ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಶಾಸಕ ಜಿ.ಎಸ್. ಪಾಟೀಲ

KannadaprabhaNewsNetwork |  
Published : Nov 14, 2025, 03:15 AM IST
ಗಜೇಂದ್ರಗಡ ಸಮೀಪದ ಗೋಗೇರಿ ಗ್ರಾಮದಲ್ಲಿ ಭವಾನಿ ಮರಾಠಾ ಸಮುದಾಯ ಭವನ ಕಟ್ಟಡಕ್ಕೆ ಶಾಸಕ ಜಿ.ಎಸ್.ಪಾಟೀಲ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಪ್ರತಿ ಮನೆಯನ್ನು ತಲುಪಿಸುವುದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ಆದರೆ ಗ್ಯಾರಂಟಿಗಳ ಬಗ್ಗೆ ಕುಹಕ ಮಾಡಿದ್ದ ಬಿಜೆಪಿಯೇ ಇಂದು ನೆರೆಯ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಕಲು ಮಾಡುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಆರೋಪಿಸಿದರು.

ಗಜೇಂದ್ರಗಡ: ಬಿಜೆಪಿ ಸೃಷ್ಟಿಸುತ್ತಿರುವ ಗೊಂದಲಗಳಿಗೆ ಕಿವಿಗೊಡಬೇಡಿ. ರಾಜ್ಯದ ಪ್ರತಿ ಗ್ರಾಮಗಳಿಗೆ ಸಮರ್ಪಕ ರಸ್ತೆ, ಕುಡಿವ ನೀರು ಸೇರಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಸಮೀಪದ ಗೋಗೇರಿ ಗ್ರಾಮದಲ್ಲಿ ಗುರುವಾರ ೨೦೨೫- ೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಲಭ್ಯಗಳ ಯೋಜನೆ ಅಡಿಯಲ್ಲಿ ₹೨೦ ಲಕ್ಷ ವೆಚ್ಚದಲ್ಲಿ ಭವಾನಿ ಮರಾಠಾ ಸಮುದಾಯ ಭವನ ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದರು.ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಗರು ಟೀಕಿಸಲು ಆರಂಭಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಪ್ರತಿ ಮನೆಯನ್ನು ತಲುಪಿಸುವುದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ಆದರೆ ಗ್ಯಾರಂಟಿಗಳ ಬಗ್ಗೆ ಕುಹಕ ಮಾಡಿದ್ದ ಬಿಜೆಪಿಯೇ ಇಂದು ನೆರೆಯ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಕಲು ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಜನತೆ ಹಾಗೂ ರೈತರ ಆಶೋತ್ತರಗಳಿಗೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಗಜೇಂದ್ರಗಡ ಭಾಗದ ೧೧ ಕೆರೆಗಳನ್ನು ತುಂಬಿಸಲು, ಗೋಗೇರಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಅಂದಾಜು ₹೨ ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ಮತ್ತಷ್ಟು ಬಲ ನೀಡುವ ಮೂಲಕ ವಿಪಕ್ಷಗಳಿಗೆ ತಕ್ಕಪಾಠ ಕಲಿಸಬೇಕು ಎಂದರು. ಮುಖಂಡ ಕೆ.ಎಸ್. ಕೊಡಗೇರಿ ಪ್ರಾಸ್ತಾವಿಕವಾಗಿ ಮಾತನಾಡುವ ವೇಳೆ ಶಾಸಕ ಜಿ.ಎಸ್. ಪಾಟೀಲ ಅವರನ್ನು ಭಾವಿ ಸಚಿವರು ಎಂದಾಗ ಸಭೆಯಲ್ಲಿದ್ದ ಜನರು ಚಪ್ಪಾಳೆ ತಟ್ಟಿದರು.

ಮುಖಂಡ ಅಶೋಕ ಬಾಗಮಾರ ಮಾತನಾಡಿ, ಸರ್ವ ಸಮುದಾಯಗಳ ನಾಯಕರಾಗಿರುವ ಪಕ್ಷದ ಕಟ್ಟಾಳಾಗಿರುವ ಶಾಸಕ ಜಿ.ಎಸ್. ಪಾಟೀಲ ಅವರು ರೋಣ ಮತಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ನಿರ್ಮಿಸಲು ಶ್ರಮಿಸುತ್ತಿದ್ದಾರೆ. ಇಂತಹ ಜನನಾಯಕರು ಸಚಿವರಾಗಬೇಕು ಎಂದರು.

ಮುಖಂಡ ಮಲ್ಲಿಕಾರ್ಜುನ ಗಾರಗಿ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲ ಅವರು ಸಚಿವರಾಗಬೇಕು ಎಂಬುದು ಗ್ರಾಮದ ಹಾಗೂ ಕ್ಷೇತ್ರದ ಜನರ ಬೇಡಿಕೆಯಾಗಿದ್ದು, ಶಾಸಕರು ಸಚಿವರಾದರೆ ರೋಣ ಮತಕ್ಷೇತ್ರವನ್ನು ರಾಜ್ಯವೇ ತಿರುಗಿ ನೋಡುವಂತೆ ಮಾಡುವ ಶಕ್ತಿ ಹೊಂದಿದ್ದಾರೆ ಎಂದರು.ಈ ವೇಳೆ ಪರಸಪ್ಪ ಭೋಸ್ಲೆ, ಶಿರವಾಜ ಘೋರ್ಪಡೆ, ಕಳಕಯ್ಯ ಹಿರೇಮಠ, ಶಂಕ್ರಯ್ಯ ಮೇಟಿಮಠ, ಶರಣಪ್ಪ ಬೆಟಗೇರಿ, ಹನುಮಪ್ಪ ಹೊರಪೇಟಿ, ಶ್ರೀಧರ ಬಿದರಳ್ಳಿ, ಇಮಾಮಸಾಬ ಬಾಗವಾನ, ಶ್ರೀಧರ ಗಂಜಿಗೌಡರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣ ತಾಲೂಕಿನಲ್ಲಿ 36 ಶುದ್ಧ ನೀರಿನ ಘಟಕಗಳೇ ಬಂದ್!
ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬೆಳೆಸುವುದು ಅವಶ್ಯಕ