ಕನ್ನಡಪ್ರಭ ವಾರ್ತೆ ಮಂಡ್ಯ
ವಕ್ಫ್ ಕಾಯಿದೆ ತಿದ್ದುಪಡಿಯನ್ನು ಬೆಂಬಲಿಸಬೇಕಿದ್ದ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಒಂದು ಕೋಮಿನ ಪರವಾಗಿ ನಿಲ್ಲುವುದರೊಂದಿಗೆ ರೈತರಿಗೆ ಮತ್ತು ಜನರಿಗೆ ದ್ರೋಹ ಬಗೆದಿವೆ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಟೀಕಿಸಿದರು.ಕಾಂಗ್ರೆಸ್ ಕೇವಲ ವೋಟ್ಬ್ಯಾಂಕ್ಗೋಸ್ಕರ ಬಹುಸಂಖ್ಯಾತರ ಹಿತಾಸಕ್ತಿಗೆ ದ್ರೋಹ ಬಗೆದು ಒಂದು ಕೋಮಿನ ಪರವಾಗಿ ತಿದ್ದುಪಡಿಗಳನ್ನು ತಂದಿತ್ತು. ಮೂರ್ನಾಲ್ಕು ಬಾರಿ ವಕ್ಫ್ ಕಾಯಿದೆಗೆ ತಿದ್ದುಪಡಿ ತಂದು ದೇಶವನ್ನೇ ವಕ್ಫ್ ಮಂಡಳಿಗೆ ಅಡವಿಟ್ಟಿತ್ತು. ಮುಸ್ಲಿಂ ರಾಷ್ಟ್ರಗಳಲ್ಲೇ ಸರ್ಕಾರದ ನಿಯಮದಡಿ ವಕ್ಫ್ ನಡೆಯುತ್ತಿರುವಾಗ ಭಾರತದಲ್ಲಿ ವಕ್ಫ್ ತನ್ನದೇ ಪ್ರತ್ಯೇಕ ಕಾನೂನಿನಡಿ ನಡೆಯುತ್ತಿತ್ತು. ಸಂವಿಧಾನದಲ್ಲಿ ವಕ್ಫ್ಗೆ ಅವಕಾಶವೇ ಇಲ್ಲದಿದ್ದರೂ ಇದು ಸಂವಿಧಾನ ಬಾಹೀರ ಎಂದು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜರಿದರು.
ರೈತರು, ಸರ್ಕಾರಿ ಆಸ್ತಿಗಳೆಲ್ಲವನ್ನೂ ತನ್ನದೇ ಎಂದು ಹೇಳಿಕೊಂಡು, ಯಾವುದೇ ಆಸ್ತಿಯ ಮೇಲೆ ಹಕ್ಕು ಸಾಧಿಸುವಂತಹ ಘನಘೋರ ವಕ್ಫ್ ಕಾಯಿದೆಗೆ ಕೇಂದ್ರಸರ್ಕಾರ ತಿದ್ದುಪಡಿ ತಂದಿರುವುದು ಖುಷಿಯ ವಿಚಾರ. ಇದನ್ನು ಅಭಿನಂದಿಸಲೇಬೇಕು. ಜನಪರ, ರೈತಪರವಾದ ನಿಲುವುಗಳನ್ನು ಕೈಗೊಂಡಾಗ ರಾಜಕೀಯ ದೃಷ್ಟಿಯಿಂದ ನೋಡಬಾರದು. ವಕ್ಫ್ ಕಾಯಿದೆಯಿಂದ ಸಾರ್ವಜನಿಕರು, ರೈತರು, ಸರ್ಕಾರದ ಆಸ್ತಿಗಳಿಗೆ ಕಂಟಕ ಎದುರಾದಾಗ ರಾಜ್ಯದಲ್ಲಿ ಆತಂಕಕಾರಿ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದು ಗೊತ್ತಿದ್ದೂ ವಕ್ಫ್ ಕಾಯಿದೆಗೆ ತಿದ್ದುಪಡಿ ತರುವುದು ಬೇಡ ಎಂಬ ನಿರ್ಣಯವನ್ನು ಅಧಿವೇಶನದಲ್ಲಿ ಕೈಗೊಂಡ ರಾಜ್ಯ ಕಾಂಗ್ರೆಸ್ ಜನವಿರೋಧಿ, ರೈತವಿರೋಧಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಹಾಲಿನ ದರವನ್ನು ೯ ರು. ಏರಿಸಿ ಈಗ ೪ ರು.