ಕೃಷಿ ಇಲಾಖೆಯಲ್ಲಿ ಸಮಗ್ರ ಬದಲಾವಣೆ

KannadaprabhaNewsNetwork | Published : Jun 18, 2025 12:01 AM

ಕೃಷಿ ಇಲಾಖೆಯಲ್ಲಿ ಸಮಗ್ರವಾಗಿ ಬದಲಾವಣೆ ತರಲಾಗುತ್ತಿದ್ದು, 1000 ಅಧಿಕಾರಿ, ಸಿಬ್ಬಂದಿ ನೇಮಕಾತಿಗೆ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ನೋಟಿಪಿಕೇಷನ್ ಹೊರಡಿಸಲಾಗುವುದು

ಹಳಿಯಾಳ: ರಾಜ್ಯದ ಕೃಷಿ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದೆ ಎಂದು‌ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಹೇಳಿದರು.

ಅವರು ಮಂಗಳವಾರ ಹಳಿಯಾಳದ ಪುರಭವನದಲ್ಲಿ ಮುಂಗಾರು ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ ಹಾಗೂ ಕೃಷಿ ಯಂತ್ರೋಪಕರಣ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ಇಲಾಖೆಯಲ್ಲಿ ಸಮಗ್ರವಾಗಿ ಬದಲಾವಣೆ ತರಲಾಗುತ್ತಿದ್ದು, 1000 ಅಧಿಕಾರಿ, ಸಿಬ್ಬಂದಿ ನೇಮಕಾತಿಗೆ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ನೋಟಿಪಿಕೇಷನ್ ಹೊರಡಿಸಲಾಗುವುದು ಹಾಗೂ 700 ಮಂದಿಗೆ ಈಗಾಗಲೇ ಮುಂಬಡ್ತಿ ನೀಡಲಾಗಿದೆ ಎಂದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 24 ಸಾವಿರ ಕೃಷಿ ಹೊಂಡ ನಿರ್ಮಿಸುವ ಗುರಿ‌ ಹೊಂದಲಾಗಿದೆ. ಕಳೆದ 2 ವರ್ಷದಲ್ಲಿ ರೈತರಿಗೆ 344 ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಕಬ್ಬು ಕಟಾವು ಯಂತ್ರಗಳ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ₹50 ಲಕ್ಷ ಹಾಗೂ ಸಾಮಾನ್ಯ ವರ್ಗದ ರೈತರಿಗೆ ₹40 ಲಕ್ಷ ಸಬ್ಸಿಡಿ ನೀಡಲಾಗುತ್ತಿದೆ. ಸ್ಪಿಂಕ್ಲರ್ ಗೆ ಶೇ.90 ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಎಲ್ಲ ರೈತರು ಪಡೆಯಬೇಕು ಎಂದರು.

ಸಮಗ್ರ ಕೃಷಿ ಮಾಡುವ ಅನೇಕ ರೈತರ ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಭೂಮಿಯನ್ನು ನಂಬಿ ಸರ್ಕಾರದ ಸವಲತ್ತು ಪಡೆದುಕೊಂಡು ಎಲ್ಲ ರೈತರು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ 5 ಗ್ಯಾರಂಟಿ‌ ಯೋಜನೆಯನ್ನು ಜನರಿಗೆ ನೀಡಿ ಅವರ ಬದುಕನ್ನು ಹಸನು ಮಾಡಲಾಗಿದೆ. ವರ್ಷಕ್ಕೆ 50 ಸಾವಿರ ಕೋಟಿಯಂತೆ 5 ವರ್ಷಕ್ಕೆ 250 ಸಾವಿರ ಕೋಟಿಗಳನ್ನು ಗ್ಯಾರಂಟಿ ಯೋಜನೆ ಗಳಿಗೆ ಮೀಸಲಿಡಲಾಗಿದೆ. ಇದರ ಜತೆಗೆ ರಾಜ್ಯದಲ್ಲಿ ಇತರೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ರೈತರು ತಮಗೆ ವಿತರಿಸಿರುವ ಕೃಷಿ ಯಂತ್ರೋಪಕರಣ ಬಳಸಿಕೊಂಡು ಆರ್ಥಿಕ ಸುಧಾರಣೆಯ ಜತೆಗೆ ಕೃಷಿ ಉತ್ಪನ್ನ ಹೆಚ್ಚು ಮಾಡಿಕೊಳ್ಳಬೇಕು. ಬತ್ತ, ಜೋಳದ ಬೆಳೆಗಳ ಇಳುವರಿ ಕಡಿಮೆಯಾದಂತೆ ಇಲ್ಲಿನ ರೈತರು ಕಬ್ಬು ಬೆಳೆಯಲು ಪ್ರಾರಂಭಿಸಿದರು. ಇದರಿಂದ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ತೆರೆಯಲಾಯಿತು. ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಪಡೆದುಕೊಂಡು ರೈತರು ಸಾಮಾಜಿಕ, ಶೈಕ್ಷಣಿಕ‌ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾದರೆ ದೇಶದ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

2025-26ನೇ ಸಾಲಿನ ಬೆಳೆ ಸಮೀಕ್ಷೆ ಕರಪತ್ರ ಬಿಡುಗಡೆಗೊಳಿಸಲಾಯಿತು.

ಕೃಷಿ ಇಲಾಖೆ ಆಯುಕ್ತ ವೈ.ಎಸ್‌.ಪಾಟೀಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ ಪುತ್ರ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಹಳಿಯಾಳ‌ ಪುರಸಭೆ ಅಧ್ಯಕ್ಷೆ ಪಾರ್ವತಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್ ಮತ್ತಿತರು ಇದ್ದರು.