ಗದಗ: ಕಾಂಗ್ರೆಸ್ ಪಕ್ಷ ಯಾವತ್ತೂ ಮಹಿಳಾ ವಿರೋಧಿಯಲ್ಲ. ಆದರೆ, ಬಿಜೆಪಿ ಮಹಿಳೆಯರ ಮತ ಕಬಳಿಸುವ ಹುನ್ನಾರದಿಂದ ಅಪಪ್ರಚಾರ ಮಾಡುತ್ತಿದೆ ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಸ್ವಾತಿ ಮಳಗಿ ಆರೋಪಿಸಿದರು. ಗದಗ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿ ಜಾರಿಗೆ ತರಲು ಸಂಚು ರೂಪಿಸಿತ್ತು. ಆದರೆ, ಅದು ಈಗ ವಿಫಲವಾಗಿದೆ. 2023ರಲ್ಲೇ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಿರುವಾಗ, ಈಗ ಮತ್ತೆ ವಿಶೇಷ ಅಧಿವೇಶನ ಕರೆಯುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗೆ ಕನಿಷ್ಠ 8 ರಿಂದ 9 ವರ್ಷಗಳು ಬೇಕಾಗುತ್ತದೆ. ಅಲ್ಲಿ ವರೆಗೆ ಕಾಯುವ ಬದಲು 2023ರ ಬಿಲ್ ಪ್ರಕಾರ ಅಥವಾ ಈಗಿರುವ ಸ್ಥಾನಗಳಲ್ಲೇ ಮೀಸಲಾತಿ ಘೋಷಿಸಲಿ. ಎಲ್ಲಕ್ಕಿಂತ ಮೊದಲು ಜಾತಿ ಗಣತಿ ಮಾಡಲಿ. ಅದರ ವರದಿ ಆಧರಿಸಿ ಮೀಸಲಾತಿ ಹಂಚಿಕೆಯ ಬಗ್ಗೆ ಚರ್ಚಿಸಲಿ. ಜಾತಿ ಗಣತಿ ಮಾಡದೇ ಮೀಸಲಾತಿ ಜಾರಿಗೊಳಿಸುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದೆ ಮತ್ತು ಅವರು ಸಂತಸದಲ್ಲಿದ್ದಾರೆ. ಬಿಜೆಪಿ ಮಹಿಳೆಯರ ಮತಕ್ಕಾಗಿ ನಡೆಸಿದ ಕುತಂತ್ರಗಳು ಈಗ ವಿಫಲವಾಗಿವೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ರುದ್ರಮ್ಮ ಕೆರಕಲಮಟ್ಟಿ, ಜಯಕ್ಕ ಕಳ್ಳಿ, ಸುರೇಖಾ, ನಾಜಬೇಗಂ ಯಲೆಗಾರ, ದಾನೇಶ್ವರಿ ಭಜಂತ್ರಿ, ಉಮಾ ದ್ಯಾವನೂರ, ಶೋಭಾ ದೇಸಳ್ಳಿ, ವೀಣಾ ಕಟ್ನಳ್ಳಿ ಉಪಸ್ಥಿತರಿದ್ದರು.ಬಿಜೆಪಿ ಮಹಿಳಾ ವಿರೋಧಿ ಸರ್ಕಾರವಾಗಿದೆ. ಕಾಂಗ್ರೆಸ್ ರಾಜೀವ್ ಗಾಂಧಿ ಅವರ ಕಾಲದಲ್ಲೇ ಮಹಿಳೆಯರಿಗೆ ವಿಶೇಷ ಮೀಸಲಾತಿ ನೀಡುವ ಮೂಲಕ ಅವರ ಏಳಿಗೆಗೆ ಶ್ರಮಿಸಿದೆ. ಪಂಚ ಗ್ಯಾರಂಟಿಗಳ ಮೂಲಕ ಇಂದು ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಘಟಕ ಜಿಲ್ಲಾಧ್ಯಕ್ಷೆ ನೀಲಮ್ಮ ಬೋಳನವರ ಹೇಳಿದರು.