ಲೋಕಸಭೆ ಚುನಾವಣೆ ಚರ್ಚೆಗೆ ಶೀಘ್ರದಲ್ಲಿ ಕಾಂಗ್ರೆಸ್ ಸಮಾವೇಶ: ಪಕ್ಷದ ಮುಖಂಡ ವಿನಯ್‌ ಗಾಂಧಿ

KannadaprabhaNewsNetwork | Published : Jan 28, 2024 1:16 AM

ಸಾರಾಂಶ

ಲೋಕಸಭೆ ಚುನಾವಣೆ ಸಮೀಪದಲ್ಲಿದ್ದು, ಈಗಾಗಲೇ ಮುಖಂಡರ ಜತೆ ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ ಸಂಘಟನೆಗಾಗಿ ಅತಿ ಶೀಘ್ರದಲ್ಲಿ ಪಕ್ಷದ ಮುಖಂಡರ ಸಮಾವೇಶವನ್ನು ಹಮ್ಮಿಕೊಳ್ಳುವುದಾಗಿ ಪಕ್ಷದ ಮುಖಂಡ ವಿನಯಗಾಂಧಿ ತಿಳಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಅಹಿಂದ ಮತ್ತು ಇತರ ಮತದಾರರು ಕೈ ಪರ ಇದ್ದಾರೆ । ನನಗೆ ಲೋಕಸಭೆ ಟಿಕೆಟ್‌ ನೀಡಿ

ಕನ್ನಡಪ್ರಭ ವಾರ್ತೆ ಹಾಸನ

ಲೋಕಸಭೆ ಚುನಾವಣೆ ಸಮೀಪದಲ್ಲಿದ್ದು, ಈಗಾಗಲೇ ಮುಖಂಡರ ಜತೆ ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ ಸಂಘಟನೆಗಾಗಿ ಅತಿ ಶೀಘ್ರದಲ್ಲಿ ಪಕ್ಷದ ಮುಖಂಡರ ಸಮಾವೇಶವನ್ನು ಹಮ್ಮಿಕೊಳ್ಳುವುದಾಗಿ ಪಕ್ಷದ ಮುಖಂಡ ವಿನಯಗಾಂಧಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಲೋಕಸಭಾ ಚುನಾವಣೆ ಹತ್ತಿರವಿರುವುದರಿಂದ ಈಗ ಜಿಲ್ಲೆಯ ಎಲ್ಲಾ ತಾಲೂಕಿಗೂ ಭೇಟಿ ನೀಡಿ ಎಲ್ಲಾ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದಿಂದ ಚುನಾವಣೆಗೆ ಮುಂಚೆ ಭರವಸೆ ನೀಡಿದ ಎಲ್ಲಾ ೫ ಗ್ಯಾರಂಟಿಗಳನ್ನು ಜಾರಿ ಮಾಡಿ ಎಲ್ಲಾ ವರ್ಗದ ಜನಸಾಮಾನ್ಯರಿಗೂ ಅನುಕೂಲ ಮಾಡಲಾಗಿದೆ. ಇದರ ಲಾಭವನ್ನು ಎಲ್ಲಾ ವರ್ಗದ ಜನರಿಗೂ ಮತ್ತು ಎಲ್ಲಾ ಧರ್ಮದ ಜನರಿಗೂ ಸರ್ಕಾರದ ಸವಲತ್ತುಗಳನ್ನು ತಲುಪಿಸುತ್ತಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಮತದಾರರಿದ್ದು, ಇದರಲ್ಲಿ ಅಹಿಂದ ಮತದಾರರು ಮತ್ತು ಇತರರು ಇದ್ದಾರೆ. ಇವರೆಲ್ಲ ಕಾಂಗ್ರೆಸ್ ಪರವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಎಲ್ಲಾ ಜನಾಂಗದ ಪರವಾಗಿದೆ ಎಂದು ಎಲ್ಲಾರಿಗೂ ಮನವರಿಕೆಯಾಗಿದೆ ಎಂದು ಹೇಳಿದರು.

ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಕೂಡ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಸಾರ್ವಜನಿಕರು ಕಾರ್ಯಕರ್ತರ ಅವಹಾಲುಗಳನ್ನು ಕೇಳಿ ಅವರ ಅವಶ್ಯಕತೆಗಳನ್ನು ಪೂರ್ಣಗೊಳಿಸುತ್ತಿರುವುದು ಜಿಲ್ಲೆಯ ಕಾರ್ಯಕರ್ತರಿಗೆ ಸಂತೋಷ ತಂದಿದೆ. ಹಾಸನ ಲೋಕಸಭೆಗೆ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಿ ಜೆಡಿಎಸ್, ಬಿಜೆಪಿ ಕೋಮುವಾದಿ ಸಮ್ಮಿಶ್ರ ಪಕ್ಷದ ಅಭ್ಯರ್ಥಿ ಯಾರೇ ಆದರೂ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಿದ್ದಾರೆ, ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಟ್ಟಿದೇವೆ. ಜಿಲ್ಲೆಯಲ್ಲಿ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಂದಾಗಿದ್ದು ಕಾಂಗ್ರೆಸ್ ಪಕ್ಷವನ್ನು ತಳಹಂತದಿಂದ ಸಂಘಟನೆ ಮಾಡಲು ತಯಾರಾಗಬೇಕಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಜನಾಂಗದವರು ಜಾತಿಯವರು ಧರ್ಮದವರು ಒಗ್ಗೂಡಿ ಕೆಲಸ ಮಾಡಬೇಕು. ನಮ್ಮಲ್ಲಿ ಎಲ್ಲರೂ ಕೂಡಿ. ಒಟ್ಟಿಗೆ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಹಾಲಿ ಲೋಕಸಭಾ ಚುನಾವಣೆಗೆ ಅನೇಕ ಮುಖಂಡರು ಆಕಾಂಕ್ಷಿಗಳಿದ್ದಾರೆ. ನಾನು ಕೂಡ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಮುಖಂಡನಾಗಿ ಸುಮಾರು ೪೫ ವರ್ಷಗಳಿಂದ ಪಕ್ಷದಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿ, ಕೆಪಿಸಿಸಿ ಸದಸ್ಯನಾಗಿ, ಸಂಘಟನೆ ಮಾಡಿಕೊಂಡು ಬಂದಿರುತ್ತೇನೆ. ಅಲ್ಲದೇ ನಾನು ೬ ಬಾರಿ ವಿಧಾನಸಭಾ ಶಾಸಕನಾಗಲು ಟಿಕೆಟ್ ಆಕಾಂಕ್ಷಿಯಾಗಿ ಹಾಗೂ ೪ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಲು ನಾನು ಸೀಟನ್ನು ಕೇಳುತ್ತಿದ್ದೇನೆ. ಪ್ರಾರಂಭದಿಂದಲೂ ಇದುವರೆಗೆ ನನಗೆ ಪಕ್ಷದಲ್ಲಿ ಅನುಕೂಲವಾಗದಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತನಾಗಿ ಉಳಿದುಕೊಂಡು ಪ್ರತಿಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಹಾಲಿ ಲೋಕಸಭಾ ಚುನಾವಣೆ ಸೀಟಿಗಾಗಿ ಎಲ್ಲಾ ರಾಜ್ಯ ಮುಖಂಡರನ್ನು ಹಾಗೂ ದೆಹಲಿಯ ಮುಖಂಡರನ್ನು ಲೋಕಸಭಾ ಕ್ಷೇತ್ರದ ಮುಖಂಡರನ್ನು ಭೇಟಿ ಮಾಡಿರುತ್ತೇನೆ. ಅಂತಿಮವಾಗಿ ನನ್ನ ಪಕ್ಷದ ನಿಷ್ಠೆ ಮತ್ತು ಪ್ರಾಮಾಣಿಕತೆ ಎಲ್ಲವನ್ನು ಪರಿಗಣಿಸಿ ನನಗೆ ಈ ಬಾರಿ ಲೋಕಸಭಾ ಚುನಾವಣೆಗೆ ಅನುಕೂಲ ಮಾಡಿಕೊಟ್ಟು ಜಿಲ್ಲೆಯಲ್ಲಿ ಪಕ್ಷ ಬಲಿಷ್ಠಗೊಳಿಸಲು ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲು ಸಹಾಯ ಮಾಡಬೇಕಾಗಿ ಮನವಿ ಮಾಡುತ್ತೇನೆ’ ಎಂದು ಕೋರಿದರು.

ಈಗ ರಾಜ್ಯ ಸರ್ಕಾರದ ನಿಗಮ ಮಂಡಳಿಯಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಯ ನಾಮನಿರ್ದೇಶನ ನಡೆಯುತ್ತಿರುವುದರಿಂದ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರು ಬಹಳ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಹಿರಿಯರು ಮತ್ತು ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಜಾತಿವಾರು, ಧರ್ಮವಾರು ಅಭ್ಯರ್ಥಿಗಳನ್ನು ಗುರುತಿಸಿ ಅವಕಾಶ ಮಾಡಿಕೊಡಬೇಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಮುನಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮಾ, ಅಲ್ಪಸಂಖ್ಯಾತ ಜಿಲ್ಲಾ ಮುಖಂಡ ಥಾಮಸ್ ಇದ್ದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿನಯ್ ಗಾಂಧಿ.

Share this article