ಮದ್ದೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಸಿ.ಪುನೀತಾ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾಳೆ.
ಶಾಲೆ ಆಡಳಿತ ಮಂಡಳಿ ಪುನೀತಾಗೆ ಹೆಚ್ಚು ಅಂಕ ಬರಬೇಕು ಎಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರು. ನಂತರ ನಡೆದ ಮೌಲ್ಯಮಾಪನದಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಒಂದು ಅಂಕ ಹೆಚ್ಚಿಗೆ ಲಭಿಸಿದ ಕಾರಣ ಪುನೀತಾ 625 ಅಂಕ ಗಳಿಸಿ ರಾಜ್ಯ, ಜಿಲ್ಲೆ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ ಎಂದು ಬಿಇಒ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಥಮ ಸ್ಥಾನದಲ್ಲಿ ತೇರ್ಗಡೆಗೊಂಡು ಶಾಲೆಗೆ ಕೀರ್ತಿ ತಂದ ಪುನೀತಾಳನ್ನು ಬಿಇಒ ಧನಂಜಯ, ಶಾಲೆ ಸಂಸ್ಥಾಪಕ ಅಧ್ಯಕ್ಷರಾದ ಕಸ್ತೂರಿ ಅನಂತೇಗೌಡ, ಮುಖ್ಯ ಶಿಕ್ಷಕ ಅನಂತೇಗೌಡ, ಸಿಇಒ ಲೋಕೇಶ್, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದಿಸಿದರು.