ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರು, ಮೃತರ ಕುಟುಂಬದವರು ನಿಧನರಾದವರಿಗೆ ಸಂತಾಪ ಸೂಚಿಸಿದರು.
ಮೃತ ಮಧುಸೂದನ್ ಅವರ ಸಹೋದರ ಡಾ. ಚಂದ್ರಶೇಖರ್ ಮಾತನಾಡಿ, ಪತ್ರಕರ್ತರ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಆದರೆ ಆರೋಗ್ಯದ ಕಡೆಗೆ ಗಮನ ನೀಡದೆ ಅನೇಕ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ. ನನ್ನ ತಮ್ಮನು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡದೆ ಇಂತಹ ಸ್ಥಿತಿ ಉಂಟಾಗಿದೆ ಎಂದು ದುಃತತಪ್ತರಾದರು.ಪತ್ರಕರ್ತರಿಗೆ ಆರೋಗ್ಯ ವಿಮೆ, ಆರ್ಥಿಕ ಬೆಂಬಲದಂತಹ ಕಾರ್ಯ ಮಾಡಿಕೊಳ್ಳುವುದು ಉತ್ತಮ. ಒತ್ತಡದ ಜೀವನದಿಂದ ಹೊರ ಬರಲು ದೈಹಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಆಹಾರದಲ್ಲಿಯೇ ಔಷಧ ಇರುವುದರಿಂದ ಪ್ರತಿಯೊಂದಕ್ಕೂ ಮಾತ್ರೆಗಳ ಮೊರೆ ಹೋಗದೆ, ಆಹಾರ, ವ್ಯಾಯಾಮದಲ್ಲಿ ಆರೋಗ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೃತ ಸಂತೋಷ್ ಅವರ ಪತ್ನಿ ಸುಜಾತಾ ಮಾತನಾಡಿ, ಆರೋಗ್ಯ ಕೆಟ್ಟಾಗಲೇ ಜೀವನದ ನಿಜ ಅರ್ಥ ತಿಳಿಯುವುದು. ಹಾಗಾಗಿ ಈಗಲೇ ಎಲ್ಲರೂ ಎಚ್ಚೆತ್ತು ಆರೋಗ್ಯ ಕಾಪಾಡಿಕೊಳ್ಳಬೇಕು. ನನ್ನ ಚಿಕ್ಕ ಮಕ್ಕಳನ್ನು ಬೆಳೆಸಿ ವಿದ್ಯಾಭ್ಯಾಸ, ಭವಿಷ್ಯದ ಚಿಂತೆ ಕಾಡುತ್ತಿದೆ ಎಂದು ಹೇಳಿದರು.
ಕುಟುಂಬಕ್ಕೆ ನೆರವು
ಹಿರಿಯ ಪತ್ರಕರ್ತ ಕೆ.ಪಿ. ನಾಗರಾಜ್ ಮಾತನಾಡಿ, ಮೃತಪಟ್ಟ ನಾಲ್ವರು ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ದಾನಿಗಳು ಮುಂದೆ ಬಂದಿದ್ದಾರೆ. ಅವರ ಸಹಕಾರರಿಂದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳಲಾಗುವುದು. ಆರ್ಥಿಕ, ಆರೋಗ್ಯ, ವೃತ್ತಿ ಹಾಗೂ ಕೌಟುಂಬಿಕ ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.ಹಿರಿಯ ಪತ್ರಕರ್ತರಾದ ರಾಮ್, ಸಿ.ಎಂ. ಕಿರಣ್ ಕುಮಾರ್, ಜಯಂತ್, ರಂಗಸ್ವಾಮಿ ಮಾದಾಪುರ, ಎಸ್.ಆರ್. ಮಧುಸೂದನ್, ವಾಟಾಳ್ ಆನಂದ್, ಸುಧೀಂದ್ರ, ಮಹದೇವಸ್ವಾಮಿ ಮೊದಲಾದವರು ಸಂತಾಪ ಸೂಚಿಸಿದರು.
ಬಾಕ್ಸ್ 25 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರಕನ್ನಡಪ್ರಭ ವಾರ್ತೆ ಮೈಸೂರು
ಪತ್ರಕರ್ತರು ಹಾಗೂ ಅವರ ಕುಟುಂಬದವರಿಗಾಗಿ ಜೂ. 25 ರಂದು ಜಯದೇವ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ಆಯೋಜಿಸಲಾಗುವುದು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಟಿ. ರವಿಕುಮಾರ್ ತಿಳಿಸಿದರು. ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ವೃತ್ತಿನಿರತ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದಿರಬೇಕು. ಆದರೆ ಕೆಲಸದ ಒತ್ತಡದಿಂದಾಗಿ ಆಹಾರ, ಆರೋಗ್ಯದ ಕಡೆಗೆ ಗಮನ ನೀಡುವುದು ಕಡಿಮೆ ಅಗಿ ಕಿರಿಯ ವಯಸ್ಸಿನಲ್ಲಿಯೇ ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.