ಕಾಂಗ್ರೆಸ್ ಕನಿಷ್ಠ 20 ಕ್ಷೇತ್ರಗಳ ಗೆಲ್ಲಲೇಬೇಕು: ಕೆ.ಎನ್.ರಾಜಣ್ಣ

KannadaprabhaNewsNetwork | Published : Mar 19, 2024 12:49 AM

ಸಾರಾಂಶ

ದೇವೇಗೌಡರು ಯಾವತ್ತೂ ಕೂಡ ಜಾತ್ಯತೀತರಲ್ಲ. ಎರಡು ಕಡೆ ಮೊಮ್ಮಕ್ಕಳು, ಒಂದು ಕಡೆ ಅಳಿಯ ನಿಲುತ್ತಿದ್ದಾರೆ. ಹಾಗಿದ್ದರೆ ಜೆಡಿಎಸ್ ನಲ್ಲಿ ಬೇರೆ ಯಾರೂ ಇರಲಿಲ್ಲವೇ?, ಹಾಸನದ ಕ್ಷೇತ್ರವನ್ನು ಕಾಂಗ್ರೆಸ್ ಗೆ ಗೆಲ್ಲಿಸದಿದ್ದರೆ ನಾನ್ಯಾರಿಗೂ ಮುಖವನ್ನೇ ತೋರಿಸಲ್ಲ ಎಂದು ಹೇಳಿದ್ದೇನೆ ಎನ್ನುವ ಮೂಲಕ ಗೌಡರ ಕುಟುಂಬಕ್ಕೆ ರಾಜಣ್ಣ ಓಪನ್ ಚಾಲೆಂಜ್ ಹಾಕಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 28 ಕ್ಷೇತ್ರಗಳ ಪೈಕಿ 20 ಸೀಟು ಗೆಲ್ಲದಿದ್ದರೆ ಸರ್ಕಾರ ನಡೆಸುವುದಕ್ಕೆ ಯಾವುದೇ ನೈತಿಕತೆ ಇರುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರಣಕ್ಕಾಗಿ ನಾವೇ ಚುನಾವಣೆಗೆ ನಿಂತಿದ್ದೀವಿ ಎಂಬಂತೆ ಕೆಲಸ ಮಾಡಬೇಕು ಎಂದರು.

ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ಎಲ್ಲಾ ಪಕ್ಷಗಳಿಗೆ ಹೋಗಿಬಂದಿರುವುದಕ್ಕೆ ನಮಗೂ ಬೇಜಾರಿದೆ ಎಂದ ಅವರು, ಆದರೆ ಇದೀಗ ಅವರನ್ನು ನಾವು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಹಾಗಂದ ಮಾತ್ರಕ್ಕೆ ನಮ್ಮ ಬಳಿ ಬೇರೆ ಯಾರೂ ಅಭ್ಯರ್ಥಿ ಇಲ್ಲ ಅಂತೇನಿರಲಿಲ್ಲ, ಆದರೆ ಇದು ಕ್ಲಿಷ್ಟಕರ ಚುನಾವಣೆ, ಗೆಲ್ಲುವ ಅಭ್ಯರ್ಥಿ ಎಂಬ ಕಾರಣಕ್ಕೆ ನಿಲ್ಲಿಸಿದ್ದೇವೆ ಎಂದರು.

ಕಳೆದ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಬೇಕು ಎಂದು ಜನ ವೋಟ್ ಹಾಕಿದ್ದರು. ದೇವೇಗೌಡರು ಯಾವತ್ತೂ ಕೂಡ ಜಾತ್ಯತೀತರಲ್ಲ. ಎರಡು ಕಡೆ ಮೊಮ್ಮಕ್ಕಳು, ಒಂದು ಕಡೆ ಅಳಿಯ ನಿಲುತ್ತಿದ್ದಾರೆ. ಹಾಗಿದ್ದರೆ ಜೆಡಿಎಸ್ ನಲ್ಲಿ ಬೇರೆ ಯಾರೂ ಇರಲಿಲ್ಲವೇ?, ಹಾಸನದ ಕ್ಷೇತ್ರವನ್ನು ಕಾಂಗ್ರೆಸ್ ಗೆ ಗೆಲ್ಲಿಸದಿದ್ದರೆ ನಾನ್ಯಾರಿಗೂ ಮುಖವನ್ನೇ ತೋರಿಸಲ್ಲ ಎಂದು ಹೇಳಿದ್ದೇನೆ ಎನ್ನುವ ಮೂಲಕ ಗೌಡರ ಕುಟುಂಬಕ್ಕೆ ರಾಜಣ್ಣ ಓಪನ್ ಚಾಲೆಂಜ್ ಹಾಕಿದರು.

ಪುಟ್ಟಸ್ವಾಮಿಗೌಡರು ದೇವೇಗೌಡರನ್ನು ಸೋಲಿಸಿದ್ದರು. ಈಗ ದೇವೇಗೌಡರ ಮೊಮ್ಮಗ ಹಾಸನದಲ್ಲಿ ನಿಲುತ್ತಿದ್ದಾರೆ. ಪುಟ್ಟಸ್ವಾಮಿಗೌಡರ ಮೊಮ್ಮಗ ನಮ್ಮ ಪಕ್ಷದಿಂದ ನಿಲ್ಲುತ್ತಿದ್ದಾರೆ. ಯಾರನ್ನೇ ಕೇಳಿದರೂ ಅಭ್ಯರ್ಥಿ ತುಂಬಾ ಒಳ್ಳೆಯವರೆಂದು ಹೇಳುತ್ತಿದ್ದಾರೆ ಎಂದರು.

ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷವು ಹಾಸನದಲ್ಲಿ ಅಧಿಕಾರದಲ್ಲಿಲ್ಲ. ಹೀಗಾಗಿ ಕಾರ್ಯಕರ್ತರನ್ನು ದುರ್ಬಿನ್ ತೆಗೆದುಕೊಂಡು ಹುಡುಕುವ ಸ್ಥಿತಿ ಇರಬೇಕಿತ್ತು. ಆದರೆ ಹಾಸನದಲ್ಲಿ ಆ ಸ್ಥಿತಿ ಇಲ್ಲ, ಅಲ್ಲಿನ ಕಾರ್ಯಕರ್ತರ ಹುಮ್ಮಸ್ಸು ನೋಡಿದರೆ ಆಶ್ಚರ್ಯವಾಗುತ್ತದೆ ಎಂದರು.

1996 ರ ಚುನಾವಣೆಯಲ್ಲಿ ಇದೇ ಜಿ.ಎಸ್. ಬಸವರಾಜು ಅವರು ಆರ್.ಮಂಜುನಾಥ್ ಅವರನ್ನು ಹೊರಗಿನಿಂದ ಕರೆದುಕೊಂಡು ಬಂದು ನಿಲ್ಲಿಸಿದ್ದರು. ನಂತರ ಕೋದಂಡರಾಮಯ್ಯ ಕೂಡ ಹೊರಗಿನಿಂದ ಬಂದು ನಿಂತಿದ್ದರು. ಕಳೆದ ಚುನಾವಣೆಯಲ್ಲಿ ದೇಶ ಕಂಡ ಮಹಾನ್ ನಾಯಕ ದೇವೇಗೌಡರು ಕೂಡ ಇಲ್ಲಿ ಸ್ಪರ್ಧಿಸಿದ್ದರು. ಆದರೆ ಇವರೆಲ್ಲರೂ ಕೂಡ ಸೋಲು ಕಂಡರು. ಇದಕ್ಕೆಲ್ಲ ಕಾರಣ ಅವರು ಹೊರಗಿನವರೆಂದು, ತುಮಕೂರಿನ ಜನ ಹೊರಗಿನವರಿಗೆ ಮಣೆ ಹಾಕುವುದಿಲ್ಲ ಎಂದರು.

ನಮ್ಮ ರಾಜ್ಯದಲ್ಲಿ ಇವತ್ತು ಕಾಂಗ್ರೆಸ್ ಪಕ್ಷದ 136 ಶಾಸಕರಿದ್ದಾರೆ. ರಾಜ್ಯದ ಎಲ್ಲಾ ಕಾರ್ಯಕರ್ತರ ಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.

ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕುವುದಿಲ್ಲವೆಂದು ನಮ್ಮ ಅಭಿಪ್ರಾಯ ಅಲ್ಲ. ಆದರೆ ಬಿಜೆಪಿಯವರು ಕುತಂತ್ರಗಳನ್ನು ಮಾಡುತ್ತಾರೆ. ಅದಕ್ಕೆ ನಾವು ಎಚ್ಚರಿಕೆಯಿಂದ ಇರಬೇಕು. ಇದರರ್ಥ ಮುಸ್ಲಿಮರು ನಮಗೆ ಬೆಂಬಲಿಸುವುದಿಲ್ಲವೆಂದಲ್ಲ ಎಂದರು.

ಈ ಚುನಾವಣೆಯಲ್ಲಿ ನಮಗೆ ಮತ ಕೇಳುವುದಕ್ಕೆ ಅಧಿಕಾರವಿದೆ. ಯಾಕೆಂದರೆ ಕಳೆದ ಚುನಾವಣೆಗೆ ಮೊದಲು ನಾವು ಕೊಟ್ಟಿದ್ದ ಭರವಸೆಗಳನ್ನೆಲ್ಲ ಈಡೇರಿಸಿದ್ದೇವೆ ಎಂದರು.

ಈಗ ಶ್ರೀರಾಮನ ದೇವಸ್ಥಾನವನ್ನು ತೋರಿಸುತ್ತಿದ್ದಾರೆ. ಶ್ರೀರಾಮನ ಮೂರ್ತಿ ಕೆತ್ತಿದ್ದವನನ್ನು ಗರ್ಭಗುಡಿಯೊಳಗೆ ಬಿಡಿ ನೋಡೋಣ ಎಂದ ಅವರು, ಕಟ್ಟುವರು ಶೂದ್ರರು, ನಂತರ ಪೂಜೆ ಮಾಡಿ ತಟ್ಟೆಗೆ ಕಾಸು ಹಾಕಿಸಿಕೊಳ್ಳುವವರು ಇವರು ಎಂದರು.

ರಾಮಾಯಣ ಬರೆದವರು ವಾಲ್ಮೀಕಿ, ಮಹಾಭಾರತ ಬರೆದವರು ವ್ಯಾಸ, ಭಗವದ್ಗೀತೆ ಬರೆದವರು ಕೃಷ್ಣ, ಇವರೆಲ್ಲರೂ ಶೂದ್ರರು.

ಆದರೆ ಶೂದ್ರರ ದೇವರನ್ನು ಇವರು ಪೂಜೆ ಮಾಡುತ್ತಿದ್ದಾರೆ ಎಂದರು. ಮನುಸ್ಮೃತಿಯಲ್ಲಿ ಬ್ರಾಹ್ಮಣರು ಶ್ರೇಷ್ಠ ಎಂದು ಬರೆದುಕೊಂಡಿದ್ದಾರೆ, ಬರೆದುಕೊಳ್ಳಲಿ ಅಭ್ಯಂತರವಿಲ್ಲ ಎಂದರು.

Share this article