ಅಂಗಾಂಗ ದಾನ ಮಾಡಿ ಇನ್ನೊಬ್ಬರ ಬದುಕಿಗೆ ಆಸರೆಯಾಗಿ: ನಿರ್ಮಲಾನಂದನಾಥ ಶ್ರೀ

KannadaprabhaNewsNetwork |  
Published : Sep 20, 2025, 01:00 AM IST
19ಕೆಎಂಎನ್ ಡಿ25,26 | Kannada Prabha

ಸಾರಾಂಶ

ಸತ್ತ ನಂತರವೂ ಬೇರೆ ಬೇರೆ ರೀತಿಯಲ್ಲಿ ನಾವು ಭೂಮಿ ಮೇಲೆ ಉಳಿಯಲು ಅವಕಾಶವಿದೆ. ಜಗತ್ತನ್ನು ನೋಡುವ ಕಣ್ಣುಗಳು, ದೇಹ ಶುದ್ಧೀಕರಣ ಮಾಡುವ ಪಿತ್ತ ಜನಕಾಂಗ ಮತ್ತು ಮೂತ್ರಪಿಂಡಗಳು, ಶ್ವಾಸಕೋಶ, ಹೃದಯಗಳನ್ನು ದಾನ ಮಾಡುವ ಮೂಲಕ ಸತ್ತ ನಂತರವೂ ಇನ್ನೊಬ್ಬರ ಬದುಕಿಗೆ ನೆರವಾಗಬಹುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮನುಷ್ಯ ಸತ್ತ ನಂತರವೂ ಹಲವರ ಬದುಕಿಗೆ ಆಸರೆಯಾಗಲು ಅಂಗಾಂಗ ದಾನ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸಬೇಕಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಆದಿಚುಂಚನಗಿರಿ ಯುನಿವರ್ಸಿಟಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ಜೀವ ಮತ್ತೊಬ್ಬರಿಗೆ ಆಸರೆಯಾಗಿರಲಿ’ ಎಂಬ ವಿನೂತನ ವಾಕಥಾನ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸತ್ತ ನಂತರವೂ ಬೇರೆ ಬೇರೆ ರೀತಿಯಲ್ಲಿ ನಾವು ಭೂಮಿ ಮೇಲೆ ಉಳಿಯಲು ಅವಕಾಶವಿದೆ. ಜಗತ್ತನ್ನು ನೋಡುವ ಕಣ್ಣುಗಳು, ದೇಹ ಶುದ್ಧೀಕರಣ ಮಾಡುವ ಪಿತ್ತ ಜನಕಾಂಗ ಮತ್ತು ಮೂತ್ರಪಿಂಡಗಳು, ಶ್ವಾಸಕೋಶ, ಹೃದಯಗಳನ್ನು ದಾನ ಮಾಡುವ ಮೂಲಕ ಸತ್ತ ನಂತರವೂ ಇನ್ನೊಬ್ಬರ ಬದುಕಿಗೆ ನೆರವಾಗಬಹುದು ಎಂದರು.

ಅವಶ್ಯಕತೆ ಇರುವಂಥವರಿಗೆ ಅಂಗಾಂಗಗಳನ್ನು ದಾನ ಮಾಡುವ ಅರಿವಿನ ಕಾರ್ಯಕ್ರಮ ಆಯೋಜಿಸಿದ್ದು, ಇತ್ತೀಚಿನ ದಿನಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಲಾಯಿತು. ಮಕ್ಕಳಿಗೆ ಅವರ ಅಪ್ಪಂದಿರು ಕಿಡ್ನಿ ದಾನ ಮಾಡಿದರು. 23-24 ವರ್ಷದ ಮಕ್ಕಳಿಗೆ 65- 70 ವರ್ಷದ ಅಪ್ಪಂದಿರು ದಾನ ಮಾಡುವಂತಹ ಸನ್ನಿವೇಶವನ್ನು ಈ ದಿನಮಾನಗಳಲ್ಲಿ ನಾವು ಕಾಣುತ್ತಿದ್ದೇವೆ ಎಂದು ತಿಳಿಸಿದರು.

