ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಿರುವ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯ ಜಿಲ್ಲೆಯ ಶಾಸಕರು ಮತ್ತು ಸಚಿವರನ್ನು ಒಳಗೊಂಡ ಸಭೆ ಕರೆಯುತ್ತಾರೆ. ಆದರೆ, ವಿಪಕ್ಷ ಶಾಸಕನಾದ ನನ್ನನ್ನು ಮಾತ್ರ ಸಭೆಗೆ ಆಹ್ವಾನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದು ಶಾಸಕನಾದ ನನಗೆ ಹಾಗೂ ಮತ ನೀಡಿದ ತಾಲೂಕಿನ ಎಲ್ಲಾ ಸಮಸ್ತ ಮತದಾರರಿಗೂ ಮಾಡುತ್ತಿರುವ ಅವಮಾನವಾಗಿದೆ.ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸರ್ಕಾರ 50 ಕೋಟಿ ರು. ಅನುದಾನ ನೀಡಿದೆ. ನನಗೆ ಮಾತ್ರ 25 ಕೋಟಿ ರು. ಅನುದಾನ ನೀಡಿ ಮಲತಾಯಿಯ ಮಗನಂತೆ ನೋಡುತ್ತಿದೆ ಎಂದು ದೂರಿದರು.
ತಾಲೂಕನ್ನು ಅಭಿವೃದ್ಧಿಪಡಿಸಬೇಕೆಂಬ ಅಪಾರ ಮನಸ್ಸಿದ್ದರೂ ಅನುದಾನದ ಲಭ್ಯತೆ, ತಾರತಮ್ಯ, ಮಲತಾಯಿ ಧೋರಣೆ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ನನ್ನ ಗುರಿ ತಲುಪಲಾಗುತ್ತಿಲ್ಲ. ಇದರ ನಡುವೆಯೂ ಕ್ಷೇತ್ರದ ಜನರ ಕಷ್ಟ- ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಪಕ್ಷ ರಾಜಕಾರಣ ಕೈಬಿಟ್ಟು ಎಲ್ಲಾ ಶಾಸಕರನ್ನು ಸಮಾನವಾಗಿ ನೋಡಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೆ ರೈತರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಯೋಗೇಶ್, ಮಾಜಿ ಅಧ್ಯಕ್ಷ ನಾಗೇಂದ್ರ, ಆಶಾ ನಾಗೇಂದ್ರ, ಸದಸ್ಯರಾದ ಪುಟ್ಟರಾಜು, ಮಂಜುನಾಥ್, ಹೇಮಾವತಿ, ದಿವ್ಯಶ್ರೀ, ಲೋಕೇಶ್, ಜಿಲ್ಲಾ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ಅಜಯ್ ರಾಮೇಗೌಡ, ಗ್ರಾಮದ ಮುಖಂಡರಾದ ಶಂಭು, ಪಾಪೇಗೌಡ, ಶಂಕರೇಗೌಡ, ಉಮೇಶ್ ಸೇರಿದಂತೆ ಹಲವರಿದ್ದರು.