ಶಿಗ್ಗಾಂವಿ: ಗೋವಿನಜೋಳ ಬೆಳೆಗೆ ಬೆಂಬಲ ಬೆಲೆ ನಿಗದಿ ಮತ್ತು ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ವಿಲ್ಸನ್ ಅವರಿಗೆ ಮನವಿ ಸಲ್ಲಿಸಿದರು.ಪ್ರಸಕ್ತ ವರ್ಷ ಅತಿಯಾದ ಮಳೆಯಿಂದ ಸರಿಯಾಗಿ ಬೆಳೆ ಬರದಾಗಿವೆ. ಹೀಗಾಗಿ ಗೋವಿನ ಜೋಳ ಈ ವರ್ಷದ ಇಳುವರಿ ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ ೧೦ರಿಂದ ೧೫ ಕ್ವಿಂಟಲ್ ಕಡಿಮೆಯಾಗಿದೆ. ಅಲ್ಪ ಸ್ವಲ್ಪ ಬೆಳೆದ ಗೋವಿನಜೋಳಕ್ಕೆ ಕೇವಲ ₹ ೧೫೦೦ ರಿಂದ ₹ ೧೮೦೦ರವರೆಗೆ ಇದೆ. ಅದರಿಂದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ರೈತರು ದೂರಿದರು.ಕಳೆದ ವರ್ಷ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ ೨೪೦೦ ರಿಂದ ₹ ೨೮೦೦ ಬೆಲೆ ಸಿಗುತ್ತಿತ್ತು, ಆದರೆ ಈ ವರ್ಷ ರೈತ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೇ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ ರೈತರ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಇಂತಹ ಸಮಯದಲ್ಲಿ ಸರ್ಕಾರ ಮುಂದೆ ಬಂದು ಪ್ರತಿ ತಾಲೂಕಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು.ಕೇಂದ್ರ ಸರ್ಕಾರ ನಿಗದಿ ಪಡಿಸಿದ ಎಂ.ಎಸ್.ಪಿ ದರ ₹ ೨೪೦೦ಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ₹ ೬೦೦ಗಳನ್ನು ಸೇರಿಸಿ ಒಟ್ಟು ₹ ೩೦೦೦ (ಮೂರು ಸಾವಿರ)ಗಳನ್ನು ನೀಡಿ ಸ್ಥಿರ ನೆರವಿಗೆ ಬರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಬೆಳೆ ಹಾನಿಯಿಂದ ಇಡೀ ರೈತ ಸಮೂಹ ಕಂಗಾಲಾಗಿದೆ. ಹಾವೇರಿ ಜಿಲ್ಲೆಯ ೭ ತಾಲೂಕಿನ ಜನ ಪ್ರತಿನಿಧಿಗಳು ಇಲ್ಲಿ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.ಮುಖಂಡರಾದ ಮುತ್ತಣ್ಣ ಗುಡಿಗೇರಿ, ಮಂಜುನಾಥ ಕಂಕನವಾಡ, ನಿಂಗಪ್ಪ ಹುಬ್ಬಳ್ಳಿ, ಬಸಪ್ಪ ಹಾವೇರಿ, ಫಕ್ಕೀರಪ್ಪ ಗಾಣಿಗೇರ, ಮುನೀರ್ ಮುಲ್ಲಾ, ಬಸಲಿಂಗಪ್ಪ ಕುನ್ನೂರ, ಪಂಚಯ್ಯ ಹಿರೇಮಠ, ಮಾಲತೇಶ ಬಾರಕೇರ, ಮಂಜುನಾಥ ಹಾವೇರಿ, ನಾಗಪ್ಪ ಕೊಟ್ಟನದಲ್ಲಿ ಪಾಲ್ಗೊಂಡಿದ್ದರು.