ಕೆರಗೋಡಿನಲ್ಲಿ ಶಾಸಕರಿಗೆ ಅಭಿನಂದನೆ, ಆಕ್ರೋಶ

KannadaprabhaNewsNetwork | Published : Mar 2, 2024 1:52 AM

ನಾನೂ ಶ್ರೀರಾಮ, ಹನುಮಂತನ ಭಕ್ತನೇ. ಧ್ವಜದ ಸಲುವಾಗಿ ಶಾಂತಿಗೆ ಭಂಗ ತರುವುದು ಬೇಡ. ನಿಮಗೆ ಧ್ವಜ ಹಾರಿಸುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡುತ್ತೇನೆ. ಈ ಜಾಗದಲ್ಲಿ ಹನುಮಧ್ವಜ ಹಾರಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಹನುಮಧ್ವಜ ವಿವಾದ ಭುಗಿಲೆದ್ದ ಬಳಿಕ ಪ್ರಥಮ ಬಾರಿಗೆ ತಾಲೂಕಿನ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಪಿ.ರವಿಕುಮಾರ್ ಅವರಿಗೆ ಒಂದು ಗುಂಪು ಅಭಿನಂದನೆ ಸಲ್ಲಿಸಿದರೆ, ಮತ್ತೊಂದು ಗುಂಪು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.

ಕೆರಗೋಡು ಹಾಗೂ ಸುತ್ತಮುತ್ತಲ ದೇವಾಲಯಗಳಿಗೆ ಅನುದಾನ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಾಸಕ ಪಿ.ರವಿಕುಮಾರ್ ಗ್ರಾಮಕ್ಕೆ ಆಗಮಿಸಿದರು. ಈ ಸಮಯದಲ್ಲಿ ಹನುಮ ಧ್ವಜದ ಪರ ಇದ್ದ ಗುಂಪು ಪ್ರತಿಭಟನೆ ನಡೆಸಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

ಪ್ರತಿಭಟನಾಕಾರರತ್ತ ತೆರಳಿದ ಶಾಸಕ ರವಿಕುಮಾರ್ ಅವರೊಂದಿಗೆ ಮಾತುಕತೆ ನಡೆಸಿ, ನಾನೂ ಶ್ರೀರಾಮ, ಹನುಮಂತನ ಭಕ್ತನೇ. ಧ್ವಜದ ಸಲುವಾಗಿ ಶಾಂತಿಗೆ ಭಂಗ ತರುವುದು ಬೇಡ. ನಿಮಗೆ ಧ್ವಜ ಹಾರಿಸುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡುತ್ತೇನೆ. ಈ ಜಾಗದಲ್ಲಿ ಹನುಮಧ್ವಜ ಹಾರಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇದನ್ನು ಅರ್ಥಮಾಡಿಕೊಳ್ಳುವಂತೆ ಮನವಿ ಮಾಡಿದರು.

ಇದಕ್ಕುತ್ತರವಾಗಿ ಧ್ವಜದ ಪರವಾಗಿದ್ದ ಗುಂಪು, ನಾವು ನಿಮ್ಮನ್ನು ಕೇಳಿಯೇ ಈ ಜಾಗದಲ್ಲಿ ಧ್ವಜಸ್ತಂಭ ನೆಡಲು ನಿರ್ಧರಿಸಿದೆವು. ನೀವೂ ಅದಕ್ಕೆ ಒಪ್ಪಿದ್ದೀರಿ. ಈಗ ಧ್ವಜಸ್ತಂಭ ನಿರ್ಮಾಣವಾದ ಬಳಿಕ ಹನುಮಧ್ವಜ ಹಾರಿಸಬೇಡಿ ಎಂದರೆ ಏನರ್ಥ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಹನುಮಧ್ವಜಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳುತ್ತಿದ್ದೇನೆ. ನನ್ನ ಮೇಲೆ ಭರವಸೆ ಇಡಿ ಎಂದರೂ ಒಪ್ಪದೆ ಶಾಸಕರು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದಾಗ ಶಾಸಕರು ಅಲ್ಲಿಂದ ನಿರ್ಗಮಿಸಿದರು.

ಮತ್ತೊಂದೆಡೆ ಅದ್ಧೂರಿ ಅಭಿನಂದನೆ:

ಕೆರಗೋಡು ಗ್ರಾಪಂ ವ್ಯಾಪ್ತಿಯ ವಿವಿಧ ದೇವಾಲಯಗಳಿಗೆ ಅನುದಾನ ನೀಡುವ ಕಾರ್ಯಕ್ರಮಕ್ಕೆ ತೆರಳಲು ಮುಂದಾದಾಗ ಬೆಂಬಲಿಗರು ಮತ್ತು ಕಾರ್ಯಕರ್ತರು ಶಾಸಕರಿಗೆ ಹೂವಿನ ಹಾರ ಹಾಕಿ ಭರ್ಜರಿ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ದಿದ್ದು ವಿಶೇಷವಾಗಿತ್ತು.

