ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷ್ಣಾ ಕೊಳ್ಳದ ಜನರ ಬದುಕು-ಭವಣೆ ಅರಿತು ನೀರಾವರಿ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ ಸಂಘದ ಪದಾಧಿಕಾರಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ರಾಜ್ಯಾಧ್ಯಕ್ಷ ಭೀಮಸೇನ ಕೊಕರೆ ಮಾತನಾಡಿ, ಕೃಷ್ಣ ನದಿ ಕೊಳ್ಳದ ನೀರಾವರಿ ಯೋಜನೆಗಳು ಕುಂಠಿತವಾಗಿ ಸಾಗುತ್ತಿದ್ದು, ಈಗಾಗಲೇ ಲಕ್ಷಾಂತರ ಎಕರೆ ಜಮೀನು ಕಳೆದುಕೊಂಡು ಯೋಜನೆಗೆ ಸಹಕಾರ ನೀಡಿದ ರೈತರಿಗೆ ಯಾವುದೇ ಉಪಯೋಗ ಇಲ್ಲದಂತಾಗಿದೆ. ಸರಿಯಾಗಿ ಪರಿಹಾರ ಕೂಡ ಸಿಕ್ಕಿಲ್ಲ. ನೀರಾವರಿ ಯೋಜನೆಯೂ ಪೂರ್ಣಗೊಳ್ಳುವ ಹಾಗೆ ಕಾಣಿಸುತ್ತಿಲ್ಲ. ರಾಜ್ಯ ಸರ್ಕಾರ ೨ ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.
ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ೧ನೇ ಹಂತದಲ್ಲಿ ೨೮,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು, ಕಾಮಗಾರಿ ಕುಂಠಿತವಾಗುತ್ತಿದೆ. ಹಾಗೂ ಇನ್ನುಳಿದ ಚಡಚಣ, ಬಬಲೇಶ್ವರ ಹಾಗೂ ವಿಜಯಪುರ ತಾಲೂಕಿನ ೨೧,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗೆ ಟೆಂಡರ್ ಕರೆದು ಸಮರೋಪಾದಿಯಲ್ಲಿ ಕಾರ್ಯ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.ಸರ್ಕಾರ ಕೆರೆ ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯ ಎಲ್ಲ ಕೆರೆ, ಹಳ್ಳದ ನೀರನ್ನು ಹರಿಸಿ ಅಂತರ್ಜಲ ಹೆಚ್ಚಾಗುವಂತೆ ಮಾಡಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ. ಹೊರ್ತಿ ಭಾಗದ ೧೯ ಕೆರೆಗಳು ಸೇರಿದಂತೆ ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಕೆಸಲ ಆಗಬೇಕು. ಇನ್ನೂ ಜಿಲ್ಲೆಯ ಹಲವು ಕೆರೆಗಳಿಗೆ ಕಾಲುವೆ ಮಾಡಲಾಗಿದೆ. ಆದರೆ ಅವು ಸಂಪೂರ್ಣ ಅವೈಜ್ಞಾನಿವಾಗಿದ್ದು, ಕೆರೆಗೆ ನೀರು ಹರಿದು ಬರುತ್ತಿಲ್ಲ. ಕಾಮಗಾರಿ ಕಳಫೆ ಗುಣಮಟ್ಟದಿಂದ ಕೂಡಿದ್ದು, ಕೂಡಲೇ ಎಲ್ಲ ಕೆರೆಗಳಿಗೂ ಸಮರ್ಪಕವಾಗಿ ನೀರು ಹರಿದು ಬರುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಹಳೆ ಕೆರೆಗೆ ನೀರನ್ನು ಶೀಘ್ರದಲ್ಲಿಯೇ ಹರಿಸಬೇಕು. ಚಡಚಣ ಏತ ನೀರಾವರಿ ಯೋಜನೆ ಶೀಘ್ರ ಪ್ರಾರಂಭಿಸಿ, ಸಂಖ, ಭುಯ್ಯಾರ ಕೆರೆ ತುಂಬುವ ಯೋಜನೆಗೆ ಆದಷ್ಟು ಬೇಗ ಚಾಲನೆ ಕೊಡಬೇಕು. ಜಿಲ್ಲೆಯ ಡೋಣಿ ನದಿಯನ್ನು ಹೂಳೆತ್ತಿ ಜಲಾನಯನ ಕಾರ್ಯಕ್ರಮಗಳನ್ನು ಕೈಗೊಂಡು ಬದು, ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲನಗೌಡ ಪಾಟೀಲ, ಉತ್ತರ ಪ್ರಾಂತದ ಉಪಾಧ್ಯಕ್ಷ ಗುರುನಾಥ ಬಗಲಿ, ರಾಜ್ಯ ಕಾರ್ಯಕಾರಣಿ ಸದಸ್ಯರು ಸೇರಿದಂತೆ ಕೃಷ್ಣಾ ನದಿ ಸಂತ್ರಸ್ಥ ರೈತರು ಉಪಸ್ಥಿತರಿದ್ದರು.