- ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ್ದ ಸ್ಥಳ ಶುದ್ಧೀಕರಣಕ್ಕೆ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಆಕ್ರೋಶ - - -
ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಉತ್ತರಾಖಂಡ ರಾಜ್ಯದಲ್ಲಿ ಈಚೆಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಮೌನ ಪ್ರತಿಭಟನಾ ಧರಣಿ ನಡೆಸಲಾಯಿತು.
ನಗರದ ಪಾಲಿಕೆ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಡಾ. ಬಿ.ಆರ್.ಅಂಬೇಡ್ಕರ್ ವೃತ್ತವನ್ನು ತಲುಪಿಸಿ, ಅಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ನೇತೃತ್ವದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.ಇದೇ ವೇಳೆ ಮಾತನಾಡಿದ ಎಲ್.ಹನುಮಂತಯ್ಯ, ಒಂದು ಕಡೆ ದೇಶವನ್ನು ವಿಶ್ವ ಗುರುವೆಂದು, ವಿಕಸಿತ ಭಾರತವೆಂಬು ಬಿಂಭಿಸುವ ಬಿಜೆಪಿ ನಾಯಕರು ಮತ್ತೊಂದು ಕಡೆ ಅಸ್ಪೃಶ್ಯತೆಯ ಮನಸ್ಥಿತಿ ಮುಂದುವರಿಸುತ್ತಿರುವುದು, ಖರ್ಗೆಯವರು ಸಭೆ ಮಾಡಿದ ಸ್ಥಳವನ್ನು ಶುದ್ಧೀಕರಿಸುವಂತಹ ಘಟನೆಗಳಿಗೆ ಅವಕಾಶ ನೀಡುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.
ಉತ್ತರಾಖಂಡ್ ಘಟನೆ ಬಳಿಕವೂ ತಪ್ಪಿತಸ್ಥರ ವಿರುದ್ಧ ಅಲ್ಲಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ, ವಿಳಂಬ ಧೋರಣೆ ಅನುಸರಿಸುತ್ತಿದೆ. ಎಫ್ಐಆರ್ ದಾಖಲಿಸುವಲ್ಲೂ ಮೀನಾ-ಮೇಷ ಎಣಿಸುತ್ತಿದ್ದು, ಇದುವರೆಗೂ ಯಾವೊಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಇದು ಅಲ್ಲಿನ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಉತ್ತರಾಖಂಡದಲ್ಲಿ ಅದೇ ಜಾಗಕ್ಕೆ ಭೇಟಿ ನೀಡಿದರೆಂಬ ಕಾರಣಕ್ಕೆ ಎಫ್ಐಆರ್ ದಾಖಲಿಸಿರುವುದು ಅತ್ಯಂತ ಖಂಡನೀಯ ಸಂಗತಿ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಉತ್ತರಾಖಂಡದ ಘಟನೆ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಅಲ್ಲಿ ಅಸ್ಪೃಶ್ಯತೆ ಆಚರಿಸಿದವರನ್ನು ಇನ್ನೂ ಏಕೆ ಬಂಧಿಸಿಲ್ಲ? ಆ ದುಷ್ಕರ್ಮಿಗಳಿಗೆ ಕೇಂದ್ರ ಗೃಹ ಸಚಿವಾಲಯದ ರಕ್ಷಣೆ ಸಿಕ್ಕಿದೆಯೇ? ಸಂವಿಧಾನದ 17ನೇ ವಿಧಿ ಉಲ್ಲಂಘನೆ ಬಗ್ಗೆ ಧ್ವನಿ ಎತ್ತಿದ, ಸಂವಿಧಾನದ ಪರನಿಂತಿದ್ದು ರಾಹುಲ್ ಗಾಂಧಿ ಮಾಡಿದ ಅಪರಾಧವೇ? ಮಲ್ಲಿಕಾರ್ಜುನ ಖರ್ಗೆಗೆ ಆದ ಬಹಿರಂಗ ಅವಮಾನಕ್ಕೆ ಪ್ರಧಾನಿ ಮೋದಿ ದೇಶದ ಶೋಷಿತ ವರ್ಗಗಳ ಮುಂದೆ ಬಹಿರಂಗ ಕ್ಷಮೆ ಕೇಳುವ ಧೈರ್ಯ ತೋರಲಿ ಎಂದರು.
- - -