ಕೆರಗೋಡು ಗ್ರಾಮದ ಶ್ರೀ ಪಂಚಲಿಂಗೇಶ್ವರಸ್ವಾಮಿ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪಿ.ರವಿಕುಮಾರ್, ಕೆರಗೋಡು ಅಭಿವೃದ್ಧಿಗೆ ಸರ್ಕಾರದಿಂದ ೧೦ ಕೋಟಿ ರು. ಬಿಡುಗಡೆ ಮಾಡಿಸಿರುವುದಾಗಿ ಹೇಳಿದರು.

ಕೆರಗೋಡು ಕೆರೆ ಅಭಿವೃದ್ಧಿಗೆ ೩.೭೦ ಕೋಟಿ ರು., ಕೆರಗೋಡು ವಿ.ಸಿ.ನಾಲೆ ದುರಸ್ತಿಗೆ ೫ ಕೋಟಿ ರು., ಕೆರಗೋಡು-ತಾಳೆಮೆಳೆದೊಡ್ಡಿ ರಸ್ತೆ ಅಭಿವೃದ್ಧಿಗೆ ೫೦ ಲಕ್ಷ ರು., ಕೆರಗೋಡು ಊರೊಳಗಿನ ರಸ್ತೆ ಅಭಿವೃದ್ಧಿಗೆ ೧೦ ಲಕ್ಷ ರು. ಸೇರಿ ಎಸ್‌ಸಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿರುವುದಾಗಿ ಹೇಳಿದರು.

ಮುಖಂಡರಾದ ಪ್ರಶಾಂತ್‌ಬಾಬು, ರಮೇಶ್, ನಾಗರತ್ನ, ಪ್ರಮೀಳಾ. ಉಮೇಶ್, ಸುದರ್ಶನ್, ಕಾಂತ ಸೇರಿದಂತೆ ಇತರರಿದ್ದರು.

ಬಾವುಟಕ್ಕೂ ನಮಗೂ ಸಂಬಂಧವಿಲ್ಲ: ನಮಗೂ ಬಾವುಟಕ್ಕೂ ಯಾವುದೇ ಸಂಬಂಧವಿಲ್ಲ. ಅದು ನಮಗೆ ಬೇಕಾಗಿಯೂ ಇಲ್ಲ. ಶ್ರೀರಾಮ, ಹನುಮಂತ ಎಲ್ಲರೂ ನಮ್ಮವರೇ. ನಮಗೆ ಅಭಿವೃದ್ಧಿ ಬೇಕು. ನಮಗೆ ಕೆರಗೋಡಿನಲ್ಲಿ ರಾಜಕೀಯ ಹಿನ್ನಡೆಯಾಗಿದೆ ಎಂದು ಇಲ್ಲಿನ ಜನರಿಗೆ ಇಲ್ಲದಿರುವುದನ್ನೆಲ್ಲಾ ತಲೆಗೆ ತುಂಬಿದ್ದರು. ಧ್ವಜದ ವಿವಾದವನ್ನು ಕಾಂಗ್ರೆಸ್ಸಿಗರ ತಲೆಗೆ ಕಟ್ಟಲು ಬಂದರು. ಅದ್ಯಾವುದಕ್ಕೂ ನಾವು ಹೆದರುವವರಲ್ಲ. ನಾವು ೮ ಸಾವಿರ ಕೋಟಿ ರು. ಕೊಟ್ಟಿರುವುದಾಗಿ ಸುಳ್ಳು ಹೇಳುವವರಲ್ಲ. ನಾವು ಖಾತೆಗೆ ದುಡ್ಡು ಹಾಕಿ ಬಂದು ಮಾತನಾಡುವವರು ಎಂದು ನೇರವಾಗಿ ಹೇಳಿದರು.ಕೆರಗೋಡು ಗ್ರಾಮದ ಶ್ರೀ ದೇವಿರಮ್ಮ ದೇವಾಲಯಕ್ಕೆ ೪ ಲಕ್ಷ ರು., ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ೧.೫ ಲಕ್ಷ ರು., ಶ್ರೀ ಹೊನ್ನಮ್ಮದೇವಿ ದೇವಾಲಯಕ್ಕೆ ೧.೫೦ ಲಕ್ಷ ರು., ಶ್ರೀ ಚನ್ನಕೇಶವ ದೇವಸ್ಥಾನ, ಶ್ರೀ ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ತಲಾ ೧.೫೦ ಲಕ್ಷ ರು, ಮರಿಲಿಂಗನದೊಡ್ಡಿ ಶ್ರೀರಾಮದೇವಸ್ಥಾನಕ್ಕೆ ೨ ಲಕ್ಷ ರು. ನೀಡಿದರು.