ಕುಡಿಯುವ ನೀರಿನ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

KannadaprabhaNewsNetwork |  
Published : Dec 23, 2025, 03:15 AM IST
ವಿಜಯಪುರ | Kannada Prabha

ಸಾರಾಂಶ

ಕಾಮಗಾರಿ ಕೈಗೊಳ್ಳುವಾಗ ಸೂಕ್ತ ನಿರ್ದೇಶನ ಪಾಲಿಸಬೇಕು. ಜಿಲ್ಲೆಯಲ್ಲಿ ಅಮೃತ-2 ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಮುಂದಿನ ಸಭೆಯೊಳಗಾಗಿ ನಿಗದಿತ ಗುರಿ ಸಾಧಿಸಬೇಕು. ಯಾವುದೇ ಸಬೂಬು ನೀಡದೆ ಭೌತಿಕ ಪ್ರಗತಿ ಸಾಧಿಸಿ ಮಾಹಿತಿ ಒದಗಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕುಡಿಯುವ ನೀರು ಪೂರೈಕೆ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಸೂಕ್ತ ಯೋಜನೆ ಹಾಕಿಕೊಂಡ ಕಾರ್ಯ ನಿರ್ವಹಿಸಬೇಕು. ಯಾವುದೇ ತಾಂತ್ರಿಕ ಸಮಸ್ಯೆ ಎದುರಾದಲ್ಲಿ ನಿಮ್ಮ ಮೇಲಾಧಿಕಾರಿ- ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ಅವರೊಂದಿಗೆ ಚರ್ಚಿಸಿ, ಪರಿಹರಿಸಿಕೊಳ್ಳಿ. ಸರ್ಕಾರದ ಹಂತದಲ್ಲಿರುವ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ತಂದು ಶೀಘ್ರ ಪರಿಹಾರ ಕಂಡುಕೊಂಡು ಒಟ್ಟಾರೆ ಯಾವುದೇ ಕಾಮಗಾರಿ ನೈಜ ಕಾರಣವಿಲ್ಲದೇ ಬಾಕಿ ಇರದಂತೆ ನೋಡಿಕೊಂಡು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ನಗರಕ್ಕೆ ಅವಶ್ಯಕತೆಯಿರುವ ಕುಡಿಯುವ ನೀರಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ಎಲ್ಲ 60 ಬಾವಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈಗಾಗಲೇ 26 ಬಾವಡಿಗಳ ನೀರನ್ನು ಗೃಹಬಳಕೆಗೆ ಉಪಯೋಗಿಸಲಾಗುತ್ತಿದ್ದು, ಎಲ್ಲ 60 ಬಾವಡಿಗಳ ನೀರು ಬಳಕೆಯಾದಲ್ಲಿ ಅಂದಾಜು 10 ಎಂಎಲ್‌ಡಿ ನೀರಿನ ಲಭ್ಯತೆಯಾಗಿ ಕುಡಿಯುವ ನೀರಿನ ಒತ್ತಡ ಕಡಿಮೆಯಾಗುವುದು ಈ ಕುರಿತು ಅಧಿಕಾರಿಗಳು ಕ್ರಮ ವಹಿಸುವಂತೆ ಹೇಳಿದರು.

