ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ, ಕೆಂಪಣ್ಣ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಯಲಿ
ಕನ್ನಡಪ್ರಭ ವಾರ್ತೆ ಹಾವೇರಿಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇರಲು ಸಾಧ್ಯವೇ ಇಲ್ಲ. ಎಷ್ಟು ದಿನ ಇರುತ್ತೆ ಎಂಬುದು ಗೊತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಶಾಸಕರಿಗೆ ಅನುದಾನ ನೀಡುತ್ತಿಲ್ಲ. ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಿಲ್ಲ. ಎಲ್ಲ ಮಂತ್ರಿಗಳು ಇರುವಷ್ಟು ದಿನ ಲೂಟಿ ಹೊಡೆಯೋಣ ಅಂತ ಇದ್ದಾರೆ. ಸಿಎಂ ಹಾಗೂ ಅವರ ಮಗನದ್ದು ಇದರಲ್ಲಿ ಸಿಂಹ ಪಾಲಿದೆ ಎಂದು ನೇರ ಆರೋಪ ಮಾಡಿದರು.ಡಿ.ಕೆ. ಶಿವಕುಮಾರ್ ಮೇಲೆ ಗುತ್ತಿಗೆದಾರರ ಸಂಘದ ಕೆಂಪಣ್ಣ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಈ ಹಿಂದೆ ನನ್ನ ಮೇಲೆ ಆರೋಪ ಬಂದಾಗಲೂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಅಂತ ಹೇಳಿದ್ದೆ. ಡಿ.ಕೆ. ಶಿವಕುಮಾರ ಹೆಸರಲ್ಲಿ ಎಂಜಿನಿಯರ್ ಪ್ರಹ್ಲಾದ್ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಂಥವರು ಹಣ ಕೊಡುತ್ತಿದ್ದಾರೆ ಅಂತ ಹೇಳಿದ ಮೇಲೂ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟ ಹಾಗೆ ಆಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ರಾಜ್ಯದಲ್ಲಿ ಎಲ್ಲೇ ಹೋದರೂ ರೈತರು ಕಣ್ಣೀರು ಹಾಕುತ್ತಿದ್ದಾರೆ. ಎಲ್ಲ ಬೆಳೆ ನಾಶ ಆಗಿದೆ. ಆದರೂ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ. ಯಾವುದೇ ಮಂತ್ರಿ ಒಂದು ಹೊಲಕ್ಕೆ ಹೋಗಿಲ್ಲ, ರೈತನ ಬಳಿ ಮಾತಾಡಿಲ್ಲ. ಸರ್ವೇ ಮಾಡುವಲ್ಲೂ ವಿಳಂಬ ಮಾಡಿ, ಆನಂತರ ಬರ ಘೋಷಣೆಗೂ ತಡ ಮಾಡಿದರು. ಗ್ಯಾರಂಟಿಗಳಿಗೆ ಹಣ ಕೊಡುತ್ತೇವೆ ಎಂದು ಅಲ್ಲಿಯೂ ಫೇಲ್ ಆಗಿದ್ದಾರೆ. ರೈತರಿಗೆ ಪರಿಹಾರ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರವನ್ನು ರೈತರಿಗೆ ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.ಸಿಎಂ ಗದ್ದುಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ತಾವೇ ಮುಂದಿನ 5 ವರ್ಷ ಸಿಎಂ ಅಂದರು. ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಡಿ.ಕೆ. ಶಿವಕುಮಾರ ಹೇಳುತ್ತಾರೆ. ಒಂದು ಕಡೆ ಇಷ್ಟು ದಿನ ಸಿದ್ದರಾಮಯ್ಯ ಪರ ಇದ್ದ ಕೆ.ಎನ್. ರಾಜಣ್ಣ ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಅಂದರು. ಪ್ರಿಯಾಂಕ್ ಖರ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾನೇ ಮುಖ್ಯಮಂತ್ರಿ ಅಂದರು. ಕಾಂಗ್ರೆಸ್ನಲ್ಲಿ ಎಷ್ಟು ಗುಂಪಿದೆ ಎಂಬುದೇ ಗೊತ್ತಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಏನು ಹೇಳುತ್ತೋ ಅದಾಗುತ್ತದೆ. ನಾನೇ ಸಿಎಂ ಅಂತ ನಮ್ಮಲ್ಲಿ ಅವರವರೇ ತೀರ್ಮಾನ ಮಾಡಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಚುನಾವಣೆಯಲ್ಲಿ ಗೆಲುವು ಸೋಲು ಇದ್ದಿದ್ದೇ. ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವವರು ನಾವೇ. ಶ್ರೀಕೃಷ್ಣ ಪರಮಾತ್ಮನ ತಂತ್ರ ಮಾಡುತ್ತೇವೆ. ಧರ್ಮವನ್ನೂ ಉಳಿಸುತ್ತೇವೆ, ಶತ್ರು ಸಂಹಾರವನ್ನೂ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.ತೀರ್ಥಹಳ್ಳಿ ಮೂಲದ ಮಹಿಳಾ ಅಧಿಕಾರಿ ಹತ್ಯೆ ವಿಚಾರಣೆಯಾದ ಬಳಿಕವೇ ಸತ್ಯಾಂಶ ಹೊರಬೀಳಲಿದೆ. ಹಾನಗಲ್ಲಿನಲ್ಲಿ ವಿಜಯದಶಮಿಯಂದು ಗಲಾಟೆಯಾಯಿತು. ಮಸೀದಿ ಎದುರು ಹೋಗಬಾರದಾ? ಪಲ್ಲಕ್ಕಿ ಹೋಗುತ್ತಿದ್ದಾಗ ಗಲಾಟೆ ಮಾಡಿದರು. ಹಾನಗಲ್ಲ ಪಾಕಿಸ್ತಾನದಲ್ಲಿ ಇದೆಯಾ? ಚುನಾವಣೆ ಸಮಯದಲ್ಲಿ ಸಚಿವ ಜಮೀರ್ ರಾಜಸ್ಥಾನಕ್ಕೆ ಹೋಗಿದ್ದರು. ಮುಲ್ಲಾಗಳು, ಮೌಲ್ವಿಗಳು ಕಾಂಗ್ರೆಸ್ಗೆ ವೋಟ್ ಕೊಡಬೇಕು ಅಂತ ನೇರವಾಗಿ ಕೋಮು ಪ್ರಚಾರ ಮಾಡಿದರು.
ಶಿವಮೊಗ್ಗದಲ್ಲಿಯೂ ಹೀಗೆ ಮಾಡೋಕೆ ಹೋದರು. ಶಿವಮೊಗ್ಗದಲ್ಲಿ ಗಲಾಟೆ ಆಗಿದ್ದರೆ ಮುಸಲ್ಮಾನರು ಉಳಿಯುತ್ತಿರಲಿಲ್ಲ. ಹರ್ಷಾ ಕೊಲೆ ಬಳಿಕ ಹಿಂದೂ ಸಮಾಜ ಜಾಗ್ರತವಾಯಿತು. ತಪ್ಪು ಮಾಡಿದ ಎಲ್ಲರೂ ಜೈಲಿಗೆ ಹೋದರು. ಕೋಮು ಗಲಭೆಗೆ ಕಾರಣ ಆದವರ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಹಿಂದೂಗಳ ಮೇಲೆ ಕೇಸ್ ಹಾಕಲಾಗಿದೆ. ಈ ಪ್ರಕರಣದಲ್ಲಿ ಎಷ್ಟು ಎಷ್ಟು ಜನ ಮುಸಲ್ಮಾನ ಗುಂಡಾಗಳನ್ನು ಅರೆಸ್ಟ್ ಮಾಡಿದ್ದೀರಿ ಎಂದು ಈಶ್ವರಪ್ಪ ಪ್ರಶ್ನಿಸಿದರು.