೆ ಬಾರದ ಹಣೆಪಟ್ಟಿಯನ್ನುಳಿಸಿಕೊಳ್ಳಲು ಇಂತಹ ಕೀಳು ಪ್ರಚಾರಕ್ಕಿಳಿದಿದ್ದಾರೆ. ಈತನನ್ನು ಈ ಹಿಂದಯೇ ನಿರ್ಲ್ಯಕ್ಷಿಸಿ ಆಚೆಗಿಟ್ಟಿದ್ದರೂ, ಮತ್ತೆ ಮತ್ತೆ ಮುನ್ನೆಲೆಗೆ ಬರಲು ಇಂತಹ ಕೀಳು ಮಟ್ಟಕ್ಕಿಳಿಯುವ ಮೂಲಕ ಅವರೆ ತಮ್ಮ ಯೋಗ್ಯತೆಯನ್ನು ವೇದಿಕೆಯಲ್ಲಿ ಮತ್ತೊಮ್ಮೆ ಸಾಬೀತುಪಡಿಸಿಕೊಂಡಿದ್ದಾರೆ. ಆದರೂ ಭಕ್ತರ ಭಾವನೆಗೆ ಇಂತಹ ಕೀಳು ಮಟ್ಟದ ಮಾತುಗಳು ಧಕ್ಕೆ ತರಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಹಿಂದೂ ದೇವರುಗಳು, ಧಾರ್ಮಿಕ ಆಚರಣೆ ಹಾಗೂ ಧರ್ಮಗ್ರಂಥಗಳ ಅವಹೇಳನವನ್ನು ನಾವು ಸಹಿಸುವುದಿಲ್ಲ, ಇವರ ಭಾಷಣದ ವಿಡಿಯೋಗಳು, ದ್ವನಿಮುದ್ರಣ, ಟಿ.ವಿ. ವಾಹಿನಿಗಳ ದೃಶ್ಯಗಳ ಹಾಗೂ ಮುಂತಾದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಪ್ರೊ. ಭಗವಾನ್ ವಿರುದ್ಧ ಕಾನೂನು ಕ್ರಮಕ್ಕೆ ಜರುಗಿಸಬೇಕೆಂದರು. ನಂತರ ದೂರಿನ ಪ್ರತಿಯನ್ನು ಠಾಣಾಧಿಕಾರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿಯ ಮಾಜಿ ಅಧ್ಯಕ್ಷರಾದ ಶ್ರೀನಿವಾಸಮೂರ್ತಿ, ರಾಜಣ್ಣಸಿ.ಎಸ್. ವಿಶ್ವಹಿಂದೂ ಪರಷತ್ತಿನ ಸಿ.ಎಸ್. ಹರ್ಷ, ಬಿ.ಎಸ್. ಮಂಜುನಾಥ್, ಭಜರಂಗದಳದ ಮಣಿ, ಎ.ಎಸ್. ಮೋಹನ್ ಕುಮಾರ್ ಮುಂತಾದವರಿದ್ದರು.