ಅಭಿವೃದ್ಧಿ ಹೆಸರಲ್ಲಿ ಕಾಂಗ್ರೆಸ್ಸಿಂದ ಲೂಟಿ : ನಿಖಿಲ್

KannadaprabhaNewsNetwork |  
Published : Jul 04, 2025, 11:53 PM ISTUpdated : Jul 05, 2025, 11:28 AM IST
ನಿಖಿಲ್ | Kannada Prabha

ಸಾರಾಂಶ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡುತ್ತಿದ್ದು, ದೂರಾಡಳಿತ ಹಾಗೂ ಭ್ರಷ್ಟಾಚಾರದ ಕುರಿತು ಸ್ವಪಕ್ಷದ ಶಾಸಕರೆ ಅಸಾಯಕತೆ ತೋಡಿಕೊಂಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಟೀಕಿಸಿದ್ದಾರೆ.

 ಕಲಬುರಗಿ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡುತ್ತಿದ್ದು, ದೂರಾಡಳಿತ ಹಾಗೂ ಭ್ರಷ್ಟಾಚಾರದ ಕುರಿತು ಸ್ವಪಕ್ಷದ ಶಾಸಕರೆ ಅಸಾಯಕತೆ ತೋಡಿಕೊಂಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಟೀಕಿಸಿದ್ದಾರೆ.

ಜಿಲ್ಲೆಯಲ್ಲಿ ಜೇವರ್ಗಿ ಪಟ್ಟಣದ ಭೂತಪೂರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಕೆಆರ್‌ಡಿಬಿಯ ಅಭಿವೃದ್ಧಿ ಹಣ ಎಲ್ಲಿಗೆ ಹೋಗಿದೆ? ಎಂದು ಯಾರಿಗೂ ಗೊತ್ತಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ದೂರಾಡಳಿತದ ಕೈಗನ್ನಡಿಯಾಗಿದೆ ಎಂದರು.

ಎಸ್‌ಸಿಪಿ ಟಿಎಸ್‌ಪಿ ಹಣ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಹಣ ದೂರುಪಯೋಗ ಮಾಡಿಕೋಳ್ಳುವದರ ಜೊತೆಗೆ ನಮ್ಮ ರಾಜ್ಯದ ತೆರಿಗೆ ಹಣವನ್ನು ಕೊಳ್ಳೆ ಹೋಡೆದು ಕಾಂಗ್ರೆಸ್ ಸರ್ಕಾರ ನೆರೆಯ ರಾಜ್ಯಗಳ ಚುನಾವಣೆ ನಡೆಸಿದೆ. ರಾಜ್ಯದ ಜನತೆ ಎಲ್ಲವೂ ಗಮನಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಉತ್ತರ ನೀಡಲಿದ್ದಾರೆ. ಗ್ಯಾರಂಟಿ ಹಾಗೂ ಅಭಿವೃದ್ಧಿ ಹೆಸರಲ್ಲಿ ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಗುರುಮಿಟಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಕಾಂಗ್ರೆಸ್‌ನ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಬಿಜೆಪಿಯ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಟ್ಟರೆ ಉಳಿದ ಬಹುತೇಕ ಶಾಸಕರು ಜೆಡಿಎಸ್‌ ಬ್ರ್ಯಾಂಡ್‌ ಆಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಗರಡಿಯಲ್ಲಿ ಪಳಗಿದ್ದಾರೆ ಎಂದು ವ್ಯಂಗ್ಯವಾಡಿದರು

ಮಾಜಿ ಸಚಿವ ಹಣಮಂತಪ್ಪ ಆಲಗೂಡ ಹಾಗೂ ಮಾಜಿ ಶಾಸಕ, ಜೆಡಿಎಸ್ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ವೆಂಕಟಪ್ಪಗೌಡ ನಾಡಗೌಡ, ರಾಜಾವೆಂಕಟಪ್ಪನಾಯಕ, ಜೆಡಿಎಸ್‌ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.

ಜೇವರ್ಗಿಯಲ್ಲಿ ನಿಖಿಲ್‌ ಹವಾ

ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಶುಕ್ರವಾರ ನಿಖಿಲ್ ಕುಮಾರಸ್ವಾಮಿ ಹವಾ ಜೋರಾಗಿತ್ತು. ಕಲಬುರಗಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಮುಗಿಸಿ ಜೇವರ್ಗಿಗೆ ಆಗಮಿಸಿದ ನಿಖಿಲ್ ಬಹಿರಂಗವಾಗಿ ಟ್ರಾಕ್ಟರ್‌ನಲ್ಲಿ ಸಾವಿರಾರು ಜನಸಾಗರದ ಮಧ್ಯೆ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಸಾಗಿದರು. ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್‌ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಪಟ್ಟಣದ ಆರಾಧ್ಯ ದೈವವಾಗಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಹಾಗೂ ಶ್ರೀ ಷಣ್ಮುಖ ಶಿವಯೋಗಿಗಳ ಮಠಕ್ಕೆ ತೆರಳಿ ನಿಖಿಲ್‌ ದರ್ಶನಾಶೀರ್ವಾದ ಪಡೆದುಕೊಂಡರು.

PREV
Read more Articles on

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