ಸದೃಢ ಆಡಳಿತಕ್ಕಾಗಿ ಕಡ್ಡಾಯ ಮತದಾನ ಅವಶ್ಯ

KannadaprabhaNewsNetwork | Published : Apr 19, 2024 1:05 AM

ಸಾರಾಂಶ

ಡಂಬಳ ಹಾಗೂ ಅತ್ತಿಕಟ್ಟಿ ಗ್ರಾಮಗಳಲ್ಲೂ ಕಡಿಮೆ ಮತದಾನವಾಗಿದೆ. ಈ ಎಲ್ಲ ಕಡೆ ಈ ಬಾರಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು

ಮುಂಡರಗಿ: ಮತದಾನ ಅತ್ಯಮೂಲ್ಯವಾದ ಹಕ್ಕು, ಉತ್ತಮ ನಾಳೆಗಳಿಗಾಗಿ ಹಾಗೂ ಸದೃಢ ಆಡಳಿತಕ್ಕಾಗಿ ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಹೇಳಿದರು.

ಅವರು ಬುಧವಾರ ತಾಪಂ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಕಡ್ಡಾಯ ಮತದಾನಕ್ಕಾಗಿ ಬಿಸಿಯೂಟ ಸಿಬ್ಬಂದಿ ಕಾಲ್ನಡಿಗೆ ಜಾಥಾ ಹಾಗೂ ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಯ ಮನೆ ಮನೆ ಭೇಟಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ತಾಲೂಕಿನ ಪಟ್ಟಣದ ಅನ್ನದಾನೇಶ್ವರ ನಗರದ ಮತಗಟ್ಟೆ ಸಂಖ್ಯೆ 42,43,44,45,46,47ಗಳಲ್ಲಿ ಕಡಿಮೆ ಮತದಾನವಾಗಿದೆ. ಅಲ್ಲದೇ ಡಂಬಳ ಹಾಗೂ ಅತ್ತಿಕಟ್ಟಿ ಗ್ರಾಮಗಳಲ್ಲೂ ಕಡಿಮೆ ಮತದಾನವಾಗಿದೆ. ಈ ಎಲ್ಲ ಕಡೆ ಈ ಬಾರಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು. ಅದಕ್ಕಾಗಿ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬಿಸಿಯೂಟದ ಸಿಬ್ಬಂದಿ ಮಹಿಳೆಯರ ಕಾಲ್ನಡಿಗೆ ಜಾಥಾ ಹಾಗೂ ಮನೆ ಮನೆ ಭೇಟಿ ನೀಡುವ ಮೂಲಕ ಎಲ್ಲರೂ ತಪ್ಪದೇ ಮತ ನೀಡುವಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಪಟ್ಟಣದ ತಾಪಂ ಆವರಣದಿಂದ ಆರಂಭವಾದ ಕಾಲ್ನಡಿಗೆ ಜಾಗೃತಿ ಜಾಥಾ ಕಡ್ಡಾಯ ಮತದಾನದ ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸುವ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಕೊಪ್ಪಳ ಕ್ರಾಸ್ ನಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕಡ್ಡಾಯ ಮತದಾನಕ್ಕೆ ಘೋಷಣೆಗಳ ಮೂಲಕ ಕರೆ ನೀಡಿದರು.

ಜಾಥಾದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರು ಕೈಯಲ್ಲಿ ಕಡ್ಡಾಯ ಮತದಾನದ ಘೋಷವಾಕ್ಯದ ಪ್ಲೇ ಕಾರ್ಡ್ ಹಿಡಿದು ಪಾಲ್ಗೊಂಡಿದ್ದು, ಕಡ್ಡಾಯವಾಗಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಪ್ರೇರೇಪಿಸುವಂತಿದ್ದವು.

ನಂತರ ಕಡಿಮೆ ಮತದಾನವಾದ ಅನ್ನದಾನೇಶ್ವರ ನಗರದ 42,43,44,45,,46,47ನೇ ಮತಗಟ್ಟೆಗಳ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ ತಪ್ಪದೇ ಮತ ಚಲಾಯಿಸುವಂತೆ ಮನವರಿಕೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಬಿಇಒ ಎಚ್.ಎಂ. ಫಡ್ನೇಶಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಡಾ. ರಂಜಿತಾ ತಳಗೇರಿ, ಮಹೇಶ ಜಕ್ಕಲಿ, ಮಹಾಂತೇಶ ಖೋತ, ಎಚ್,ಎಂ ಕಾತರಕಿ, ಸಿ.ಬಿ.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article