ಅನಂತಕುಮಾರ ಹೆಗಡೆ ಅಸಂವಿಧಾನವಾಗಿ ಮಾತನಾಡುವ ಮೂಲಕ ಜಿಲ್ಲೆಯ ಜನ ತಲೆ ತಗ್ಗಿಸುವ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಜನರ ಬಾಯಿಯಲ್ಲಿ ಇಂತಹ ಶಬ್ದಗಳು ಬರುವುದಿಲ್ಲ.
ಶಿರಸಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಅಸಂವಿಧಾನಿಕವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಇಲ್ಲಿಯ ಅಂಚೆ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಅವರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಜಿಪಂ ಮಾಜಿ ಸದಸ್ಯ ಬಸವರಾಜ ದೊಡ್ಮನಿ, ಅನಂತಕುಮಾರ ಹೆಗಡೆ ಅಸಂವಿಧಾನವಾಗಿ ಮಾತನಾಡುವ ಮೂಲಕ ಜಿಲ್ಲೆಯ ಜನ ತಲೆ ತಗ್ಗಿಸುವ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಜನರ ಬಾಯಿಯಲ್ಲಿ ಇಂತಹ ಶಬ್ದಗಳು ಬರುವುದಿಲ್ಲ. ಸುಸಂಸ್ಕೃತ ಜಿಲ್ಲೆಯಿಂದ ಆಯ್ಕೆಯಾಗಿದ್ದರೂ ಸಂಸದರ ಮಾತು ಬೇಜವಾಬ್ದಾರಿಯುತವಾಗಿವೆ. ಅನೇಕ ಬಾರಿ ಆಯ್ಕೆ ಆದರೂ, ಸಂಸದರು ತಮ್ಮ ಘನತೆ ಮೀರಿ ಮಾತನಾಡುತ್ತಾರೆ. ಅವರು ಸಂಸದರಾಗಿರುವುದು ನಮ್ಮ ದುರಂತ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ಮಾತನಾಡಿ, ಅಭಿವೃದ್ಧಿ ಮಾಡದ ವ್ಯಕ್ತಿ ಅವಹೇಳನ ಮಾಡುವ ಮೂಲಕ ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಅನಂತಕುಮಾರ ಹೆಗಡೆ ಅವರು ತಾವೇನು ಸಾಧನೆ ಮಾಡಿದ್ದೇನೆ ಎಂಬುದನ್ನು ಬಹಿರಂಗಪಡಿಸಿ ಜನರ ಬಳಿ ತೆರಳುವುದನ್ನು ಬಿಟ್ಟು ಈ ರೀತಿಯ ಇನ್ನೊಬ್ಬರ ಬಗ್ಗೆ ಮಾತನಾಡುತ್ತ ತಮ್ಮ ಘನತೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.ಜ್ಯೋತಿಗೌಡ ಪಾಟೀಲ, ದೀಪಕ ದೊಡ್ಡೂರು, ಶಕುಂತಲಾ, ನಾಗರಾಜ ಮುರ್ಡೇಶ್ವರ, ಅಬ್ಬಾಸ್ ತೋನ್ಸೆ ಇತರರಿದ್ದರು.
ಅನಂತಕುಮಾರ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕುಮಟಾದಲ್ಲಿ ಏಕವಚನದಲ್ಲಿ
ಕರೆದಿರುವುದಕ್ಕೆ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಭಾಗವಾಗಿ ಶಿರಸಿಯಲ್ಲೂ ನಡೆಯಿತು. ಸಂಸದರ ಹೇಳಿಕೆ ವಿರುದ್ಧ ಈಗಾಗಲೇ ಪರ-ವಿರೋಧ ಚರ್ಚೆಯಾಗುತ್ತಿದ್ದು ಕಾಂಗ್ರೆಸ್ ಮುಖಂಡರು ಮುಗಿಬಿದ್ದಿದ್ದಾರೆ. ಜತೆಗೆ ಬಿಜೆಪಿ ಹಲವರು ಸಹ ಸಂಸದ ಹೇಳಿಕೆಗೆ ಖಂಡಿಸಿದರೆ, ಕೆಲವರು ಸಮರ್ಥಿಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.