ಕಾಂಗ್ರೆಸ್ ಗ್ಯಾರಂಟಿಗಳು ಭ್ರಷ್ಟಾಚಾರದ ವ್ಯವಸ್ಥಿತ ಮಾರ್ಗ

KannadaprabhaNewsNetwork | Published : Dec 12, 2024 12:32 AM

ಸಾರಾಂಶ

ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸದೆ ಸುಳ್ಳು ಹೇಳಿಕೆಗಳನ್ನು ನೀಡುತ್ತ ತಪ್ಪಾಗಿ ನಡೆದುಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರನ್ನು ಮತ್ತಷ್ಟು ಬಡವರನ್ನಾಗಿಸುವುದರ ಜತೆಗೆ ರಾಜ್ಯ ಸರ್ಕಾರದ ವ್ಯವಸ್ಥಿತ ಭ್ರಷ್ಟಾಚಾರದ ಮಾರ್ಗವಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸದೆ ಸುಳ್ಳು ಹೇಳಿಕೆಗಳನ್ನು ನೀಡುತ್ತ ತಪ್ಪಾಗಿ ನಡೆದುಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರನ್ನು ಮತ್ತಷ್ಟು ಬಡವರನ್ನಾಗಿಸುವುದರ ಜತೆಗೆ ರಾಜ್ಯ ಸರ್ಕಾರದ ವ್ಯವಸ್ಥಿತ ಭ್ರಷ್ಟಾಚಾರದ ಮಾರ್ಗವಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

ಪಟ್ಟಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರು ಮತದಾರರನ್ನು ಒಲಿಸಿಕೊಳ್ಳಲು ಈ ಯೋಜನೆಗಳನ್ನು ಜಾರಿಗೊಳಿಸಿದರು. ಆದರೆ, ರಾಜ್ಯದ ಅಭಿವೃದ್ಧಿ, ಪ್ರಮುಖ ನೀರಾವರಿ ಯೋಜನೆಗಳಿಗೆ ಅನುದಾನವಿಲ್ಲದೇ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲದೇ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.ರಾಜ್ಯದ ಜನರು ಇಂತಹ ಯೋಜನೆಗಳನ್ನು ನೀವು ಜಾರಿಗೆ ತನ್ನಿ ಎಂದು ಹೇಳಿಲ್ಲ. ಅದರ ಬದಲು ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಗಳನ್ನು ಕೊಡಿ, ರೈತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿರಿ. ಕೇವಲ ಮತದಾರರನ್ನು ಒಲಿಸಿಕೊಂಡರೇ ಸಾಲದು, ಅದಕ್ಕೆ ಪೂರಕವಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರಬೇಕು ಎಂದರು.ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಅದನ್ನು ರದ್ದುಪಡಿಸುವುದಾಗಿ ಹೇಳಿ ಇಂದು ಅದನ್ನೇ ಒಪ್ಪಿಕೊಂಡು ಮುಂದುವರಿಸುತ್ತಿದ್ದಾರೆ. ಇದರಿಂದ ಕೃಷಿ ಭೂಮಿ ಉದ್ಯಮಿಗಳ ಪಾಲಾಗಿ ಅನೇಕ ರೈತರಿಗೆ ಅನ್ಯಾಯವಾಗಿದೆ. ಇದಲ್ಲದೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಾಗಬೇಕು. ರೈತರು ಉತ್ಪಾದಿಸಿದ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸುವ ವ್ಯವಸ್ಥೆ ಕೈಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಭೇದ-ಭಾವ ಮಾಡದೇ ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನೋಂದಣಿ ಆಗಿರುವುದನ್ನು ನಾವು ರೈತ ಸಂಘದಿಂದ ಉಗ್ರವಾಗಿ ಪ್ರತಿಭಟಿಸಿದಾಗ ಮುಖ್ಯಮಂತ್ರಿಗಳು ತಕ್ಷಣವೇ ಅದನ್ನು ರದ್ದು ಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಮಾತ್ರ ಜಾರಿಯಾಗಿದ್ದು, ಇನ್ನೂ ಅನೇಕ ಜಿಲ್ಲೆಗಳಲ್ಲಿ ಜಾರಿಯಾಗಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.ಹಂಗಾಮಿ ಸಾಗುವಳಿ ಮಾಡುತ್ತಿರುವ ರೈತರ ಜಮೀನುಗಳನ್ನು ಸಕ್ರಮ ಸಾಗುವಳಿ ಮಾಡಬೇಕು. ರೈತರ ಕಬ್ಬಿಗೆ ಕಾರ್ಖಾನೆಯ ಮಾಲೀಕರು ನೀಡಬೇಕಾದ ಎಫ್‌ಆರ್‌ಪಿ ದರಕ್ಕೆ ಕೆಲವು ಮಾನದಂಡ ಮಾಡಬೇಕು. ಒಂದೊಂದು ಹೊಲದಲ್ಲಿ ಒಂದೊಂದು ರೀತಿಯ ಉತ್ಪನ್ನ ಇರುತ್ತದೆ. ಆ ಒಲವಿನ ಉತ್ಪನ್ನವನ್ನು ಆಧರಿಸಿ ಸೂಕ್ತ ದರವನ್ನು ನೀಡಬೇಕು. ಬಹುತೇಕ ಕಾರ್ಖಾನೆಗಳು ಶಾಸಕರ ಮತ್ತು ಮಂತ್ರಿಗಳ ಒಡೆತನದಲ್ಲಿರುವುದರಿಂದ ರೈತರಿಗೆ ಸೂಕ್ತವಾದ ಎಫ್‌ಆರ್‌ಪಿ ದರ ಮತ್ತು ತೂಕದಲ್ಲಿ ಪಾರದರ್ಶಕತೆ ಸಿಗುತ್ತಿಲ್ಲ. ಸರ್ಕಾರದಿಂದಲೇ ತೂಕದ ಯಂತ್ರಗಳನ್ನು ಅಳವಡಿಸಿ ಕಬ್ಬು ಪೂರೈಸುವ ರೈತರಿಗೆ ತೂಕದಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಖಾಸಗೀಕರಣ ಗೊಳಿಸುವುದರಿಂದ ಮಹಾರಾಷ್ಟ್ರದ ಮಾದರಿಯoತೆ ಪ್ರಿಪೇಡ್ ಕರೆಂಟ್ ಪದ್ಧತಿ ಜಾರಿಗೆ ಬರುತ್ತದೆ. ಇಲ್ಲಿ ಬಂಡವಾಳ ಶಾಹಿಗಳು ದುಡ್ಡು ಹೂಡಿಕೆ ಮಾಡುವುದರಿಂದ ದುಡ್ಡು ಕೊಟ್ಟವರಿಗೆ ಮಾತ್ರ ಕರೆಂಟ್ ಕೊಡುತ್ತಾರೆ. ಯೋಜನೆ ಬಡ ರೈತರಿಗೆ ಮಾರಕವಾಗಿದೆ. ರಾಜ್ಯ ಸರ್ಕಾರ ಈ ಯೋಜನೆಯ ಜಾರಿಗೆ ತರಬಾರದು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಮುಖಂಡರಾದ ವೀರಭದ್ರಯ್ಯ ಭೀಮಸಿ, ರಮೇಶ ಮಡಿವಾಳ, ಮಹಾದೇವ ಮಡಿವಾಳ ಸೇರಿದಂತೆ ಇನ್ನಿತರರು ಇದ್ದರು.

Share this article