ಚನ್ನಪಟ್ಟಣ: ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ, ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶ, ಅತಿಥಿ ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಪ್ರಜ್ಞಾವಂತ ಪದವೀಧರ ಮತದಾರರು ಬೆಂಬಲಿಸುವ ವಿಶ್ವಾಸವಿದೆ ಎಂದು ಬೆಂಗಳೂರು ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್.ಎಸ್.ಉದಯ್ ಸಿಂಗ್ ತಿಳಿಸಿದರು.
ಪದವೀಧರರ ಕ್ಷೇತ್ರದಿಂದ ಹತ್ತಾರು ವರ್ಷಗಳಿಂದ ಪ್ರತಿನಿಧಿಸುತ್ತಿರುವ ವ್ಯಕ್ತಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರೇ ಆಗಿದ್ದಾರೆ. ಚುನಾವಣೆಗಳಲ್ಲಿ ಹಣ, ಗಿಫ್ಟ್ ಹಂಚಿ ಮತದಾರರನ್ನು ಓಲೈಸಿಕೊಳ್ಳುವ ಆಲೋಚನೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇದ್ದಾರೆ. ವೈಯಕ್ತಿಕ ಹಿತಾಸಕ್ತಿಗಾಗಿ ವಿಧಾನ ಪರಿಷತ್ ಸದಸ್ಯರಾಗುತ್ತಿದ್ದಾರೆಯೇ ಹೊರತು ಪದವೀಧರರ ಧ್ವನಿಯಾಗಲು ಅಲ್ಲ. ಇದಕ್ಕೆಲ್ಲ ಪ್ರಜ್ಞಾವಂತ ಪದವೀಧರರೇ ಕಡಿವಾಣ ಹಾಕಬೇಕು ಎಂದರು.
ರಾಜ್ಯದಲ್ಲಿ ೨ ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದೆ. ಕೆಪಿಎಸ್ಸಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಹಗರಣಗಳಿಂದ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ.ಪದವೀಧರರು ಕೇವಲ ೮-೧೦ ಸಾವಿರ ವೇತನಕ್ಕಾಗಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಸುತ್ತಮುತ್ತಲೂ ಕೈಗಾರಿಕಾ ಪ್ರದೇಶವಿದೆ. ಆದರೂ ಉದ್ಯೋಗವಕಾಶ ಸಿಗುತ್ತಿಲ್ಲ. ಖಾಸಗಿ ವಲಯದಲ್ಲಿ ಉದ್ಯೋಗ ಅರಸುವ ಪದವೀಧರರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸಬೇಕಿದೆ ಎಂದರು.
ಉದಯ್ಸಿಂಗ್ ಅವರಿಗೆ ಸ್ಥಳೀಯ ಪದವೀಧರ ಮುಖಂಡರು ಸಾಥ್ ನೀಡಿದರು.
ಪೊಟೋ೨೧ಸಿಪಿಟಿ೧: ಚನ್ನಪಟ್ಟಣ ತಾಲೂಕಿನಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್.ಎಸ್.ಉದಯ್ಸಿಂಗ್ ಮತಯಾಚನೆ ಮಾಡಿದರು.