ಗ್ಯಾರಂಟಿಗಾಗಿ ಪರಿಶಿಷ್ಟರ ಹಣ ಬಳಕೆಗೆ ಖಂಡನೆ

KannadaprabhaNewsNetwork |  
Published : Aug 02, 2024, 12:52 AM IST
1ಕೆಡಿವಿಜಿ3-ದಾವಣಗೆರೆ ಎಸಿ ಕಚೇರಿ ಬಳಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾ ಸಮಿತಿಯು ಆವರಗೆರೆ ವಾಸು ನೇತೃತ್ವದಲ್ಲಿ ಪ್ರತಿಭಟಿಸಿ, ಅಧಿಕಾರಿಗಳ ಮುಖಾಂತರ ಸಿಎಂ, ಸಮಾಜ ಕಲ್ಯಾಣ ಸಚಿವರಿಗೆ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಹಣವನ್ನು ಅನ್ಯ ಯೋಜನೆಗಳಿಗೆ ಬಳಸುವುದನ್ನು ಹಾಗೂ ವರ್ಗಾವಣೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಸೇರಿ ಅನ್ಯ ಯೋಜನೆಗಳಿಗೆ ಬಳಸುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನಾ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟಿಸಲಾಯಿತು.

ನಗರದ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಸಂಘಟನೆ ರಾಜ್ಯ ಸಂಚಾಲಕ ಆವರಗೆರೆ ವಾಸು ಇತರರ ನೇತೃತ್ವದಲ್ಲಿ ಪ್ರತಿಭಟಿಸಿದ ಮುಖಂಡರು, ಕಾರ್ಯಕರ್ತರು ನಂತರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರಿಗೆ ಮನವಿ ಪತ್ರ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಆವರಗೆರೆ ವಾಸು, ನಮ್ಮ ಹಣ ನಮ್ಮ ಹಕ್ಕು ಘೋಷಣೆಯೊಂದಿಗೆ ಭೋವಿ, ವಾಲ್ಮೀಕಿ ನಿಗಮಗಳು ಸೇರಿ ವಿವಿಧ ನಿಗಮಗಳಲ್ಲಿ ಆಗಿರುವ ಭ್ರಷ್ಟಾಚಾರವನ್ನು ಖಂಡಿಸುತ್ತೇವೆ. ದಲಿತರು, ದಮನಿತರ ಮೇಲಾಗುತ್ತಿರುವ ದೌರ್ಜನ್ಯ ನಿಲ್ಲಿಸುವಂತೆ ತಮ್ಮ ಜೀವನವಿಡೀ ಹೋರಾಡಿದ ಕ್ರಾಂತಿಕಾರಿ ಕವಿ ಅಣ್ಣಾಭಾವು ಸಾಠೆ ಜಯಂತಿ ಅಂಗವಾಗಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನವು ರಾಜ್ಯವ್ಯಾಪಿ ಇಂದು ಎಸಿ ಕಚೇರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಹಣವನ್ನು ಅನ್ಯ ಯೋಜನೆಗಳಿಗೆ ಬಳಸುವುದನ್ನು ಹಾಗೂ ವರ್ಗಾವಣೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಮೂಲಕ ಮೀಸಲಿಟ್ಟ ಹಣ ವರ್ಗಾವಣೆಗೆ ಸಹಕಾರಿಯಾಗುತ್ತಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಸೆಕ್ಷನ್‌ 7(ಸಿ) ಮತ್ತು 7(ಡಿ)ಯನ್ನು ತಕ್ಷಣ ರದ್ಧು ಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಬಡ ಜನರಿಗೆ ಮನೆ ಕಟ್ಟಿಕೊಳ್ಳಲು ವಿವಿಧ ವಸತಿ ಯೋಜನೆಗಳ ಮೂಲಕ ಕನಿಷ್ಟ 5 ಲಕ್ಷ ರು. ನಿಗದಿಪಡಿಸಬೇಕು. ಮನೆ ಕಟ್ಟಿಕೊಳ್ಳಲು ನಿವೇಶನ ಇಲ್ಲದ ಪರಿಶಿಷ್ಟರಿಗೆ ಸರ್ಕಾರಿ ಮತ್ತು ಖಾಸಗಿ ಬಡಾವಣೆಗಳಲ್ಲಿ ಜನಸಂಖ್ಯೆ ಅನುಪಾತದಲ್ಲಿ ನಿವೇಶನ ಮೀಸಲಿಡುವಂತೆ ನಿಯಮ ರೂಪಿಸಿ, ಅವುಗಳನ್ನು ಕಡ್ಡಾಯವಾಗಿ ಜಾರಿಗೊಳ್ಳುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಭೋವಿ, ವಾಲ್ಮೀಕಿ ಸೇರಿ ತಳ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆ ನಡೆಸಿ, ತಪ್ಪಿತಸ್ತ ಅಧಿಕಾರಿಗಳು, ಜನ ಪ್ರತಿನಿಧಿಗಳು ವಿರುದ್ಧ ಅಟ್ರಾಸಿಟಿ ಸೇರಿ ಇತರೆ ಕ್ರಿಮಿನಲ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ರಾಮನಗರದ ಘಟನೆ ಸೇರಿ ದಲಿತರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ವಿಫಲವಾಗಿದೆ. ದಲಿತರ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಂಡು, ಅಂತಹ ಪ್ರಕರಣ ಮರುಕಳಿಸದಂತಹ ವಾತಾವರಣ ಕಲ್ಪಿಸಲಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾನಿಲಯ ಸೇರಿ ಇತರೆ ಶೈಕ್ಷಣಿಕ ಸಂಸ್ಥೆಗಳು ಮತ್ತಿತರೆ ಕಡೆಗಳಲ್ಲಿ ಆರೆಸ್ಸೆಸ್‌ ಚಟುವಟಿಕೆ ಹತ್ತಿಕ್ಕಲು ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರವು ಸರ್ಕಾರಿ ನೌಕರರು ಆರೆಸ್ಸೆಸ್‌ ಚಟುವಟಿಕೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದು, ಸರ್ಕಾರಿ ನೌಕರರು ತಟಸ್ಥವಾಗಿರಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆಯಾಗಿದೆ. ರಾಜ್ಯ ಸರ್ಕಾರವು ಇದನ್ನು ವಿರೋಧಿಸಿ, ರಾಜ್ಯದ ಸರ್ಕಾರಿ ನೌಕರರನ್ನು ಒಳಗೊಂಡ ಕಾರ್ಯಾಂಗವು ಸಂವಿಧಾನದ ಆಶಯದಂತೆ ತಟಸ್ಥವಾಗಿರುವಂತೆ ನೋಡಿಕೊಳ್ಳಲಿ ಎಂದು ಆವರಗೆರೆ ವಾಸು ಒತ್ತಾಯಿಸಿದರು.

