ಒಂದು ಕಡೆ ಸುಳ್ಳು ಗ್ಯಾರಂಟಿಗಳ ಹೆಸರಿನ ಮೇಲೆ ಮಹಿಳೆಯರಿಗೆ ಹಣ ಕೊಡುವುದು, ಮತ್ತೊಂದು ಕಡೆ ಬೆಲೆ ಏರಿಕೆ ಮಾಡಿ ಗಂಡಸರ ಜೇಬಿನಿಂದ ಕಸಿದುಕೊಳ್ಳುವುದು ಸರ್ಕಾರದ ಗಿಮಿಕ್ ಆಗಿದೆ ಎಂದು ಬೀದರ್ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ಹೇಳಿದರು. ತೈಲ ಬೆಲೆ ಏರಿಕೆ ವಿರೋಧಿಸಿ ಜನವಾಡಾ ಗ್ರಾಮದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಬೀದರ್
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ವಿಭಾಗೀಯ ಪ್ರಭಾರಿ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ತಿಳಿಸಿದರು.
ಬೀದರ್ ತಾಲೂಕಿನ ಜನವಾಡಾ ಗ್ರಾಮದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ಬೀದರ್-ಔರಾದ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಕಡೆ ಸುಳ್ಳು ಗ್ಯಾರಂಟಿಗಳ ಹೆಸರಿನ ಮೇಲೆ ಮಹಿಳೆಯರಿಗೆ ಹಣ ಕೊಡುವುದು, ಮತ್ತೊಂದು ಕಡೆ ಬೆಲೆ ಏರಿಕೆ ಮಾಡಿ ಗಂಡಸರ ಜೇಬಿನಿಂದ ಕಸಿದುಕೊಳ್ಳುವುದು ಸರ್ಕಾರದ ಗಿಮಿಕ್ ಆಗಿದೆ ಎಂದರು.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ದಿನಸಿ ವಸ್ತುಗಳು ಗಗನಕ್ಕೇರುತ್ತಿವೆ. ಇದರಿಂದ ಬಡವರು ಬದುಕು ಸಾಗಿಸುವುದೇ ದುಸ್ತರವಾಗುತ್ತದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಬೆಲೆ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ರಾಜೇಂದ್ರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಅವರಾದೆ, ನಗರ ಮಂಡಲ ಅಧ್ಯಕ್ಷರಾದ ಶಶಿಧರ ಹೊಸಳ್ಳಿ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಮಾತನಾಡಿದರು.
ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಪಾಟೀಲ್ ಚಾಂಬೋಳ, ದೀಪಕ ಗಾದಗೆ, ನಿಜಲಿಂಗಪ್ಪ ಪಾಟೀಲ್ ಚಿಮಕೋಡ್, ದೇವೇಂದ್ರ ಸಾಧು, ಮಾರುತಿ ಕೋಳಿ, ಗುರಪ್ಪ ರಕ್ಷೆ ಇಸ್ಲಾಂಪೂರ, ಭೀಮರಾವ್ ಪವಾರ, ಧರ್ಮೇಂದ್ರ ಏರ್ನಳ್ಳಿ, ನಾಮದೇವ್ ದದ್ದಾಪುರ ಸೇರಿದಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.