ದೇವನಹಳ್ಳಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಎಚ್.ಮುನಿಯಪ್ಪನವರ ವಿರುದ್ಧ ಅತ್ಯಲ್ಪ ಮತಗಳಿಂದ ನಿಸರ್ಗ ನಾರಾಯಣಸ್ವಾಮಿ ಪರಾಭವಗೊಂಡ ಬಳಿಕ ಹಂತಹಂತವಾಗಿ ಕ್ಷೇತದಲ್ಲಿ ಜೆಡಿಎಸ್ ಮುಖಂಡರು ಕಾರ್ಯಕರ್ತರ ನಡುವೆ ಗೊಂದಲ ಏರ್ಪಟ್ಟು ಈಗ ಪಕ್ಷ ಒಡೆದ ಮನೆಯಂತಾಗಿದೆ ಎಂದು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹುರಳಗುರ್ಕಿ ಶ್ರೀನಿವಾಸ್ ತಿಳಿಸಿದ್ದಾರೆ
ದೇವನಹಳ್ಳಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಎಚ್.ಮುನಿಯಪ್ಪನವರ ವಿರುದ್ಧ ಅತ್ಯಲ್ಪ ಮತಗಳಿಂದ ನಿಸರ್ಗ ನಾರಾಯಣಸ್ವಾಮಿ ಪರಾಭವಗೊಂಡ ಬಳಿಕ ಹಂತಹಂತವಾಗಿ ಕ್ಷೇತದಲ್ಲಿ ಜೆಡಿಎಸ್ ಮುಖಂಡರು ಕಾರ್ಯಕರ್ತರ ನಡುವೆ ಗೊಂದಲ ಏರ್ಪಟ್ಟು ಈಗ ಪಕ್ಷ ಒಡೆದ ಮನೆಯಂತಾಗಿದೆ ಎಂದು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹುರಳಗುರ್ಕಿ ಶ್ರೀನಿವಾಸ್ ತಿಳಿಸಿದ್ದಾರೆ.
ಸೋತ ಬಳಿಕ ಕೆಲ ದಿನಗಳ ಕಾಲ ಪಕ್ಷದ ಕಾರ್ಯಕರ್ತರಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಶಾಸಕರು, ಮತ್ತೆ ನಿಧಾನವಾಗಿ ಪಕ್ಷ ಸಂಘಟನೆಯತ್ತ ಮುಖ ಮಾಡಿದರೂ ನಡುವೆ ಹಿಂದಿನ ಜಿಲ್ಲಾಧ್ಯಕ್ಷ ಬಿ.ಮುನೇಗೌಡರನ್ನು ಬದಲಿಸಿ ಕೆ.ವಿ. ಮಂಜುನಾಥ್ರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ್ತು ಆರ್.ಮುನೇಗೌಡರನ್ನು ಬದಲಿಸಿ ಸಾದಹಳ್ಳಿ ಮಹೇಶ್ರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ ತಾಲೂಕಿನ ಹಿರಿಯ ಜೆಡಿಎಸ್ ಮುಖಂಡರೆನಿಸಿಕೊಂಡವರ ಮುನಿಸು ಬಿಗಡಾಯಿಸಿದೆ. ಈಗಾಗಲೆ ಪಕ್ಷದಲ್ಲಿ ಹಳಬರು ಎನಿಸಿಕೊಂಡವರು ನಿಸರ್ಗ ನಾರಾಯಣಸ್ವಾಮಿ ವಿರುದ್ದ ಮೂರ್ನಾಲ್ಕು ಸಭೆಗಳನ್ನ ಗುಟ್ಟಾಗಿ ಮಾಡಿ ತಾಲೂಕಿನಲ್ಲಿ ಪಕ್ಷದ ಮುಂದಿನ ದಿನಗಳಲ್ಲಿ ಹಿನ್ನೆಡೆ ಆಗುವ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ತಾಲೂಕಿನ ಅನುಭವಿಗಳಾದ ಬಿ.ಮುನೇಗೌಡ, ಕಾರಹಳ್ಳಿ ಮುನೇಗೌಡ, ಎ.ದೇವರಾಜ್, ಕಾರಹಳ್ಳಿ ಶ್ರೀನಿವಾಸ್ ಕಾಮೇನಹಳ್ಳಿ ರಮೇಶ್, ಚನ್ನರಾಯಪಟ್ಟಣ ಮುನಿರಾಜು ಸೇರಿದಂತೆ ಬಹುತೇಕ ಹಳಬರನ್ನು ಕಡೆಗಣಿಸಿರುವುದು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಹು ದೊಡ್ಡ ಹೊಡೆತ ಪಕ್ಷದ ಮೇಲೆ ಬೀಳಲಿದೆ. ಆಗಿರುವ ಡ್ಯಾಮೇಜನ್ನು ವರಿಷ್ಠರು ಮಧ್ಯ ಪ್ರವೇಶಿಸಿ ಕೂಡಲೆ ಸರಿಪಡಿಸದೇ ಹೋದರೆ ಮುಂದೆ ಕಾರ್ಯಕರ್ತರೇ ಕಟ್ಟಿದ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾದರೆ ಕಾರ್ಯಕರ್ತರು ಸೇರಿದಂತೆ ಮಾಜಿ ಶಾಸಕರು, ವರಿಷ್ಠರು, ಮುಖಂಡರು ಪಶ್ಚಾತಾಪ ಪಡಬೇಕಾದೀತು ಎಂಬ ಶ್ರೀನಿವಾಸ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.