ಕನ್ನಡಪ್ರಭ ವಾರ್ತೆ ಮದ್ದೂರು
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗುರುವಾರ ನಡೆದ ಗಣೇಶ ವಿಸರ್ಜನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಚ್ಚುಕಟ್ಟಾಗಿ ಗಣೇಶ ಮೆರವಣಿಗೆ ನಡೆಸಲು ಅನುವು ಮಾಡಿಕೊಟ್ಟ ಹಿನ್ನೆಲೆ ಮುಖಂಡರು ಅಭಿನಂದನೆ ಸಲ್ಲಿಸಿದರು.ಪಟ್ಟಣದ ಚನ್ನೇಗೌಡ ಬಡಾವಣೆ, ಬಸವೇಶ್ವರನಗರ, ಕಾವೇರಿ ನಗರ, ಸಿದ್ಧಾರ್ಥ ನಗರ, ರಾಮ್ ರಹೀಂ ನಗರದ ಹಿರಿಯರು, ಯುವಕರು, ಹೋರಾಟಗಾರರು, ಮುಖಂಡರ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿತ್ತು.
ಮುಖಂಡ ರಮೇಶ್ ಮಾತನಾಡಿ, ಮದ್ದೂರಿನ ಗಣೇಶ ಪ್ರತಿಷ್ಠಾಪನೆ, ಗಣೇಶೊತ್ಸವ, ವಿಸರ್ಜನೆ ಸಂದರ್ಭದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮತ್ತು ದಿಟ್ಟವಾಗಿ ತಹಬದಿ ತರುವಲ್ಲಿ ಶ್ರಮಿಸಿದ್ದು, ಮುಂದಿನ ದಿನಗಳಲ್ಲಿ ಈ ಸ್ಥಳದಲ್ಲಿ ಶಾಂತಿ ನೆಲೆಸಲು ನಾವೆಲ್ಲರೂ ಒಗ್ಗಟ್ಟಿನಿಂದ ಪೊಲೀಸ್ ಇಲಾಖೆಗೆ ಸಹಕರಿಸುತ್ತೇವೆ ಎಂದು ತಿಳಿಸಿದರು.ಜನಪರ ಸಂಘಟನೆ ವತಿಯಿಂದ ಸೆ.22ರಂದು ನಡೆಯುವ ಸೌಹಾರ್ದತೆ ನಡಿಗೆ ಸದ್ಯಕ್ಕೆ ಬೇಡ ಎಂಬ ನಿರ್ಧಾರಕ್ಕೆ ನಮ್ಮ ವಾರ್ಡಿನ ಎಲ್ಲಾ ಜನರು ತೀರ್ಮಾನಿಸಿದ್ದಾರೆ. ನಡಿಗೆಗೆ 10, 11, 12, 13, 14, 15ನೇ ವಾರ್ಡಿನ ಗ್ರಾಮಸ್ಥರ ಬೆಂಬಲವಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಸಿಂಗ್ರಯ್ಯ ಕರಿಯಪ್ಪ, ಪಟೇಲ್ ಸಂಘ ಜಯಂತಿಲಾಲ್ ಪಟೇಲ್, ಬೀದಿಬದಿ ವ್ಯಾಪಾರಿ ಸಂಘ ಜಯರಾಮ, ಸಂಗೊಳ್ಳಿ ರಾಯಣ್ಣ ಆಟೋ ಚಾಲಕರ ಸಂಘ ಮ. ನ. ಪ್ರಸನ್ನ ಕುಮಾರ್, ಮಹಿಳಾ ಸಂಘಟನೆ ನಳಿನಿ, ಶ್ರೀಕ ಶ್ರೀನಿವಾಸ್, ಚನ್ನೇಗೌಡ ಬಡಾವಣೆ ಗಾರೆ ಮೇಸ್ತ್ರಿ ರಾಜು, ಗಾರೆ ಮೇಸ್ತ್ರಿ ನಾಗರಾಜು, ಯೋಗರಾಜ್, ಪ್ರಶಾಂತ್, ಗಂಗರಾಜು ದಿನೇಶ್, ಸಿದ್ಧಾರ್ಥ ನಗರ ಯಜಮಾನ್ ಸೋಮು, ಅಂಗಡಿ ಕುಮಾರ್, ಎಂ.ಬಿ.ರಮೇಶ್, ಕಾವೇರಿ ನಗರ ಮುತ್ತುರಾಜು, ಹರೀಶ್, ರಾಮ್ ರಹೀಂ ನಗರ ರವಿಕುಮಾರ್, ಸುರೇಶ್, ಇತರರು ಇದ್ದರು.