ಬಿಜೆಪಿ ಕೋಟೆ ಛಿದ್ರ ಮಾಡಿದ ಕಾಂಗ್ರೆಸ್

KannadaprabhaNewsNetwork |  
Published : Jun 05, 2024, 12:30 AM IST
4ಕೆಪಿಎಲ್30 ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಜಯ ಸಾಧಿಸಿ, ವಿಜಯೋತ್ಸವದಲ್ಲಿ ಭಾಗವಹಿಸಿರುವುದು | Kannada Prabha

ಸಾರಾಂಶ

ಹದಿನೈದು ವರ್ಷಗಳಿಂದ ಬಿಜೆಪಿಯೇ ಮೆರೆಯುತ್ತಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಡಾ. ಬಸವರಾಜ ಅವರನ್ನು ಪರಾಭವಗೊಳಿಸುವ ಮೂಲಕ ಬಿಜೆಪಿ ಕೋಟೆಯನ್ನು ಛಿದ್ರಗೊಳಿಸಿದ್ದಾರೆ.

15 ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಮಡಿಲಿಗೆ ಕೊಪ್ಪಳ

ರಾಜಶೇಖರ ಹಿಟ್ನಾಳಗೆ 46357 ಮತಗಳ ಅಂತರದ ಗೆಲುವು

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಸೋಲು

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹದಿನೈದು ವರ್ಷಗಳಿಂದ ಬಿಜೆಪಿಯೇ ಮೆರೆಯುತ್ತಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಡಾ. ಬಸವರಾಜ ಅವರನ್ನು ಪರಾಭವಗೊಳಿಸುವ ಮೂಲಕ ಬಿಜೆಪಿ ಕೋಟೆಯನ್ನು ಛಿದ್ರಗೊಳಿಸಿದ್ದಾರೆ.

ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ಮತ ಎಣಿಕೆಯಲ್ಲಿ ಬಿಜೆಪಿಯ ಡಾ. ಬಸವರಾಜ 617154 ಮತಗಳನ್ನು ಪಡೆದರೇ ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ 663511 ಮತಗಳನ್ನು ಪಡೆಯುವ ಮೂಲಕ ಬರೋಬ್ಬರಿ 46357 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪ್ರಾರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ರಾಜಶೇಖರ ಹಿಟ್ನಾಳ ಅಂತರ ತೀರಾ ಕಡಿಮೆ ಇದ್ದಿದ್ದರಿಂದ ಭಾರಿ ಕುತೂಹಲಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಬಿಜೆಪಿ 76 ಮತಗಳ ಮುನ್ನಡೆ ಸಾಧಿಸಿದಾಗ ಬಿಜೆಪಿಯಲ್ಲಿ ಆಶಾಭಾವನೆ ಮೂಡಿತ್ತಾದರೂ ಅದು ಬಹಳ ಹೊತ್ತು ನಿಲ್ಲಲಿಲ್ಲ. ನಂತರದ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲು ಪ್ರಾರಂಭಿಸಿದ್ದು ಮತ್ತೆ ಹಿನ್ನಡೆ ಕಾಣಲೇ ಇಲ್ಲ. 12-13 ನೇ ಸುತ್ತಿನವರೆಗೂ ಅತ್ಯಂತ ಕಡಿಮೆ ಅಂತರವಿತ್ತು. ನಂತರ ಕಾಂಗ್ರೆಸ್ ನಡೆದಿದ್ದೆ ದಾರಿ ಎನ್ನುವಂತೆ ಆಯಿತು. ಲೀಡ್ ಹೆಚ್ಚಳವಾಗುತ್ತಲೇ ಸಾಗಿ ಕೊನೆಯ ವೇಳೆ ಸುಮಾರು 46357 ಮತಗಳ ಅಂತರದಿಂದ ಗೆಲುವು ನಿರ್ಧಾರವಾಯಿತು.

