ತಾಲೂಕು ಕುರುಬ ಸಮಾಜದಿಂದ
ಕುರುಬ ಸಮಾಜ ಸೇರಿದಂತೆ ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸಗಳಿಸಿ ನಾಲ್ಕನೇ ಬಾರಿ ಅಧ್ಯಕ್ಷನಾಗುವ ಮೂಲಕ ಸಮಾಜ ನೀಡಿದ ಗೌರವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಕಡೂರು ಪುರಸಭೆ ನೂತನ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ತಾಲೂಕು ಕುರುಬ ಸಮಾಜ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ತಾಲೂಕು ಕುರುಬ ಸಮಾಜದ ಮುಖಂಡರು ತಮಗೆ ಕೊಡುತ್ತಿರುವ ಗೌರವಕ್ಕೆ ಋಣಿಯಾಗಿದ್ದೇನೆ ಎಂದರು.ತಮ್ಮ 28 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಪುರಸಭಾ ಸದಸ್ಯನಾಗಿ ಅಧ್ಯಕ್ಷನಾಗಲು ಸಹಕರಿಸಿದ ಶಾಸಕರಾಗಿದ್ದ ಕೆ ಎಂ. ಕೃಷ್ಣಮೂರ್ತಿ ನನ್ನನ್ನು ರಾಜಕೀಯವಾಗಿ ಬೆಳೆಸಿದ ಗುರುಗಳು. ಬದಲಾದ ರಾಜಕಾರಣದಲ್ಲಿ ಜೆಡಿಎಸ್ ಪಕ್ಷ ಸೇರಿ ವೈಎಸ್ ವಿ ದತ್ತ ನೇತೃತ್ವದಲ್ಲಿ ಸೇವೆ ಸಲ್ಲಿಸಿ ಪುರಸಭೆ ಅಧ್ಯಕ್ಷನಾಗಿ ಮಾಡಿದ್ದು, ತದನಂತರ ಶಾಸಕರಾಗಿದ್ದ ಬೆಳ್ಳಿ ಪ್ರಕಾಶ್ ಬೆಂಬಲಿಸಿ ಮೈತ್ರಿ ಮೂಲಕ ನಾನು ಮತ್ತೆ ಅಧ್ಯಕ್ಷನಾದೆ. ಆ ನಂತರದ ರಾಜಕೀಯ ಬೆಳವಣಿಗೆಯಲ್ಲಿ ಸಮಾಜ ಒಗ್ಗೂಡಬೇಕೆಂಬ ನಿಟ್ಟಿನಲ್ಲಿ ತಾವು ಕೆ.ಎಸ್.ಆನಂದ್ ನಾಯಕತ್ವ ಒಪ್ಪಿ ಕಾಂಗ್ರೆಸ್ ಸೇರಿದೆ. ದತ್ತರವರು ಪಕ್ಷ ಬಿಟ್ಟು ವಾಪಸ್ ಬಂದರೂ ನಾನು ಕಾಂಗ್ರೆಸ್ ನವನಾಗಿಯೇ ಉಳಿದು ಆನಂದ್ ರವರ ಗೆಲುವಿಗೆ ಶ್ರಮಿಸಿದ್ದೇನೆ ಎಂದರು.
ರಾಜಕಾರಣದಲ್ಲಿ ಏರುಪೇರು ಸಹಜ. ಮುಂದಿನ ದಿನಗಳಲ್ಲಿ ಕುರುಬ ಸಮಾಜಕ್ಕೆ ಅತ್ಯಗತ್ಯವಾದ ಸಮುದಾಯ ಭವನ ನಿರ್ಮಾಣ ಮತ್ತು ಸಮಾಜದ ಅಭಿವೃದ್ಧಿಗೆ ತಾವು ಶಾಸಕರ ಜೊತೆಗೂಡಿ ಪ್ರಾಮಾಣಿಕವಾಗಿ ಕ್ರಮವಹಿಸುತ್ತೇನೆ. ಸಮಾಜ ನನ್ನ ಬೆನ್ನಿಗಿದೆ ಎಂದು ಹೇಳಿ ಕುರುಬ ಸಮಾಜದ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಕುರುಬ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳ ಸಹಕಾರ ದಿಂದ 4ನೇ ಬಾರಿ ಭಂಡಾರಿ ಶ್ರೀನಿವಾಸ್ ಕಡೂರು ಪುರಸಭೆ ಅಧ್ಯಕ್ಷರಾಗಿರುವುದು ಸಮಾಜದ ಹಿರಿಮೆ. ಕುರುಬ ಸಮಾಜಕ್ಕೆ ನಿವೇಶನ ಮತ್ತು ಭವನ ನಿರ್ಮಾಣಕ್ಕೆ ಅಧ್ಯಕ್ಷರು ಮತ್ತು ಶಾಸಕರ ಜೊತೆಗೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.
ಕಡೂರು ಪುರಸಭೆಗೆ 4ನೇ ಬಾರಿ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್ ರವರನ್ನು ತಾಲೂಕು ಕುರುಬ ಸಮಾಜದಿಂದ ಅಭಿನಂದಿಸಲಾಯಿತು.