ದಸಾಪದಿಂದ ದಿಲೀಪ್ ಕುಮಾರ್‌ಗೆ ಅಭಿನಂದನೆ

KannadaprabhaNewsNetwork | Published : Jun 22, 2025 1:19 AM

ಚಾಮರಾಜನಗರದ ಸಿರಿಗನ್ನಡ ಪುಸ್ತಕ ಮಳಿಗೆ ಸಭಾಂಗಣದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಆರ್.ದಿಲೀಪ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಯುವ ಸಾಹಿತಿ ಆರ್.ದಿಲೀಪ್ ಕುಮಾರ್ ಅವರ "ಪಚ್ಚೆಯ ಜಗುಲಿ " ವಿಮರ್ಶಾ ಸಂಕಲನಕ್ಕೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಹೆಚ್ಚಿನ ಸಂತಸ ತಂದಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿಎಂ ನರಸಿಂಹಮೂರ್ತಿ ಹೇಳಿದರು.ನಗರದ ಸಿರಿಗನ್ನಡ ಪುಸ್ತಕ ಮಳಿಗೆ ಸಭಾಂಗಣದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಆರ್.ದಿಲೀಪ್ ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.ದಿಲೀಪ್ ಕುಮಾರ್ ಅವರು ಜಿಲ್ಲೆಯ ಹೆಮ್ಮೆಯ ಯುವ ಬರಹಗಾರರಾಗಿದ್ದಾರೆ. ಇದುವರೆಗೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕಥಾಸಂಕಲನ, ಕವನ ಸಂಕಲನಕ್ಕೆ ಪ್ರಶಸ್ತಿ ದೊರಕುತ್ತಿತ್ತು. ಇದೇ ಮೊದಲ ಬಾರಿಗೆ ವಿಮರ್ಶಾ ಸಂಕಲನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ಗುರುತಿಸಿರುವುದು ಗೌರವದ ವಿಶೇಷವಾಗಿದೆ. ಪಂಪನ ಬಗ್ಗೆ ಅಪಾರ ಅಧ್ಯಯನ ನಡೆಸಿರುವ ದಿಲೀಪ್ ಅವರು ಪಂಪನ ಕೃತಿಗಳನ್ನು ಕುರಿತು ಬರೆದಿರುವ ಕೃತಿಯೇ ಪಚ್ಚೆಯ ಜಗುಲಿಯಾಗಿದೆ. ಇಂತಹ ಯುವ ಬರಹಗಾರರನ್ನು ಗುರುತಿಸುವ ಕೈಂಕರ್ಯಗಳು ಮತ್ತಷ್ಟು ಹೆಚ್ಚಾಗಬೇಕು. ಈ ನೆಲದ ಸಾಂಸ್ಕೃತಿಕ ಸಂವೇದನೆಗಳು ಮೊಗೆದಷ್ಟು ಹುಲುಸಾಗುತ್ತಾ ಹೋಗುತ್ತವೆ. ಎಲ್ಲರೂ ದಿಲೀಪ್ ಅವರ ಸಾಹಿತ್ಯವನ್ನು ಓದುವ ಮೂಲಕ ನಾಡಿನ ಯುವ ಬರೆಹಗಾರರಿಗೆ ಪ್ರೋತ್ಸಾಹವನ್ನು ನೀಡಬೇಕು. ಆಗ ಮಾತ್ರ ಸಾಹಿತ್ಯ ಜೀವನದ ಸ್ಥಿತಿಬಿಂಬ ಎನ್ನುವ ಮಾತು ಸತ್ಯವಾಗುತ್ತದೆ ಎಂದು ಅವರು ಹೇಳಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ದಿಲೀಪ್ ಕುಮಾರ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಅನೇಕ ಪ್ರತಿಭಾನ್ವಿತ ಯುವ ಬರಹಗಾರರಿದ್ದಾರೆ ಅವರಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣ ಮೂಕಹಳ್ಳಿ, ತಾಲೂಕು ಅಧ್ಯಕ್ಷರಾದ ಶಿವಕುಮಾರ ಸರಗೂರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪ್ರಕಾಶ್ ರಾಜ್ ಮೇಹು, ಹಿರಿಯ ಸಾಹಿತಿಗಳಾದ ಕೆ. ವೆಂಕಟರಾಜು, ಪ್ರಾಧ್ಯಾಪಕರಾದ ಪ್ರೊ.ಶಿವಸ್ವಾಮಿ, ಡಾ.ತ್ರಿವೇಣಿ, ಸುರೇಶ್, ಸಿರಿಗನ್ನಡ ಪುಸ್ತಕ ಮಳಿಗೆಯ ಗೋವಿಂದರಾಜು, ಗಾಯಕ ಕಿರಣ್ ಗಿರ್ಗಿ, ಕಥೆಗಾರ ಅಜಯ್ ಕುಮಾರ್ ಗುಂಬಳ್ಳಿ, ಮಹೇಶ್ ಎಲಕ್ಕೂರು ಇತರರು ಇದ್ದರು.