ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕಟ್ಟೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗ್ರಾಪಂ ಜೆಡಿಎಸ್ ಬೆಂಬಲಿತ ಸದಸ್ಯೆ ನಾಗರತ್ನ ಹಾಗೂ ಡಿ.ಕೃಷ್ಣೇಗೌಡರು ಉಚಿತವಾಗಿ ಎರಡು ಕಂಪ್ಯೂಟರ್ ಹಾಗೂ ಪ್ರಿಂಟರ್ ವಿತರಿಸಿದರು.ಗ್ರಾಪಂ ಸದಸ್ಯೆ ನಾಗರತ್ನ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡ ವಿದ್ಯಾರ್ಥಿಗಳೇ ಓದುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ನನಗೆ ಬಂದ ಗ್ರಾಪಂ ಸದಸ್ಯರ ಗೌರವ ಧನವನ್ನು ಸಂಗ್ರಹಿಸಿ ನಮ್ಮೂರು ಶಾಲೆ ಮಕ್ಕಳಿಗೆ ವೈಯುಕ್ತಿಕವಾಗಿ ಕಂಪ್ಯೂಟರ್ ಹಾಗೂ ಪ್ರಿಂಟರ್ ವಿತರಣೆ ಮಾಡಿದ್ದೇವೆ ಎಂದರು.
ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದಿರುವ ಸಾಕಷ್ಟು ಮಂದಿ ಸಮಾಜದಲ್ಲಿ ದೊಡ್ಡದೊಡ್ಡ ಸ್ಥಾನಕ್ಕೇರಿದ್ದಾರೆ. ಹಾಗಾಗಿ ಮಕ್ಕಳು ಸರಕಾರಿ ಶಾಲೆಯ ಬಗ್ಗೆ ಇರುವ ಕೀಳಿರಿಮೆಯನ್ನು ಬಿಟ್ಟು ಸೌಲಭ್ಯಗಳನ್ನು ಪಡೆದು ವಿದ್ಯಾಭ್ಯಾಸ ನಡೆಸಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಗ್ರಾಪಂ ಅಧ್ಯಕ್ಷ ರಮೇಶ್ ಅವರು ಸರಕಾರಿ ಶಾಲೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಉಚಿತವಾಗಿ ಟೇಬಲ್ ವಿತರಿಸಿದರು. ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ರಜಿನಿ, ಮುಖ್ಯಶಿಕ್ಷಕಿ ಮಂಗಳಮ್ಮ, ಸಹ ಶಿಕ್ಷಕರಾದ ಎ.ಜಿ.ಮೀನಾಕ್ಷಿ, ಸರೋಜಮ್ಮ, ಬಸವರಾಜು, ಎಚ್.ಸಿ.ನಿರಂಜನ್, ಶಾಲಾ ಉನ್ನತೀಕರಣ ಸಮಿತಿ ಅಧ್ಯಕ್ಷ ಕುಮಾರ್, ಪಿಡಿಓ ಕುಮಾರ್, ಜೆಡಿಎಸ್ ಮುಖಂಡ ಡಿ.ಕೃಷ್ಣೇಗೌಡ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ಜೂ.24 ರಂದು ಜನ ಸಂಪರ್ಕ ಸಭೆಮಂಡ್ಯ: ಮಂಡ್ಯ ವಿಭಾಗ ವ್ಯಾಪ್ತಿಯ ಮಂಡ್ಯ ಉಪ ವಿಭಾಗ, ಕೊತ್ತತ್ತಿ ಉಪ ವಿಭಾಗ ಮತ್ತು ಕೆರಗೋಡು ಉಪ-ವಿಭಾಗದ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗಳ ಕುರಿತು ಚರ್ಚಿಸಲು ವಿದ್ಯುತ್ ಗ್ರಾಹಕರ ಕುಂದು ಕೊರತೆ ವಿಚಾರಣೆಯ ಜನ ಸಂಪರ್ಕ ಸಭೆಯನ್ನು ಮಂಡ್ಯ ವೃತ್ತದ ಇಂಜಿನಿಯರ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಮಂಡ್ಯ ವಿಭಾಗ ಕಚೇರಿ ಆವರಣದಲ್ಲಿ ಜೂನ್ 24 ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಹಕರು, ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಬಹುದು ಎಂದು ಚಾವಿಸನಿನಿ, ಕಾ ಮತ್ತು ಪಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇಂದು ಆಟೋ ನಿಲ್ದಾಣ ನಿರ್ಮಾಣಕ್ಕೆ ಎಚ್ಡಿಕೆ ಶಂಕುಸ್ಥಾಪನೆ
ಮಂಡ್ಯ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಜೂ.22 ರಂದು ನಗರಕ್ಕೆ ಭೇಟಿ ನೀಡಿದ ನಗರದ ಕೆಎಸ್ ಆರ್ ಟಿಸಿ (ಸಾರಿಗೆ ಬಸ್ ನಿಲ್ದಾಣ) ಎದುರು ಆಟೋ ನಿಲ್ದಾಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.