ಸಂಘಟನೆ ರುದ್ರೇಶ, ಮಲ್ಲೇಶ, ಹನುಮಂತ ನಿಟುವಳ್ಳಿ, ಹರ್ಷ, ಹನುಮಂತ ನರಗನಹಳ್ಳಿ, ರಾಜು ಕೆರೆಯಾಗಳಹಳ್ಳಿ, ಬಸವರಾಜ ನಿಟುವಳ್ಳಿ, ಎಸ್‌.ಚಂದ್ರಪ್ಪ, ಸುರೇಶ, ಉಚ್ಚೆಂಗೆಪ್ಪ, ಚಿನ್ನಪ್ಪ, ವಿ.ಲಕ್ಷ್ಮಣ, ಪರಶುರಾಮ, ರಂಗಪ್ಪ ಫೋಟ, ಸಿ.ರಮೇಶ, ಚೌಡಪ್ಪ, ಭರತ್, ನಂದೀಶ, ಸಿ.ಗುರುಮೂರ್ತಿ, ಮೋಹನ, ರೇಣುಕಮ್ಮ, ಮೈಲಮ್ಮ, ಕವಿತಾ, ಶೀಲಮ್ಮ ಇತರರು ಇದ್ದರು.

............

ದಾವಣಗೆರೆ ಎಸಿ ಕಚೇರಿ ಬಳಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾ ಸಮಿತಿಯು ಆವರಗೆರೆ ವಾಸು ನೇತೃತ್ವದಲ್ಲಿ ಪ್ರತಿಭಟಿಸಿ, ಅಧಿಕಾರಿಗಳ ಮುಖಾಂತರ ಸಿಎಂ, ಸಮಾಜ ಕಲ್ಯಾಣ ಸಚಿವರಿಗೆ ಮನವಿ ಅರ್ಪಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