ಸಿಂದಗಿ ನಗರದ ವಾರ್ಡ್‌ ನಂ.1, 2ರಲ್ಲಿ ಯುಜಿಡಿ ಕಾಮಗಾರಿ ಕುರಿತು ಶಾಸಕ ಅಶೋಕ ಮನಗೂಳಿ ಅಸಮಾಧಾನ ವ್ಯಕ್ತಪಡಿಸಿ, ಕಳೆದ ಒಂದು ವರ್ಷದಿಂದ ಫಾಲೋಅಪ್, ಹತ್ತಾರು ಬಾರಿ ಪುರಸಭೆಯಲ್ಲಿ ಸಭೆ ನಡೆಸಿ ಸೂಚಿಸಲಾಗಿತ್ತಾದ್ದರೂ ಕ್ರಿಯಾಯೋಜನೆಯ 94 ಕಿ.ಮೀ. ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ನಿರ್ವಹಿಸಲು ಆಗದೆ ಇದ್ದಲ್ಲಿ, ಗುತ್ತಿಗೆದಾರರನ್ನು ಕಾಯ್ದು ಕುಳಿತುಕೊಳ್ಳದೇ, ಬದಲಾವಣೆ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಹೇಳಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.56 ಹೆಚ್ಚಿನ ಮಳೆಯಾಗಿದೆ. 7.262 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಅತಿ ಹೆಚ್ಚು ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಯಲಾಗಿದೆ. 9827 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ರಸಗೊಬ್ಬರದ ಯಾವುದೇ ಕೊರತೆ ಇಲ್ಲ. 1.92 ಲಕ್ಷ ತೊಗರಿ ಹಾಗೂ 45 ಸಾವಿರ ಹೆಕ್ಟೇರ್ ಹತ್ತಿ ಬೆಳೆ ನಾಶವಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 35675 ರೈತರಿಗೆ ₹580 ಕೋಟಿ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ. 9 ಸಾವಿರ ರೈತರಿಗೆ ತಾಂತ್ರಿಕ ಸಮಸ್ಯೆಗಳಿಂದ ಹಣ ಜಮೆಯಾಗಿರುವುದಿಲ್ಲ. ಈ ರೈತರಿಗೆ ಖಾತೆಗೆ ಹಣ ಜಮೆ ಮಾಡಲು ಇರುವ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕಾರ್ಯ ಗ್ರಾಪಂಗಳ ಮೂಲಕ ಮಾಡಲಾಗುತ್ತಿದೆ, ಈಗಾಗಲೇ ಜಿಲ್ಲೆಯಲ್ಲಿ 97 ತೊಗರಿ ಖರೀದಿ ಕೇಂದ್ರ ಹಾಗೂ 5 ಮೆಕ್ಕೆ ಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಫಸಲ ಬಿಮಾ ಯೋಜನೆಯಡಿ ನೋಂದಾಯಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಬೆಳೆ ವಿಮೆಯಡಿ ನೋಂದಾಯಿಸಿ, ವಿಮೆ ಕಂತು ಪಾವತಿಸುವುದರಿಂದ ಆಗುವ ಅನುಕೂಲತೆಗಳ ಕುರಿತು ರೈತರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು. ಎಲ್ಲ ತಾಲೂಕಿಗೊಂದು ಕೋಲ್ಡರ್ ಸ್ಟೋರೇಜ್ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ಸಿದ್ಧತೆ ಹಾಗೂ ಲಿಂಬೆ ಮಾದರಿಯಲ್ಲಿ ಡೋಣಿ ನದಿಯ ಬಿಳಿ ಜೋಳಕ್ಕೂ ಜಿಐ ಟ್ಯಾಗ್ ಒದಗಿಸಲು ಅಗತ್ಯ ಕ್ರಮ ವಹಿಸುವಂತೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ, ರಾತ್ರಿ ತಂಗಲು ವ್ಯವಸ್ಥೆ ಕಲ್ಪಿಸಿ ಅತ್ಯಂತ ಕನಿಷ್ಠ ದರ ನಿಗದಿಗೊಳಿಸಬೇಕು. ಜಿಲ್ಲೆಯಲ್ಲಿ 5 ಮುಖ್ಯ, 5 ಉಪ ಮುಖ್ಯ ಮಾರುಕಟ್ಟೆಗಳಿದ್ದು, ಬಬಲೇಶ್ವರ ಸೇರಿದಂತೆ ಎಲ್ಲೆಲ್ಲಿ ಅವಶ್ಯಕತೆವಿದ್ದೆಡೆ ತಾಲೂಕಿಗೊಂದು ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಬೀದಿ ನಾಯಿಗಳ ಕಡಿತ ಪ್ರಕರಣಗಳನ್ನು ತಡೆಗಟ್ಟಲು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಾಣಿ ದಯೆಯೊಂದಿಗೆ ಜೀವ ಹಾನಿಯಾಗದಂತೆ ತಡೆಗಟ್ಟಲು ಅಭಿಯಾನದ ಮಾದರಿಯಲ್ಲಿ ಬೀದಿ ನಾಯಿಗಳು, ಬೆಳೆಗಳ ನಾಶಪಡಿಸುವ ಹಂದಿಗಳ ಹತೋಟಿಗೆ ಸೂಕ್ತ ಕ್ರಮ ವಹಿಸುವಂತೆ ಹೇಳಿದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ನಮ್ಮ ಜಿಲ್ಲೆ ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧಿ ಪಡೆದಿದೆ. ಹೆಚ್ಚಾಗಿ ಲಿಂಬೆ ಬೆಳೆ ಬೆಳೆಯುತ್ತಿರುವುದರಿಂದ ಲಿಂಬೆ ಅಭಿವೃದ್ಧಿ ಮಂಡಳಿಯಿಂದ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿ, ಅವಶ್ಯಕವಿರುವ ಅನುದಾನ, ಕಾಮಗಾರಿಗಳನ್ನು ಕೈಗೊಳ್ಳಲು ಇರುವ ಸಮಸ್ಯೆ ಕುರಿತು ಅಧಿಕಾರಿಗಳು ಸಭೆಯಲ್ಲಿ ವಿವರಿಸುವುದರಿಂದ ಸಮಯ ವ್ಯರ್ಥವಾಗಿ ಪರಿಹಾರ ದೊರಕಿಸಲು ವಿಳಂಬವಾಗುತ್ತದೆ. ಹಾಗಾಗಿ ಪೂರ್ವದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸಿಕೊಂಡಲ್ಲಿ ತ್ವರಿತವಾಗಿ ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ಇದರಿಂದ ಪ್ರಮುಖ ವಿಷಯಗಳ ಚರ್ಚೆಗೆ ಅವಕಾಶ ದೊರೆಯುತ್ತದೆ ಎಂದು ಹೇಳಿದರು.

