ಕನ್ನಡಪ್ರಭ ವಾರ್ತೆ ಬ್ಯಾಡಗಿ
ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದ್ದು, ಎಲ್ಲ ೫ ಗ್ಯಾರಂಟಿಗಳನ್ನ ಅನುಷ್ಠಾಗೊಳಿಸಿ ಬಡವರ ಹೊಟ್ಟೆ ತುಂಬಿಸುತ್ತಿದೆ. ಇದು ರಾಜ್ಯದ ಜನರ ಮೇಲೆ ಪ್ರಸಕ್ತ ವರ್ಷ ಆವರಿಸುವ ಬರಗಾಲದ ಆರ್ಥಿಕ ಹೊರೆಯನ್ನ ಸ್ವಲ್ಪ ಮಟ್ಟಿಗೆ ನಿವಾರಿಸಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ವೀರಶೈವ ಲಿಂಗಾಯತ ಸಮುದಾಯದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಏನು ಮಾಡಿದೆ ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಇತಿಹಾಸ ಗೊತ್ತಿಲ್ಲ. ಒಂದು ಬಾರಿ ಇತಿಹಾಸದ ಪುಟಗಳನ್ನ ತಿರುವಿ ನೋಡಿ ದೇಶದಲ್ಲಿ ಎಲ್ಲ ಪ್ರಥಮಗಳಿಗೆ ಕಾಂಗ್ರೆಸ್ ಪಕ್ಷವೇ ಬುನಾದಿಯಾಗಿದೆ ಎಂದರು.
ಈಗಾಗಲೇ ನಾಲ್ಕು ಬಾರಿ ಕ್ಷೇತ್ರದಲ್ಲಿ ಸೋಲು ಕಂಡಿದ್ದೇವೆ, ಈ ಬಾರಿ ಅದು ಮರುಕಳಿಸಬಾರದು ಎಂದು ಜನ ಸಾಮಾನ್ಯರು ಸೂಚನೆ ಮಾಡಿದ ಅಭ್ಯರ್ಥಿಯನ್ನು ಈ ಬಾರಿ ಕಾಂಗ್ರೆಸ್ ಪಕ್ಷ ಹಾವೇರಿ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದೆ. ಆನಂದಸ್ವಾಮಿ ಗಡ್ಡದೇವರಮಠ ಅವರು ನಿಮ್ಮ ಮುಂದೆ ಜೋಳಿಗೆ ಹಿಡಿದು ಬಂದಿದ್ದಾರೆ ನಿಮ್ಮ ಮತ ಹಾಕಿ ಅವರ ಜೋಳಿಗೆ ತುಂಬಿಸುವ ಕಾರ್ಯ ಮಾಡಿ ಎಂದರು.ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ ಮಾತನಾಡಿ, ರಾಜ್ಯದಲ್ಲಿನ ಯಾವ ಬಿಜೆಪಿ ಸಂಸದರು ತಾವು ಮಾಡಿರುವ ಕೆಲಸ ತೋರಿಸಿ ಮತ ಕೇಳುತ್ತಿಲ್ಲ. ಬದಲಾಗಿ, ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಇದು ನಾಚಿಕೇಗೇಡಿನ ಸಂಗತಿ. ಮೂರು ಬಾರಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳಿಸಿ ನೋವುಂಡಿರುವ ಜನರು ಈ ಬಾರಿ ಶಾಶ್ವತವಾಗಿ ಬಿಜೆಪಿಯನ್ನು ಮನೆಗೆ ಕಳಿಸಲಿದ್ದಾರೆ ಎಂದರು.
ವೇದಿಕೆಯಲ್ಲಿ ವೀರನಗೌಡ್ರ ಪೊಲೀಸ್ಗೌಡ್ರ ಬೀರಪ್ಪ ಬಣಕಾರ. ಚನಬಸಪ್ಪ ಹುಲ್ಲತ್ತಿ, ಸುರೇಶಗೌಡ ಪಾಟೀಲ. ಮಲ್ಲಿಕಾರ್ಜುನ ಕರಿಲಿಂಗಣ್ಣವರ, ಶಿವನಗೌಡ ಪಾಟೀಲ್, ಚಂದ್ರು ಛತ್ರದ, ಬಸವರಾಜ್ ಬಳ್ಳಾರಿ, ಶಂಬನಗೌಡ ಪಾಟೀಲ, ಡಿ.ಎಚ್.ಬುಡ್ಡನಗೌಡ್ರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.