ಕನ್ನಡಪ್ರಭ ವಾರ್ತೆ ಮೈಸೂರು
ಸಮರ್ಥನಂ ಅಂಗವಿಕಲರ ಸಂಸ್ಥೆಯು ಸಿಗ್ನಿಫೈ ಕಂಪನಿಯ ಸಹಾಯದೊಂದಿಗೆ ಜಗ್ ಮಗ್ ಪಾಠಶಾಲಾ ಸಿ.ಎಸ್.ಆರ್ ಯೋಜನೆಯಲ್ಲಿ ಮೈಸೂರಿನ ತಿಲಕ್ ನಗರದಲ್ಲಿರುವ ಸರ್ಕಾರಿ ಅಂಧರ ಮಕ್ಕಳ ಪಾಠಶಾಲೆಗೆ ಕಂಪ್ಯೂಟರ್ ಲ್ಯಾಬ್ ಯನ್ನು ಕೊಡುಗೆಯಾಗಿ ನೀಡಿದೆ.ಈ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ. ಮೋಹನ್ ಮಾತನಾಡಿ, ವಿಶೇಷಚೇತನರು ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು. ತಂತ್ರಜ್ಞಾನ ವಿಕಲಚೇತನರ ಶೈಕ್ಷಣಿಕ ವೃದ್ಧಿಗೆ ಸಹಕಾರಿಯಾಗುತ್ತದೆ. ಇದರ ಬಳಕೆ ಎಲ್ಲರಿಗೂ ದೊರಕಬೇಕು ಎಂದು ತಿಳಿಸಿದರು.
ಸಮರ್ಥನಂ ಸಂಸ್ಥೆಯ ಮುಖ್ಯಸ್ಥ ಶಿವರಾಂ ದೇಶಪಾಂಡೆ ಮಾತನಾಡಿ, ಸಂಸ್ಥೆಯು ದೇಶಾದ್ಯಂತ 16 ಅಂಧ ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್ ಅನುಷ್ಟಾನ ಮಾಡಲಾಗಿದೆ. ದೇಶಾದ್ಯಂತ 10 ಸಾವಿರಕ್ಕಿಂತ ಹೆಚ್ಚು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಸತಿ ಯೋಜನೆ, ಸಾಧನ ಸಲಕರಣೆಗಳನ್ನು ನೀಡಿ ಅವರ ಉನ್ನತ ಶಿಕ್ಷಣಕ್ಕೆ ನೆರವು ನೀಡುತ್ತಿದೆ ಎಂದರು.ಮನ್ನಾರ್ ಗ್ರೂಪ್ಸ್ ಮಾಲೀಕ ರಮಣ ಮನ್ನಾರ್ ಮಾತನಾಡಿ, ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ನೀಡುವ ಯೋಜನೆ ಅಥವಾ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಧರ ಶಾಲೆಯ ಅಧೀಕ್ಷಕ ಸತೀಶ್ ಕ್ಯಾತನಹಳ್ಳಿ ಮಾತನಾಡಿ, ದಿನೇ ದಿನೆ ಬೆಳೆಯುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಕಲಚೇತನರು ತಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯ ಬಳಸಿಕೊಂಡು ಬದುಕಿನಲ್ಲಿ ಸಾಧಿಸಬೇಕು ಎಂದರು.ಸಿಗ್ನಿಫೈ ಕಂಪನಿಯ ಇಮ್ರಾನ್ ಖಾನ್, ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗೀಯ ಸಂಯೋಜಕ ಶಿವರಾಜು, ಸದ್ರನ್ ಸ್ಟಾರ್ ಕಂಟ್ರಕ್ಷನ್ ನ ಭರತ್, ಶ್ರೀಲೀಲಾ, ಬ್ರಮರಾಂಭ, ಪದ್ಮಾ, ಬೃಂದಾ ಬಾಯಿ, ಶಿಕ್ಷಕ ಅರುಣ್ ಕುಮಾರ್ ಮೊದಲಾದವರು ಇದ್ದರು.