ಕನ್ನಡಪ್ರಭ ವಾರ್ತೆ ವಿಜಯಪುರ
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ದಲಿತ ಮಹಿಳೆ ಕುರಿತು ಕೊಪ್ಪಳದಲ್ಲಿ ನೀಡಿದ ಹೇಳಿಕೆ ಖಂಡಿಸಿ ನಗರ ಬ್ಲಾಕ್ ಕಾಂಗ್ರೆಸ್ ಪ.ಜಾ ಘಟಕ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ನಿಂದ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಕಾಂಗ್ರೆಸ್ ಪ.ಜಾ ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, ದಲಿತ ಮಹಿಳೆಯನ್ನು ಅವಮಾನಿಸಿದ್ದಾರೆ. ಅಲ್ಲದೆ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಮಾತನಾಡುವಾಗ ಹಿಂದುಗಳು ನಾವೆಲ್ಲರೂ ಒಂದು, ದಲಿತರು ಮತ್ತು ಹಿಂದುಳಿದವರು ಎಲ್ಲ ಜಾತಿ ಸಮುದಾಯದವರನ್ನು ಒಂದು ಎಂದು ಹೇಳುವ ತಾವು ದಲಿತರನ್ನು ಅವಮಾನಿಸಿ ಮಾತನಾಡಿರುವುದನ್ನು ಖಂಡಿಸುತ್ತೇವೆ ಎಂದರು.
ದಲಿತರು ಕೂಡ ಹಿಂದುಗಳೇ ಎನ್ನುವುದು ನೆನಪಿರಲಿ. ಸಿಎಂ ಸಿದ್ದರಾಮಯ್ಯನವರು ಮೈಸೂರು ದಸರಾ ಉದ್ಘಾಟಿಸಲು ಮುಸ್ಲಿಂ ಮಹಿಳೆ ಸಾಹಿತಿ ಬಾನು ಮುಸ್ತಾಕ ಅವರಿಗೆ ಅವಕಾಶ ನೀಡಿದ್ದನ್ನು ಸ್ವಾಗತಿಸುತ್ತೇವೆ. ಮುಂದಿನ ದಿನಗಳಲ್ಲಿ ದಲಿತರಿಗೂ ನಾಡಹಬ್ಬ ಮೈಸೂರು ದಸರಾ ಉತ್ಸವ ಉದ್ಘಾಟಿಸಲು ಅವಕಾಶ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪೂರ ಮಾತನಾಡಿ, ಎಲ್ಲ ಹೆಣ್ಣುಮಕ್ಕಳಿಗೆ ಸಮಾನ ಹಕ್ಕನ್ನು ನೀಡಿರುವ ಅಂಬೇಡ್ಕರ ಅವರ ಸಂವಿಧಾನವನ್ನು ಧಿಕ್ಕರಿಸಿ ಯತ್ನಾಳ ಮಾತನಾಡಿದ್ದಾರೆ. ಅವರ, ಮಾತುಗಳು ಹೆಣ್ಣು ಕುಲಕ್ಕೆ ಮಾಡಿರುವ ಅವಮಾನ ಎಂದು ಕಿಡಿಕಾರಿದರು.
ನಗರ ಬ್ಲಾಕ್ ಕಾಂಗ್ರೆಸ್ ಪ.ಜಾ ಘಟಕದ ಅಧ್ಯಕ್ಷ ಪರಶುರಾಮ ಹೊಸಮನಿ, ಜಲನಗರ ಬ್ಲಾಕ್ ಪ.ಜಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಛಲವಾದಿ, ಭಾರತಿ ಹೊಸಮನಿ, ತಿಪ್ಪಣ್ಣ ಮಾತನಾಡಿದರು.ಪ್ರತಿಭಟನೆಯಲ್ಲಿ ಡಿಸಿಸಿ ಉಪಾಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಫಯಾಜ ಕಲಾದಗಿ, ಅಕ್ರಂ ಮಶಾಳಕರ, ಅಪ್ಪು ಪೂಜಾರಿ, ವಿರೇಶ ಕಲಾಲ, ಸಂತೋಷ ಶಹಾಪುರ, ಅಶ್ಫಾಕ ಮನಗೂಳಿ, ಮಹಾದೇವ ರಾವಜಿ, ಮಹಾದೇವ ಚಲವಾದಿ ಮುಂತಾದವರು ಭಾಗವಹಿಸಿದ್ದರು.