ಕನ್ನಡಪ್ರಭ ವಾರ್ತೆ ಹುಮನಾಬಾದ್
ಪರವಾನಿಗೆ ವಿಲ್ಲದೆ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ಕಾರ್ಖಾನೆಗಳು ತಲೆ ಎತ್ತಿ ನಿಂತಿವೆ. ಈ ಕಾರ್ಖಾನೆಗಳ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ಫೆ.1ರಂದು ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾಹಿತಿ ನೀಡಿದ್ದಾರೆ.ಪಟ್ಟಣದ ಅವರ ಗೃಹ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಹುಮನಾಬಾದ್ ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ ಕಾರ್ಖಾನೆಗಳ ವಿರುದ್ಧ ಫೆ.1ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಇತ್ತಿಚೆಗೆ ಪ್ರಸನ್ ಫ್ರೀ ಪ್ರೋಸೆಸ್ ಕಾರ್ಖಾನೆಯಲ್ಲಿ ರಾಸಾಯನಿಕ ಅನಿಲ ಸೋರಿಕೆಯಿಂದ ಇಬ್ಬರು ಯುವ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಕಾರ್ಖಾನೆ ಬೀದರ್ ಕೈಗಾರಿಕಾ ಪ್ರದೇಶದಲ್ಲಿ ನಡೆಸಲು ಅನುಮತಿ ಇದ್ದು, ಅದನ್ನು ಹುಮನಾಬಾದ ಕೈಗಾರಿಕಾ ಪ್ರದೇಶದಲ್ಲಿ ರಾಜಾರೋಷವಾಗಿ ನಡೆಸಲಾಗುತ್ತಿದೆ. ಇಂತಹ ಕೈಗಾರಿಕಾ ಘಟಕಗಳ ವಿರುದ್ಧ ಪ್ರತಿಭಟನೆ ಮಾಡುವುದು ಅನಿವಾರ್ಯತೆ ಎದುರಾಗಿದೆ ಎಂದರು.ಕೈಗಾರಿಕಾ ಘಟಕಗಳಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಶಾಸಕರು ಹಾಗೂ ಅವರ ಸಹೋದರು ಒಟ್ಟಾಗಿ ಹಣ ಸುಲಿಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಜತಗೆ ಕಾರ್ಖಾನೆಗಳಿಂದ ಹೊರ ಬರುವ ಇದ್ದಿಲು (ಕೊಳಸೆ) ತಮ್ಮ ಸ್ವಂತ ಜಮೀನಿನಲ್ಲಿ ಸಂಗ್ರಹಿಸಿ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ಶಾಸಕರ ದುರಾಡಳಿತ ಹಾಗೂ ಕಾರ್ಖಾನೆಗಳ ವಿರುದ್ಧ ಫೆ.1ರಂದು ಪ್ರತಿಭಟನೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಫ್ಸರಮಿಯ, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಓಂಕಾರ ತುಂಬಾ, ಯುವ ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ಉಮೇಶ ಜಮಗಿ, ಮಾಣಿಕ ನಗರ ಗ್ರಾಪಂ. ಅಧ್ಯಕ್ಷೆ ಪಂಚಶೀಲಾ ಹೆಗಣಿ, ಸುರೇಶ ಘಾಂಗ್ರೆ, ಮಲ್ಲಿಕಾರ್ಜುನ್ ಶರ್ಮಾ, ಮಲ್ಲಿಕಾರ್ಜುನ್ ಪ್ರಭಾ, ಮಲ್ಲಿಕಾರ್ಜುನ್ ಹುಮನಾಬಾದೆ ಸೇರಿ ಕಾರ್ಯಕರ್ತರು ಸಭೆಯಲ್ಲಿದ್ದರು.