ಸತ್ತ ನಂತರ ಮಣ್ಣಲ್ಲಿ ಮಣ್ಣಾಗಿ, ಬೆಂಕಿಯಲ್ಲಿ ಬೂದಿಯಾಗಿ ಹೋಗುವಂಥ ನಮ್ಮ ಅಂಗಾಂಗಗಳನ್ನು ಬದುಕಿನ ಸಂದರ್ಭದಲ್ಲಿ ದಾನ ಮಾಡುವ ಪ್ರಕ್ರಿಯೆಯನ್ನು ಇಂದು ತೊಡಗಿಸಿಕೊಂಡಿದ್ದೇಯಾದಲ್ಲಿ ಲಕ್ಷಾಂತರ ಮಂದಿ ಪ್ರಾಣವನ್ನು ಕಾಪಾಡಬಹುದು ಎಂದು ಹೇಳಿದರು.

ಸಮಾರಂಭದಲ್ಲಿ ಶಾಸಕ ಶರತ್ ಬಚ್ಚೇಗೌಡ, ನಟ ಧ್ರುವಸರ್ಜಾ ಮಾತನಾಡಿದರು. ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಪಾರಿವಾಳ ಹಾರಿ ಬಿಡುವ ಮೂಲಕ ನಡಿಗೆಗೆ ಚಾಲನೆ ನೀಡಲಾಯಿತು. ಆದಿನಾಥ ರಸ್ತೆಯಿಂದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿವಿಧ ಮಠಗಳ ಮಠಾಧೀಶರು ಹಾಗೂ ಇತರೆ ಗಣ್ಯರೊಡಗೂಡಿ ಪ್ರಾರಂಭಗೊಂಡ ನಡಿಗೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬೆಳ್ಳೂರು ಕ್ರಾಸ್ ತಲುಪಿ, ನಂತರ ಬೆಳ್ಳೂರು ಕ್ರಾಸ್‌ನ ಸೇತುವೆ ಕೆಳಗಿನ ರಸ್ತೆಯ ಮೂಲಕ ಸುಮಾರು 5 ಕಿ.ಮೀವರೆಗೆ ಸಾಗಿ ವಾಪಸ್ ಆದಿಚುಂಚನಗಿರಿ ವಿವಿ ಆವರಣದ ಭೈರವೈಕ್ಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆ ಬಳಿ ಅಂತ್ಯಗೊಂಡಿತು.

ಜಾಥಾದಲ್ಲಿ ಆದಿಚುಂಚನಗಿರಿ ವೈದ್ಯಕೀಯ, ಇಂಜಿನಿಯರಿಂಗ್, ಬಿ.ಇಡಿ, ನರ್ಸಿಂಗ್, ಫಾರ್ಮಸಿ, ಪ್ರಥಮ ದರ್ಜೆ, ಪಿಯು, ಪದವಿ ವಿದ್ಯಾರ್ಥಿಗಳು, ವಿವಿಧ ಗ್ರಾಮಗಳ ಸಾರ್ವಜನಿಕರು, ಮಠದ ಭಕ್ತರು, ತಾಲೂಕಿನ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ದೈಹಿಕ ಶಿಕ್ಷಕರು, ವೈದ್ಯರು, ಉದ್ಯಮಿಗಳು, ಆಟೋ- ಕ್ಯಾಬ್ ಚಾಲಕರು ಸೇರಿದಂತೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಆಯೋಜಿಸಲಾಗಿತ್ತು. ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಂ ಕಾರ್ಯಕ್ರಮ ನಿರೂಪಿಸಿದರು. ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ರಂಗನಾಥ್, ಎಚ್.ಕೆ.ಬಾಲಕೃಷ್ಣ, ಮಾಜಿ ಶಾಸಕ ಸುರೇಶ್ ಗೌಡ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಡಿಸಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿಯು ಉಪ ಕುಲಪತಿ ಶ್ರೀಧರ್, ಆಸ್ಪತ್ರೆ ಮುಖ್ಯಸ್ಥ ಡಾ‌.ಶಿವಕುಮಾರ್, ಸಂಪರ್ಕಾಧಿಕಾರಿ ಧರ್ಮೇಂದ್ರ, ಮೃಜೇಶ್ ಸೇರಿದಂತೆ ಹಲವರು ಇದ್ದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