ವಿಪ ಸದಸ್ಯ ಕೇಶವಪ್ರಸಾದ ಮಾತನಾಡಿ, ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಒತ್ತು ನೀಡಬೇಕು. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಯವ ಕೃಷಿ ಕುರಿತು ತಿಳಿವಳಿಕೆ ಮೂಡಿಸಬೇಕು. ಸಾವಯವ ಕೃಷಿಕರ ಯಶೋಗಾಥೆಗಳ ಮೂಲಕ ಇತರ ರೈತರಿಗೂ ಪ್ರೇರೆಪಿಸಬೇಕು. ಇದರಿಂದ ರೈತರು ಸಾವಯವ ಕೃಷಿ ಬೆಳೆಯಲು ಮುಂದೆ ಬರುತ್ತಾರೆ ಎಂದರು.

ಸಭೆಯಲ್ಲಿ ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ಪಿ.ಎಚ್.ಪೂಜಾರ, ಎನ್.ರವಿಕುಮಾರ, ಶಾಸಕರಾದ ರಾಜುಗೌಡ ಪಾಟೀಲ, ವಿಠ್ಠಲ ಕಟಕಧೋಂಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಇಲಿಯಾಸ ಬೋರಾಮಣಿ, ಕೆಡಿಪಿ ನಾಮನಿರ್ದೇಶಿತ ಸದಸ್ಯ ಬಾಬು ಸಾಹುಕಾರ ಮೇತ್ರಿ, ನೂರಅಹ್ಮದ, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ಕುಡಿಯುವ ನೀರಿನ ಪೈಪಲೈನ್ ಕಾಮಗಾರಿ ಕೈಗೊಳ್ಳುವಾಗ ರಸ್ತೆ ಅಗೆತ ಮಾಡುವುದರಿಂದ ರಸ್ತೆ ಹಾಳಾಗಿ ಜನರಿಗೂ ಅನಾನೂಕುಲ ಹಾಗೂ ಸರ್ಕಾರಕ್ಕೂ ಹೊರೆಯಾಗುತ್ತದೆ. ಕಾಮಗಾರಿ ಕೈಗೊಳ್ಳಲು ಮಾರ್ಗಸೂಚಿಗಳಿದ್ದರೂ, ರಸ್ತೆ ಅಗೆದು ಕಾಮಗಾರಿ ಕೈಗೊಂಡ ಹಾನಿಗೆ ಯಾರೂ ಜವಾಬ್ದಾರರು. ಕಾಮಗಾರಿ ಕೈಗೊಳ್ಳುವಾಗ ಸೂಕ್ತ ನಿರ್ದೇಶನ ಪಾಲಿಸಬೇಕು. ಜಿಲ್ಲೆಯಲ್ಲಿ ಅಮೃತ-2 ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