ಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರು ದ್ವೇಷದ ರಾಜಕಾರಣಕ್ಕಾಗಿ ಬಿಜೆಪಿಯ ಸತ್ಯ ಮರೆಮಾಚಿ ಸರ್ಕಾರಕ್ಕೆ ನೋಟಿಸ್ ನೀಡಿರುವುದನ್ನು ಕೂಡಲೇ ಹಿಂಪಡೆಯದೇ ಹೋದರೇ ಕರ್ನಾಟಕದಲ್ಲಿ ರಕ್ತಕ್ರಾಂತಿಗೆ ಸಿದ್ಧರಾಗಬೇಕಾಗುತ್ತದೆ ಎಂದು ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷರಾದ ಕೆ.ಎಂ. ಶಿವಲಿಂಗೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಬುಧವಾರ ಪ್ರತಿಭಟಿಸಿ ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು. ನಗರದ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೊದಲು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕಾಂಗ್ರೆಸ್ನ ಸತ್ಯ ಶೋಧನಾ ಸಮಿತಿ ಜಿಲ್ಲೆಗೆ ಬಂದ ಹಿನ್ನೆಲೆಯಲ್ಲಿ ಸಭೆ ಮಾಡಿ, ಚರ್ಚೆ ಮಾಡಿ ಕೊನೆಯಲ್ಲಿ ತೀರ್ಮಾನಕೈಗೊಂಡಿದ್ದು, ಈಗಾಗಲೇ ಲೆಟರ್ ಅನ್ನು ರಾಜ್ಯಪಾಲರಿಗೆ ನೀಡಿ ಅವರ ಮೂಲಕ ಮುಖ್ಯಮಂತ್ರಿಗಳ ಮೇಲೆ ತನಿಖೆ ಮಾಡುವ ಆದೇಶ ಮಾಡುತ್ತಾರೆ ಎನ್ನುವ ಸೂಚನೆಯು ಮಾಧ್ಯಮದ ಮೂಲಕ ದಟ್ಟವಾಗಿ ಹಬ್ಬಿದೆ. ಇ.ಡಿಯನ್ನು ಉಪಯೋಗಿಸಿಕೊಂಡು ಏನಾದರೂ ಈ ರೀತಿ ಅನ್ಯಮಾರ್ಗಕ್ಕೆ ಇಳಿದರೆ, ಕರ್ನಾಟಕದಲ್ಲಿ ರಕ್ತಕ್ರಾಂತಿ ಆಗುತ್ತದೆ ಎನ್ನುವ ದೃಷ್ಠಿಯಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಸಂದೇಶ ಕಳುಹಿಸಿಕೊಟ್ಟು ರಾಜ್ಯಪಾಲರಿಗೆ ಮತ್ತು ಬಿಜೆಪಿ ಸರಕಾರಕ್ಕೆ ಮುನ್ನೆಚ್ಚರಿಕೆ ಇದಾಗಿದೆ ಎಂದರು.ವಾಲ್ಮೀಕಿ ನಿಗಮದ ಹಗರಣವನ್ನು ನಾವು ಸಮರ್ಥನೆ ಮಾಡುವುದಿಲ್ಲ. ಅದರಲ್ಲಿ ಅನ್ಯಾಯವಾಗಿದ್ದು, ಯಾರು ಮಾಡಿದ್ದು, ಅದಕ್ಕೆ ಯಾರು ಕಾರಣಕರ್ತರು? ಒಂದು ಮನೆ ಎಂದ ಮೇಲೆ ಯಾರಾದರೂ ಒಬ್ಬರ ತಪ್ಪು ಇದ್ದೇ ಇರುತ್ತದೆ. ಇದಕ್ಕೆ ಸಿದ್ದರಾಮಯ್ಯ ಅವರು ಜವಬ್ದಾರಿನಾ! ಜವಾಬ್ದಾರಿ ಹೊತ್ತಿರುವ ಮಂತ್ರಿ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಜೈಲಲ್ಲಿ ಇದ್ದಾರೆ. ಅಧಿಕಾರಿಗಳು ಯಾರಿದ್ದಾರೆ ಅವರನ್ನು ಬಂಧಿಸಿ ಸರ್ಕಾರ ಏನು ಮಾಡುತ್ತದೆ ಎಂದು ಗುಡುಗಿದರು.
