)
ಕನ್ನಡಪ್ರಭವಾರ್ತೆ ಸಕಲೇಶಪುರ
ಕಸ್ತೂರಿ ರಂಗನ್ ವರದಿ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯರು ಮಾತನಾಡಿ, ಮಲೆನಾಡಿನ ಜನರು ಈಗಾಗಲೇ ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿ ಬಳಲಿದ್ದಾರೆ. ಕೆಲವು ಬಾರಿ ಅತಿ ಮಳೆ ಸುರಿದರೆ ಇದೀಗ ಮಳೆಯಿಲ್ಲದೆ ಕಾಫಿ ಮೆಣಸು ಏಲಕ್ಕಿ ತೋಟಗಳು ಒಣಗುತ್ತಿವೆ. ಮತ್ತೊಂದೆಡೆ ಕಾಡಾನೆ ಸಮಸ್ಯೆಯಿಂದ ಯಾರ ಪ್ರಾಣ ಯಾವಾಗ ಹಾರಿಹೋಗುತ್ತದೋ ಎನ್ನುವ ಭಯದಲ್ಲೇ ಜೀವನ ಮಾಡುತ್ತಿದ್ದೇವೆ. ಕಾಡು ಪ್ರಾಣಿಗಳಿಂದ ಆಗುವ ಬೆಳೆ ಹಾನಿಗೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಮೂರು ಕಾಸಿನದ್ದು. ಇನ್ನು ಜೀವ ಹೋದರೆ ಹದಿನೈದು ಲಕ್ಷ ರು. ನೀಡುತ್ತಾರೆ. ಆದರೆ, ಜೀವಕ್ಕಿಂತ ಹಣ ಮುಖ್ಯವಲ್ಲ ಎನ್ನುವುದನ್ನು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದೇವೆ. ಅರಣ್ಯದಲ್ಲೇ ಹುಟ್ಟಿ ಬೆಳೆದಿರುವ ಮಲೆನಾಡಿಗರಿಂದ ಅರಣ್ಯಕ್ಕೆ ಈವರೆಗೆ ಯಾವುದೇ ಹಾನಿಯಾಗಿಲ್ಲ. ಸರ್ಕಾರದಿಂದಲೇ ಅದೂ ಇದೂ ಯೋಜನೆ ಅಂತಾ ಪಶ್ಚಿಮಘಟ್ಟಕ್ಕೆ ಹಾನಿ ಉಂಟಾಗಿದೆ. ಹಾಗಾಗಿ ಎಲ್ಲೋ ಕುಳಿತು ಮಾಡಿದ ಕಸ್ತೂರಿ ರಂಗನ್ ವರದಿ ಮಲೆನಾಡಿಗರಿಗೆ ಮರಣ ಶಾಸನವೇ ಆಗುತ್ತದೆ. ಹಾಗಾಗಿ ಈ ವರದಿಯ ಬದಲಾಗಿ ಪಶ್ಚಿಮಘಟ್ಟದಲ್ಲಿ ಮರು ಸರ್ವೆ ಆಗಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
------ಇಂದಿನಿಂದ ವಿಶೇಷ ಅಧಿವೇಶನ
ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಸೋಮವಾರದಿಂದ ವಿಶೇಷ ಅಧಿವೇಶನ ನಡೆಸಲಾಗುವುದು. ಅಲ್ಲಿ ವರದಿ ಹಾಗೂ ರೈತರ ಸಮಸ್ಯೆಗಳ ಬಗ್ಗೆಯೇ ಪ್ರತ್ಯೇಕವಾಗಿ ಚರ್ಚಿಸಲಾಗುವುದು. ಹಾಗಾಗಿ ಶಾಸಕರು, ಸಚಿವರು ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರ ಟೀಕೆಯನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ. ಅವರು ಇರುವುದೇ ಟೀಕೆ ಮಾಡಲಿಕ್ಕೆ ಎಂದಮೇಲೆ ನಾವು ಅದನ್ನು ಮುಕ್ತವಾಗಿ ಸ್ವಾಗತಿಸಬೇಕಾಗುತ್ತದೆ ಎಂದು ನಯವಾಗಿಯೇ ತಿರುಗೇಟು ನೀಡಿದರು.