ಕನ್ನಡಪ್ರಭ ವಾರ್ತೆ ಮಸ್ಕಿ
ಕೃಷ್ಣ ನದಿಯಿಂದ ಕ್ಚೇತ್ರದ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಲಧಾರೆ ಯೋಜನೆಯ ಜಾಕವೆಲ್ ಕಾಮಗಾರಿ ಶೇ.60 ರಷ್ಟು ಪೂರ್ಣಗೊಂಡಿದೆ, ಆದರೆ, ಫೈಪ್ಲೈನ್ ಅಳವಡಿಕೆ ತೃಪ್ತಿ ತಂದಿಲ್ಲ. ಆದ್ದರಿಂದ ತ್ವರಿತವಾಗಿ ಯೋಜನೆ ಪೂರ್ಣ ಗೊಳಿಸಿ ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಹೇಳಿದರು.ಮಸ್ಕಿ ವಿಧಾನಸಭಾ ಕ್ಷೆತ್ರಕ್ಕೆ ನೀರು ಸರಬರಾಜು ಮಾಡುವುದಕ್ಕಾಗಿ ರತ್ನಾಪೂರ ಪೇಟೆ ಬಳಿ ನಡೆಯುತ್ತಿರುವ ಯೋಜನೆಯ ಜಾಕವೆಲ್ ಕಾಮಗಾರಿ ಪರಿಶೀಲಿಸಿದ ನಂತರ ಅವರು ಮಾಹಿತಿ ನೀಡಿದರು.ಜಾಕವೆಲ್ ಕಾಮಗಾರಿ ವೇಗದಲ್ಲಿ ನಡೆಯುತ್ತಿದೆ. ಕಾಮಗಾರಿ ಗುಣಮಟ್ಟ ವೂ ತೃಪ್ತಿ ತಂದಿದೆ. ಇನ್ನೂ ಶೇ.40 ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಭರವಸೆ ನೀಡಿದ್ದಾರೆ ಎಂದರು.
ಜಾಕವೆಲ್ನಿಂದ ಕ್ಷೇತ್ರದ ನಗರ ಹಳ್ಳಿಗಳಿಗೆ ಶುದ್ಧ ನೀರು ಕೊಡಬೇಕಾಗಿದೆ. ಆದರೆ, ಪೈಪ್ಲೈನ್ ಕಾಮಗಾರಿ ವಿಳಂಬವಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.ಜಲ ಜೀವನ್ ಮಿಷನ್ ಮೂಲಕ ಮನೆ ಮನೆಗಳಿಗೆ ನೀರು ಕೊಡುವುದು ಯೋಜನೆ ಮೂಲ ಉದ್ದೇಶ. ಆದರೆ, ಕೆಲವೊಂದು ಕಡೆ ಪೈಪ್ಲೈನ್ ಕಾಮಗಾರಿ ಕಳಪೆಯಾಗಿದೆ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೈಬುಸಾಬ್ ಮುದ್ದಾಪೂರ, ಮುಖಂಡ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಕಾಂಗ್ರೆಸ್ ನ ಗ್ರಾಮೀಣ ಬ್ಲಾಕ್ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ ಸೇರಿದಂತೆ ಯೋಜನೆಯ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ಇದ್ದರು.----
ಬಾಕ್ಸ್:ಅಧಿಕಾರಿಗಳಿಂದ ಮಾಹಿತಿ
ಜಾಕವೆಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಕಾಮಗಾರಿ ಗುಣಮಟ್ಟ ಪರಿಶೀಲಿಸಿದರು. ಯೋಜನೆಗೆ ಅಳವಡಿಸುವ ಪೈಪ್ಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕರನ್ನು ಅಧಿಕಾರಿಗಳು ಹೂ ಗುಚ್ಚ ನೀಡಿ ಸ್ವಾಗತಿಸಿಕೊಂಡರು.--------
ಕನ್ನಾಪೂರ ಪೇಟೆ ಬಳಿ ನಡೆದಿರುವ ಜಾಕವೆಲ್ ಕಾಮಗಾರಿ ಗುಣಮಟ್ಟ ತೃಪ್ತಿ ತಂದಿದೆ. ಪೈಪ್ಲೈನ್ ಅಳವಡಿಕೆ ತೃಪ್ತಿಕರವಾಗಿಲ್ಲ. ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ.- ಆರ್. ಬಸನಗೌಡ ತುರ್ವಿಹಾಳ, ಶಾಸಕ