ಕಾಂಗ್ರೆಸ್ಸಿನದ್ದು ಪಾಕಿಸ್ತಾನ ಮಾದರಿ ಆಡಳಿತ

KannadaprabhaNewsNetwork | Published : Sep 15, 2024 1:49 AM

ಸಾರಾಂಶ

ಹಿಂದೂ ದೇವರುಗಳನ್ನೂ ಬಂಧಿಸುವಷ್ಟು ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ಅತಿರೇಕದ ಆಡಳಿತ ನಡೆಸುತ್ತಿದೆ. ವೋಟ್‌ ಬ್ಯಾಂಕ್‌ಗಾಗಿ ಮಾಡುತ್ತಿರುವ ರಾಜಕೀಯ ತುಷ್ಟೀಕರಣದ ಪರಮಾವಧಿ ಇನ್ನೂ ಎಲ್ಲಿಗೆ ತಲುಪುತ್ತದೋ ಗೊತ್ತಿಲ್ಲ.

ಹುಬ್ಬಳ್ಳಿ:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಪಾಕಿಸ್ತಾನ ಮಾದರಿ ಆಡಳಿತ ನಡೆಸುತ್ತಿದ್ದು, ಹಿಂದೂಗಳು ನೆಮ್ಮದಿಯಿಂದ ಹಬ್ಬ ಆಚರಣೆಗೆ ಅವಕಾಶ ನೀಡುತ್ತಿಲ್ಲ. ಹಿಂದು ವಿರೋಧಿ ಆಡಳಿತ ನಡೆಸುತ್ತಿರುವ ಈ ಸರ್ಕಾರಕ್ಕೆ ಹೆಚ್ಚಿನ ಆಯುಷ್ಯವಿಲ್ಲ. ಮೂರೂವರೆ ವರ್ಷದಲ್ಲಿ ಈ ಸರ್ಕಾರ ಮನೆಗೆ ಹೋಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭವಿಷ್ಯ ನುಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದ ಗಣಪತಿ ಮೆರವಣಿಗೆ ವೇಳೆ ಪೆಟ್ರೋಲ್‌ ಬಾಂಬ್‌, ಕಲ್ಲು ತೂರಿದವರು, ಮಚ್ಚು, ಲಾಂಗ್‌ ಬೀಸಿದವರು ಎ-1 ಆರೋಪಿಗಳಾಗಿ ಕಾಣಲಿಲ್ಲ. ಗಣಪತಿ ಪ್ರತಿಷ್ಠಾಪಿಸಿದ ಮಂಡಳಿಯವರನ್ನೇ ಎ-1 ಆರೋಪಿಯನ್ನಾಗಿ ಮಾಡಲಾಗಿದೆ. ನಿಜಕ್ಕೂ ರಾಜ್ಯದ ಗೃಹಮಂತ್ರಿ ಮತ್ತು ಎಸ್ಪಿಗೆ ಮಾನ ಮರ್ಯಾದೆ ಇದೆಯೇ? ಎಂದು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಸಮಾಜದ ವಿದ್ರೋಹಿಗಳು, ಮತಾಂಧ ಶಕ್ತಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅದರ ಪರಿಣಾಮವೇ ಈಗ ನಾಗಮಂಗಲ ಗಲಭೆ ನಡೆದಿದೆ ಎಂದ ಅವರು, ಅಧಿಕಾರಿಗಳು ಎಚ್ಚರ ವಹಿಸಿ ಕಾರ್ಯ ನಿರ್ವಹಿಸಬೇಕು. ಯಾರನ್ನೋ ಮೆಚ್ಚಿಸಲು, ಓಲೈಸಲು ಮತ್ತು ಯಾರ ಕೈಗೊಂಬೆಯಾಗಿ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು.

ಹಿಂದೂ ದೇವರುಗಳನ್ನೂ ಬಂಧಿಸುವಷ್ಟು ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ಅತಿರೇಕದ ಆಡಳಿತ ನಡೆಸುತ್ತಿದೆ. ವೋಟ್‌ ಬ್ಯಾಂಕ್‌ಗಾಗಿ ಮಾಡುತ್ತಿರುವ ರಾಜಕೀಯ ತುಷ್ಟೀಕರಣದ ಪರಮಾವಧಿ ಇನ್ನೂ ಎಲ್ಲಿಗೆ ತಲುಪುತ್ತದೋ ಗೊತ್ತಿಲ್ಲ. ಕರ್ನಾಟಕ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ನಾಗಮಂಗಲ ಗಲಭೆ ಖಂಡಿಸಿ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ ವೇಳೆ ಪ್ರತಿಭಟನಾಕರರ ಜತೆ ಗಣೇಶ ವಿಗ್ರಹಗಳನ್ನು ಬಂಧಿಸಿರುವುದನ್ನು ಖಂಡಿಸಿದರು.

