ಕೂಡ್ಲಿಗಿ: ಕಾಂಗ್ರೆಸ್ಸಿನದು ದೈನೇಸಿ ಸ್ಥಿತಿ. ದೇಶದಲ್ಲಿ ಅಧಿಕಾರ ಹಿಡಿಯುತ್ತೇವೆಂದು ತಿರುಕನ ಕನಸು ಕಾಣುತ್ತಿದ್ದಾರೆ. ಆದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಮಂಗಳವಾರ ಸಂಜೆ ತಾಲೂಕಿನ ಕಾನಹೊಸಹಳ್ಳಿಯಲ್ಲಿ ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರವಾಗಿ ಮಂಗಳವಾರ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲದೇ ಕಾಂಗ್ರೆಸ್ ಸರ್ಕಾರಕ್ಕೆ ದಿವಾಳಿತನ ಕಾಡುತ್ತಿದೆ. ಈ ಹಿಂದೆ ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ಯೋಜನೆಗಳನ್ನು ಸಿದ್ದರಾಮಯ್ಯ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.
ನಿರ್ನಾಮ ಆಗುವೆ: ಬಿ.ಶ್ರೀರಾಮುಲು ಮಾತನಾಡಿ, ರಾಜಕೀಯವಾಗಿ ನನಗೆ ಪುನರ್ಜನ್ಮ ಕೊಡಬೇಕು. ಈ ಬಾರಿ ನಾನು ಸೋತರೆ ರಾಜಕೀಯವಾಗಿ ನಿರ್ನಾಮವಾಗುವೆ ಎಂದು ಗದ್ಗದಿತರಾಗಿ ಹೇಳಿದರು.ರಾಜಕೀಯ ಭವಿಷ್ಯಕ್ಕೆ ಕೂಡ್ಲಿಗಿ ತಾಲೂಕಿನ ಜನತೆ ಹೆಚ್ಚಿನ ಮತ ನೀಡಿ ಕೈ ಹಿಡಿದರು ಎಂದು ನನ್ನ ಮಕ್ಕಳು, ಮೊಮ್ಮಕ್ಕಳು ನೆನೆಸಿಕೊಳ್ಳುತ್ತಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದೆ. ಒಂದು ವರ್ಷ ಕಳೆದರೂ ಕಾಂಗ್ರೆಸ್ ಸರ್ಕಾರ ಅದನ್ನು ಪೂರ್ಣಗೊಳಿಸಲು ಆಗುತ್ತಿಲ್ಲ ಎಂದು ತಿಳಿಸಿದರು.
ಅರುಣಾ ಲಕ್ಷ್ಮಿ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಸಚಿವರಾಗಿದ್ದ ಬಿ.ಶ್ರೀರಾಮುಲು, ಜಿ.ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ ಎಂದರು. ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಬಿಜೆಪಿ ಎಂಎಲ್ಸಿ ರವಿಕುಮಾರ್, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಬಣವಿಕಲಲ್ಲು ಕೆ.ನಾಗರಾಜ, ರಾಮದುರ್ಗ ಸೂರ್ಯಪಾಪಣ್ಣ, ಚಂದ್ರಶೇಖರ ಹಲಗೇರಿ, ಎಸ್.ದುರುಗೇಶ್, ಎಸ್.ಪಿ.ಪ್ರಕಾಶ್, ಬಿ.ಭೀಮೇಶ್, ಜರ್ಮಲಿ ಶಶಿಧರ, ಕೋಲಮ್ಮನಹಳ್ಳಿ ಭೀಮಣ್ಣ, ಮೊರಬ ಶಿವಣ್ಣ, ಹುರುಳಿಹಾಳು ರೇವಣ್ಣ, ಜಿಪಂ ಮಾಜಿ ಅಧ್ಯಕ್ಷೆ ದೀನಾ ಮಂಜುನಾಥ, ಮಾಜಿ ಮಂಡಲ ಅಧ್ಯಕ್ಷ ಕೆ.ಚನ್ನಪ್ಪ, ಎಸ್.ಕೆ. ಗೊಲ್ಲರಹಟ್ಟಿ ಸಣ್ಣ ಬಾಲಪ್ಪ, ಕಲ್ಲೇಶ್ ಗೌಡ ಸೇರಿ ಇತರರು ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಮೌಳಿ, ಕುಲುಮರಹಟ್ಟಿ ವೆಂಕಟೇಶ್, ಹನುಮಜ್ಜರ ನಾಗೇಶ್, ಕೇಣೇರ ಮಂಜುನಾಥ, ರೇಖಾ ಮಲ್ಲಿಕಾರ್ಜುನ, ಶಾರದಾ ಕುಂಬಾರ, ಹುಲಿಕೆರೆ ಗೀತಾ, ನೇತ್ರಾವತಿ ಸೇರಿ ಇತರರಿದ್ದರು.
ಇದೇ ಸಂದರ್ಭದಲ್ಲಿ ನಾನಾ ಪಕ್ಷಗಳ ಕಾರ್ಯಕರ್ತರು ಬಿ.ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.