ಚುನಾವಣೆ ಸಮಯದಲ್ಲಿ ಅಧಿಕಾರಿಗಳು ಹಣ ಹೊಡೆದು ಅನ್ಯಾಯ ಮಾಡಿದ್ದಾರೆ. ಇದರಲ್ಲಿ ಮಂತ್ರಿ ಕುಮಕ್ಕು ಇದೆಯೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಕೆಲವೇ ಅಧಿಕಾರಿಗಳು ಮಾಡಿರುವುದಾಗಿ ಸಾರಿ ಸಾರಿ ಹೇಳುತ್ತಿದ್ದಾರೆ. ಇದು ನಾಟಕೀಯ. ಸಿದ್ದರಾಮಯ್ಯ ಮೇಲೆ ಸುಮ್ಮನೆ ಆಪಾದನೆ ಮಾಡುತ್ತಿದ್ದಾರೆ ಎಂದು ದೂರಿದರು. ಇನ್ನು ಮುಂದೆ ಈ ನಾಟಕ ನಡೆಯುವುದಿಲ್ಲ. ಏನಾದರೂ ಜೇನು ಗೂಡಿಗೆ ಕೈ ಹಾಕಿ ಕಲ್ಲು ಹೊಡೆದಂತೆ ಆಗುತ್ತದೆ ಎಂದು ಬಿಜೆಪಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ ಎಂದರು. ಏನಾದರೂ ಈ ವಾಮ ಮಾರ್ಗಕ್ಕೆ ಇಳಿದರೇ ಕರ್ನಾಟಕದ ಜನರು ಯಾವ ರೀತಿ ದಂಗೆ ಹೇಳುತ್ತಾರೆ ಎನ್ನುವುದನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಾಹಸಕ್ಕೆ ಕೈಹಾಕಬೇಡಿ. ಕೇಂದ್ರ ಸರಕಾರದ ಬಜೆಟ್ನಲ್ಲಿ ಕರ್ನಾಟಕಕ್ಕೆ ಒಂದು ರು. ಹಣ ಕೊಡಲು ಯೋಗ್ಯತೆ ಇಲ್ಲ. ಕರ್ನಾಟಕ ರಾಜ್ಯಕ್ಕೆ ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದರು. ನಮ್ಮ ಕರ್ನಾಟಕದಿಂದ ಜಿ.ಎಸ್.ಟಿ. ತೆರಿಗೆ ೪ ಲಕ್ಷದ ೫೩ ಸಾವಿರ ಹಣ ಈ ಬಾರಿ ಕೇಂದ್ರ ಸರಕಾರಕ್ಕೆ ಹೋಗಿದೆ. ರಿಟರ್ನ್ ಕೊಟ್ಟಿರುವುದು ೫೬ ಸಾವಿರ ಕೋಟಿ. ಬಾಕಿ ಹಣವು ಯಾವ ರೀತಿ ಮೋಸ ಆಗುತ್ತಿದೆ ಎನ್ನುವುದನ್ನು ತಿಳಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್, ರಘುಮೂರ್ತಿ, ವೆಂಕಟರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಮಾಜಿ ಎಂ.ಎಲ್.ಸಿ. ಗೋಪಾಲಸ್ವಾಮಿ, ಮುಖಂಡರಾದ ದೇವರಾಜೇಗೌಡ, ಬನವಾಸೆ ರಂಗಸ್ವಾಮಿ, ಜಾವಗಲ್ ಮಂಜುನಾಥ್, ಅಶೋಕ್, ಪ್ರಸನ್ನಕುಮಾರ್, ಲಕ್ಷ್ಮಣ್, ಪ್ರಕಾಶ್, ತಾರಾ ಚಂದನ್, ಜಮೀಲಾ ಉಪಸ್ಥಿತರಿದ್ದರು.
ಬಾಕ್ಸ್: ಬಿಜೆಪಿಗೆ ಶಿವಲಿಂಗೇಗೌಡ ಸವಾಲುಮುಖ್ಯಮಂತ್ರಿ ಸಿದ್ದರಾಮಣ್ಣ ರಾಜ್ಯದಲ್ಲಿ ಪ್ರಬಲವಾದ ಸರ್ಕಾರ ನಡೆಸುತ್ತಿದ್ದು, ಮುಡಾದಲ್ಲಿ ನಾನೊಂದು ಚಾಲೆಂಜ್ ತೆಗೆದುಕೊಳ್ಳುತ್ತಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರದ್ದು ಮುಡಾದಲ್ಲಿ ಒಂದೇ ಒಂದು ಪೈಸೆಯಷ್ಟು ತಪ್ಪಿದ್ದರೇ ಬಿಜೆಪಿ ಅವರು ಹೇಳಿದ ಶಿಕ್ಷೆಗೆ ಗುರಿಯಾಗುತ್ತೇನೆ ಎಂದು ಶಾಸಕ ಶಿವಲಿಂಗೇಗೌಡ ಇದೇ ವೆಳೆ ಸವಾಲೆಸೆದರು.