ನಾಗಮಂಗಲ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಜೋಶಿ ಆಗ್ರಹಿಸಿದರು.ಆರ್ಥಿಕ ದಿವಾಳಿ ಹಾದಿಯಲ್ಲಿ ಕೆಎಂಎಫ್‌:

ಭ್ರಷ್ಟಾಚಾರ, ಹಗರಣಗಳಿಂದಾಗಿ ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ದಿವಾಳಿ ಕಂಡಿದೆ. ಈಗ ಕೆಎಂಎಫ್‌ ಕೂಡ ಅದೇ ಹಾದಿಯಲ್ಲಿ ಸಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು

ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ವರ್ಷದಲ್ಲಿ ಅದೆಷ್ಟು ಬಾರಿ ಹಾಲಿನ ದರ ಹೆಚ್ಚಳ ಮಾಡುತ್ತಾರೆ ಇವರು? ಎರಡು ತಿಂಗಳ ಹಿಂದಷ್ಟೇ ಬೆಲೆ ಹೆಚ್ಚಳ ಮಾಡಿದ್ದಾರೆ. ಈಗ ಮತ್ತೆ ಬೆಲೆ ಏರಿಕೆಯೇ? ಎಂದು ಪ್ರಶ್ನಿಸಿದರು. ಈ ಬಾರಿ ಹೆಚ್ಚಿಸುವ ಹಾಲಿನ ದರ ರೈತರಿಗೆ ಎನ್ನುವುದು ಒಂದು ನೆಪ ಅಷ್ಟೇ. ಆರ್ಥಿಕ ದಿವಾಳಿ ಎದ್ದಿರುವ ಸರ್ಕಾರ ಆದಾಯಕ್ಕೆ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಎಂದರು.

ಹಿಂದೆ ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಇದ್ದ ಬೆಲೆಯಲ್ಲೇ ರೈತರಿಗೆ ಅಧಿಕ ದರ ಕೊಡುತ್ತಿದ್ದರು. ಗ್ರಾಹಕರಿಗೆ ಬರೆ ಎಳೆಯುತ್ತಿರಲಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಇತ್ತ ಗ್ರಾಹಕರು ಮತ್ತು ರೈತರು ಇಬ್ಬರಿಗೂ ಬರೆ ಎಳೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರು ನಾಲ್ಕು ರೂ. ಪ್ರೋತ್ಸಾಹ ಧನ ಕೊಟ್ಟಿದ್ದರು. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ದರವನ್ನೇ ಕೊಟ್ಟಿಲ್ಲ. ಅದನ್ನೂ ಬಂದ್‌ ಮಾಡಿದ್ದಾರೆ. ರೈತರಿಗೆ ಎಂದು ಹೆಚ್ಚಿಸುವ ಹಾಲಿನ ದರದ ಮೊತ್ತವನ್ನು ಈ ಸರ್ಕಾರ ರೈತರಿಗೆ ಕೊಡಲ್ಲ. ಸುಮ್ಮನೇ ರೈತರ ನೆಪವೊಡ್ಡಿ ಗ್ರಾಹಕರ ಕಣ್ಣಿಗೆ ಮಣ್ಣೆರೆಚುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಯುಪಿಎ ಸರ್ಕಾರದಂತೆ ಇದೂ ಕೂಡಾ ದಿನಕ್ಕೊಂದು ಹಗರಣದಲ್ಲಿ ತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೊಡೆದಾಡುತ್ತ ಶುದ್ಧ ಆಡಳಿತ ನೀಡುತ್ತಿದ್ದರೆ, ಇಲ್ಲಿ ಕಾಂಗ್ರೆಸ್‌ ಸರ್ಕಾರ ವಾಲ್ಮೀಕಿ, ಮೂಡಾ ಹೀಗೆ ಹಗರಣಗಳ ಸರಮಾಲೆ ಹೋದ್ದುಕೊಂಡಿದೆ ಎಂದು ಜೋಶಿ ವಾಗ್ದಾಳಿ ನಡೆಸಿದರು.

Share this article