ಕಿಷ್ಕಿಂದಾ ವಿವಿಯಲ್ಲಿ ಎಂಬಿಎ- ಎಂಸಿಎಗೆ ಪೂರಕ ಸ್ನಾತಕೋತ್ತರ ಕೋರ್ಸ್‌ಗಳು ಆರಂಭ

KannadaprabhaNewsNetwork | Published : Jan 19, 2024 1:48 AM

ಸಾರಾಂಶ

ಸಂಶೋಧನೆ ಮತ್ತು ನಾವೀನ್ಯತೆ ವಿವಿಯ ಕಲಿಕೆಯ ಭಾಗವಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಪೂರೈಸುವ ಭರವಸೆ ನೀಡುತ್ತದೆ.

ಬಳ್ಳಾರಿ: ಕಿಷ್ಕಿಂದಾ ವಿಶ್ವವಿದ್ಯಾಲಯವು ಬರುವ ಫೆಬ್ರವರಿಯಿಂದ ಪ್ರಾರಂಭಗೊಳ್ಳುವ ಬ್ಯಾಚ್‌ಗಾಗಿ ಎಂಬಿಎ ಮತ್ತು ಎಂಸಿಎಗೆ ಪೂರಕವಾದ ಎರಡು ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಡಾ. ಟಿ.ಎನ್. ನಾಗಭೂಷಣ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ವಿಶ್ವವಿದ್ಯಾಲಯವು ಸಿಎಸ್‌ಸಿ, ಇಸಿಇ, ಇಇಇ ಹಾಗೂ ಬಿಸಿಎಗಳಲ್ಲಿ ಬಿ- ಟೆಕ್ ಎಂಬ ನಾಲ್ಕು ಪದವಿಪೂರ್ವ(ಯುಜಿ) ಕಾರ್ಯಕ್ರಮಗಳನ್ನು ನೀಡಿದೆ. 2023- 24ರ ಶೈಕ್ಷಣಿಕ ವರ್ಷದಿಂದ ಕಿಷ್ಕಿಂದಾ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಬಿಐಟಿಎಂ ಹಾಗೂ ಬಳ್ಳಾರಿ ಬಿಜಿನೆಸ್‌ ಕಾಲೇಜು(ಬಿಬಿಸಿ) ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಕಿಷ್ಕಿಂದಾ ವಿವಿಯು ಯುಜಿಸಿ ಅನುಮೋದನೆ ಪಡೆದುಕೊಂಡಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು. ಈ ಮೂಲಕ ಅವರ ಭವಿಷ್ಯ ರೂಪಿಸುವುದು ವಿವಿಯ ಆದ್ಯತೆಯಾಗಿದೆ ಎಂದರು.

ವಿಶ್ವವಿದ್ಯಾಲಯವು ಪ್ರಾಜೆಕ್ಟ್‌ ಆಧರಿತ ಕಲಿಕೆಗೆ ಒತ್ತು ನೀಡುತ್ತದೆ. ಸಂಶೋಧನಾ ನೆಲೆಯಲ್ಲಿ ಕಲಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಹಾಗೂ ಪ್ರಪಂಚದ ನೈಜ ಸಮಸ್ಯೆಗಳ ಪರಿಹಾರಕ್ಕೆ ತಮ್ಮಲ್ಲಿನ ಕೌಶಲ್ಯಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸುವುದು ಬಹಳ ಮುಖ್ಯವಾಗುತ್ತದೆ. ಹೀಗಾಗಿಯೇ ವಿದ್ಯಾರ್ಥಿಗಳ ಕೌಶಲ್ಯ ಹಾಗೂ ಜ್ಞಾನ ಬೆಳವಣಿಗೆ ನುರಿತ ಅಧ್ಯಾಪಕರನ್ನು ನಿಯೋಜನೆಗೊಳಿಸಲಾಗುತ್ತಿದ್ದು, ವಿದ್ಯಾರ್ಥಿಗಳು ತಂತ್ರಜ್ಞಾನ ಬಳಕೆಯ ಜತೆಗೆ ವೃತ್ತಿಜೀವನ ಗುರಿ ಸಾಧನೆಗೆ ಅಗತ್ಯ ಮಾರ್ಗದರ್ಶನ ಸಿಗಲಿದೆ. ಸಂಶೋಧನೆ ಮತ್ತು ನಾವೀನ್ಯತೆ ವಿವಿಯ ಕಲಿಕೆಯ ಭಾಗವಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಪೂರೈಸುವ ಭರವಸೆ ನೀಡುತ್ತದೆ ಎಂದರು.

ಕುಲಸಚಿವ ಪ್ರೊ. ಎಸ್.ಎ. ಪಾಟೀಲ, ಮೌಲ್ಯಮಾಪನ ಕುಲಸಚಿವ ಪ್ರೊ. ಎಸ್‌.ಬಿ. ಕಾಮಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು. ಜುಲೈನಲ್ಲಿ ಹೊಸ ಕ್ಯಾಂಪಸ್ ಗೆ ಕಿಷ್ಕಿಂದಾ ವಿವಿ

ಸಿರುಗುಪ್ಪ ರಸ್ತೆಯಲ್ಲಿ ಬರುವ ಸಿಂದಿಗೇರಿ ಬಳಿ 50 ಎಕರೆ ಪ್ರದೇಶದಲ್ಲಿ ಕಿಷ್ಕಿಂದಾ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ನಿರ್ಮಾಣಗೊಳ್ಳುತ್ತಿದೆ. 5 ಸಾವಿರ ಚದರಅಡಿ ಮೀಟರ್ ವಿಸ್ತ್ರೀರ್ಣದ ಅಕಾಡೆಮಿಕ್ ಬ್ಲಾಕ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 2025ರ ಮಾರ್ಚ್‌ ಅಂತ್ಯದ ವೇಳೆಗೆ ವಿದ್ಯಾರ್ಥಿಗಳ ಹಾಸ್ಟೆಲ್‌ಗಳು ಮತ್ತು ವಿದ್ಯಾರ್ಥಿ ಸೌಕರ್ಯಗಳ ಬ್ಲಾಕ್‌ಗಳು ಸಿದ್ಧವಾಗಲಿವೆ. 2025ರ ಜುಲೈನಿಂದ ಹೊಸ ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲಿವೆ ಎಂದು ಉಪಕುಲಪತಿ ಪ್ರೊ. ಡಾ. ಟಿ.ಎನ್. ನಾಗಭೂಷಣ ತಿಳಿಸಿದರು.

Share this article