ಹಿಟ್ನಾಳ ಕುಟುಂಬ ತೃತೀಯ ಪ್ರಯತ್ನದಲ್ಲಿ ಕೊನೆಗೂ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತೆ ಆಗಿದೆ. ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಹಾಗೂ ರಾಜಶೇಖರ ಹಿಟ್ನಾಳ 2014, 2019ರಲ್ಲಿ ಸತತವಾಗಿ ಸಂಗಣ್ಣ ಕರಡಿ ವಿರುದ್ಧ ಪರಾಭವಗೊಂಡಿದ್ದರು.

ಈ ಬಾರಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿಸಿ, ಹೊಸ ಮುಖ ಡಾ. ಬಸವರಾಜ ಅವರಿಗೆ ಮಣೆ ಹಾಕಿ ಹೊಸ ಪ್ರಯೋಗ ಮಾಡಿತಾದರೂ ಯಶಸ್ಸು ಕಾಣಲಿಲಿಲ್ಲ.

ಈ ನಡುವೆ ಟಿಕೆಟ್ ತಪ್ಪಿದ್ದರಿಂದ ಹಾಲಿ ಸಂಸದ ಸಂಗಣ್ಣ ಕರಡಿ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವಿಗೆ ಶ್ರಮಿಸಿದರು.

ಒಗ್ಗಟ್ಟು ಪ್ರದರ್ಶನ:

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ ಪಕ್ಷ ಒಗ್ಗಟ್ಟು ಪ್ರದರ್ಶನ ಮಾಡಿತು. ಪರಿಣಾಮ ಗೆಲುವು ಸುಲಭವಾಯಿತು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಒಂದಷ್ಟು ವಿವಾದ ಉಂಟಾಯಿತಾದರೂ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥ ಮಾಡಿದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಗುಂಪು ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಎಚ್. ಆರ್. ಶ್ರೀನಾಥ ಹಾಗೂ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ಗುಂಪು ಒಗ್ಗೂಡಿಯೇ ಕಾಂಗ್ರೆಸ್ ಪರವಾಗಿ ಕೆಲಸ ಮಾಡುವಂತೆ ಆಗಿದ್ದರಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 15,900 ಮತಗಳ ಲೀಡ್ ಕಾಂಗ್ರೆಸ್ ಬಂದಿದ್ದು ದೊಡ್ಡ ಪ್ಲಸ್ ಆಯಿತು.

ಸಿರಗುಪ್ಪ ಕ್ಷೇತ್ರದಲ್ಲಿ 21,225 ಮತಗಳ ಲೀಡ್ ಕಾಂಗ್ರೆಸ್‌ಗೆ ಬಂದಿದ್ದು ವಿಶೇಷವಾಯಿತು. ಉಳಿದಂತೆ ಕನಕಗಿರಿ, ಯಲಬುರ್ಗಾ, ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಪಡೆದುಕೊಂಡರೆ ಬಿಜೆಪಿ ಹಿನ್ನಡೆ ಪಡೆಯಿತು. ಕುಷ್ಟಗಿ ಮತ್ತು ಸಿಂಧನೂರು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಸ್ವಲ್ಪ ಮುನ್ನಡೆ ಸಾಧಿಸಿದಂತೆ ಆಯಿತು. ಪರಿಣಾಮ ಕಾಂಗ್ರೆಸ್ ಗೆಲುವಿನತ್ತ ಸಾಗಿ, ಅಂತಿಮವಾಗಿ ರಾಜಶೇಖರ ಹಿಟ್ನಾಳ ಅವರ ಗೆಲುವು ಘೋಷಣೆ ಮಾಡಲಾಯಿತು.

ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳು ವರದಾನವಾಗಿ ಪರಿಗಣಿಸಿದವು. ಅದರಲ್ಲೂ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿಗಳು ಪ್ರಚಾರ ವೇಳೆಯಲ್ಲಿ ಅನುಕೂಲವಾಗಿ ಮತದಾರರ ಮನವೊಲಿಸಲು ಸುಲಭವಾಯಿತು.

ಇದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಾವೇ ಸ್ಪರ್ಧೆ ಮಾಡಿದಂತೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡರು.

ಇದರ ಜೊತೆಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಗಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದರು. ಎಂಟು ಕ್ಷೇತ್ರಗಳಲ್ಲಿ ಸುತ್ತಾಡಿ, ಅಲ್ಲಿದ್ದ ಸಣ್ಣಪುಟ್ಟ ಸಮಸ್ಯೆಗಳನ್ನು ಹೈಕಮಾಂಡ್‌ ಸಹಾಯದೊಂದಿಗೆ ಇತ್ಯರ್ಥ ಮಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ, ತುಂಗಭದ್ರಾ ಕಾಡಾ ಅಧ್ಯಕ್ಷರ ನೇಮಕವನ್ನು ಮುತುವರ್ಜಿ ವಹಿಸಿ ಮಾಡಿಸುವ ಮೂಲಕ ಪಕ್ಷದ ಬಲ ಹೆಚ್ಚಳವಾಗುವಂತೆ ಮಾಡುತ್ತಲೇ ತಮ್ಮ ಸಹೋದರನ ಗೆಲುವಿಗೆ ವೇದಿಕೆ ಸಿದ್ಧಗೊಳಿಸಿದರು. ಇದರ ಜೊತೆಗೆ ಅಹಿಂದ ಮತಗಳ ಕ್ರೂಢೀಕರಣ ಮಾಡಿದ್ದು ಅನುಕೂಲವಾಗಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿನ ಲಿಂಗಾಯತ ಮತಗಳು ಚದುರಿ ಹೋಗುವ ಪ್ರಮಾಣವನ್ನು ತಡೆಯುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾದರು. ಅದರ ಪರಿಣಾಮ ಗೆಲುವು ಸುಲಭವಾಯಿತು.ಮುಗಿಲು ಮುಟ್ಟಿದ ಸಂಭ್ರಮ:

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಸಾಧಿಸುತ್ತಿದ್ದಂತೆ ವಿಜಯೋತ್ಸವ ಸಂಭ್ರಮ ಮುಗಿಲುಮುಟ್ಟಿತ್ತು.

ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಕಾಲೇಜು ಮೈದಾನದ ಎದುರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರೂ ಸಹ ಲೆಕ್ಕಿಸದೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು. ಬಣ್ಣ ಎರಚಾಡಿ, ಕೇಕೆ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿದರು.

ಬೈಕ್ ರ್‍ಯಾಲಿ ಭರ್ಜರಿಯಾಗಿ ನಡೆಯಿತು. ಕೊಪ್ಪಳ ನಗರದ ರಸ್ತೆಗಳುದ್ದಕ್ಕೂ ವಿಜಯೋತ್ಸವ ಆಚರಣೆ ಮಾಡಲಾಯಿತು.

ಗವಿಮಠಕ್ಕೆ ಭೇಟಿ:

ಗೆಲುವು ಸಾಧಿಸುತ್ತಿದ್ದಂತೆ ರಾಜಶೇಖರ ಹಿಟ್ನಾಳ ನಗರದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಗದ್ದುಗೆ ದರ್ಶನ ಪಡೆದು, ಶ್ರೀಗಳ ಆಶೀರ್ವಾದ ಪಡೆದರು. ಅಲ್ಲಿಂದ ನಗರದಾದ್ಯಂತ ಮೆರವಣಿಗೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1ನೇ ಕ್ಲಾಸ್‌ಗೆ ವಯೋಮಿತಿ 5.5 ವರ್ಷಕ್ಕಿಳಿಸಲು ಪೋಷಕರ ಹೋರಾಟ
ಆಟೋ ಎಲ್‌ಪಿಜಿ ಕೊರತೆ ಇಲ್ಲ : ಗ್ರಾಹಕರ ವ್ಯವಹಾರ ಇಲಾಖೆ