ಗಳನ್ನು ರೈತರಿಗೆ ಕೊಡುವುದಾಗಿ ಹೇಳುವ ಮೂಲಕ ದ್ರೋಹವೆಸಗುತ್ತಿದೆ. ರೈತರು ಪೂರೈಸುವ ಹಾಲಿಗೆ ಮೊದಲೇ ಎರಡು ರು. ಕಡಿತಗೊಳಿಸಿ ಈಗ ೪ ರು. ಏರಿಸಿದೆ. ಗ್ರಾಹಕರಿಗೆ ೯ ರು. ಏರಿಸಿ ರೈತರಿಗೆ ಕೇವಲ ೨ ರು. ಮಾತ್ರ ನೀಡುತ್ತಿದ್ದಾರೆ. ಇಂತಹ ರಾಜಕೀಯ ತಂತ್ರಗಾರಿಕೆ ಬುದ್ಧಿ ಯಾರಿಗೂ ತಿಳಿಯುವುದಿಲ್ಲವೆಂದು ತಿಳಿದಿದ್ದರೆ ಅದು ನಿಮ್ಮ ಮೂರ್ಖತನ ಎಂದು ಟೀಕಿಸಿದರು.
ರೈತರಿಂದ ಹಾಲು ಖರೀದಿಸಿ, ಗ್ರಾಹಕರಿಗೆ ಮಾರಾಟ ಮಾಡುವ ಹಂತದವರೆಗೆ ಕೆಎಂಎಫ್ ಆಪರೇಟಿಂಗ್ ಸಿಸ್ಟಮ್ ಶೇ.೬೫ರಷ್ಟಿದೆ. ಯಾವುದೇ ಒಂದು ಕಂಪನಿಯ ಆಪರೇಟಿಂಗ್ ವೆಚ್ಚ ಕನಿಷ್ಠ ಶೇ.೧೦ ರಿಂದ ೨೦ರಷ್ಟು ಇರಬೇಕು. ಹೊರರಾಜ್ಯದಲ್ಲಿ ಖಾಸಗಿಯವರು ಹಾಲು ಖರೀದಿ ಮಾಡಿ ಮಾರಾಟ ಮಾಡುವ ವೆಚ್ಚ ಶೇ.೧೦ರಷ್ಟು ಮಾತ್ರವಿದೆ. ಅವರಿಗೆ ಕೆಎಂಎಫ್ನಂತೆ ಸಾಗಾಣಿಕೆ ಜಾಲ ಮತ್ತು ವಾಲ್ಯೂಮ್ ಇಲ್ಲದಿದ್ದರೂ ಒಳ್ಳೆಯ ಲಾಭ ಗಳಿಸುತ್ತಿವೆ. ಕೆಎಂಎಫ್ ಆಪರೇಟಿಂಗ್ ವೆಚ್ಚ ತೋರಿಸಿ ರೈತರಿಗೆ ಮತ್ತು ಗ್ರಾಹಕರಿಗೆ ಮೋಸವೆಸಗುತ್ತಿದೆ ಎಂದು ದೂರಿದರು.ಕೆಎಂಎಫ್ ಮೊಸರು, ಮಜ್ಜಿಗೆ, ಹಾಲಿನ ಉತ್ಪನ್ನಗಳನ್ನು ಮಾರಾಟಮಾಡಿ ಲಾಭ ಗಳಿಸುತ್ತಿದೆ. ಭ್ರಷ್ಟ ವ್ಯವಸ್ಥೆ ಆ ಲಾಭವನ್ನೆಲ್ಲಾ ತಿಂದುಹಾಕುತ್ತಿದೆ. ಇದಕ್ಕೆ ಕಡಿವಾಣ ಹಾಕದ ಸರ್ಕಾರಗಳು ಜಾಣಕುರುಡುತನ ಪ್ರದರ್ಶಿಸುತ್ತಿವೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ರುದ್ರಪ್ಪ, ಶ್ರೀಧರ್, ಬಿ.ಪಿ.ಅಪ್ಪಾಜಿ, ನಾರಾಯಣಸ್ವಾಮಿ ಇದ್ದರು.