ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

KannadaprabhaNewsNetwork |  
Published : Dec 20, 2025, 01:00 AM IST
     ಸಿಕೆಬಿ-1  ದೆಹಲಿ ಹೈಕೋರ್ಟ್‌ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಖಾಸಗಿ ದೂರನ್ನು ವಜಾಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಅಂಬೇಡ್ಕರ್  ವೃತ್ತದಲ್ಲಿ  ವಿಜಯೋತ್ಸವ ಹಾಗೂ ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ ಚಳವಳಿಗೆ ಬಹಳವಾಗಿ ಶ್ರಮಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಇತಿಹಾಸವನ್ನು ಅರಿಯದೆ, ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ,ರಾಹುಲ್‌ಗಾಂಧಿ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಈ ಪ್ರಕರಣವನ್ನು ಬಳಸಿಕೊಂಡು ಇನ್ನಿಲ್ಲದ ಕಿರುಕುಳ ನೀಡಿ, ಪಕ್ಷವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸಿ ವಿಫಲವಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಖಾಸಗಿ ದೂರನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು, ಮುಖಂಡರುಗಳು ವಿಜಯೋತ್ಸವ ಹಾಗೂ ಬಿಜೆಪಿಯ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ, ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಡೆಸುತ್ತಿದ್ದ ದ್ವೇಷದ ರಾಜಕಾರಣಕ್ಕೆ ದೆಹಲಿ ಹೈಕೋರ್ಟ್‌ ಸರಿಯಾಗಿ ಬರೆ ಎಳೆದಿದೆ ಎಂದರು.

ಬಿಜೆಪಿಯಿಂದ ದ್ವೇಷ ರಾಜಕೀಯ

ಅನಗತ್ಯವಾಗಿ ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ ಚಳವಳಿಗೆ ಬಹಳವಾಗಿ ಶ್ರಮಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಇತಿಹಾಸವನ್ನು ಅರಿಯದೆ, ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ,ರಾಹುಲ್‌ಗಾಂಧಿ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಈ ಪ್ರಕರಣವನ್ನು ಬಳಸಿಕೊಂಡು ಇನ್ನಿಲ್ಲದ ಕಿರುಕುಳ ನೀಡಿ, ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದಲ್ಲದೆ, ಓಟ್ ಚೋರಿಯಂತಹ ಪ್ರತಿಭಟನೆಯಿಂದ ದೇಶದಲ್ಲಿ ಅತ್ಯಂತ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ, ದೆಹಲಿ ಹೈಕೋರ್ಟಿನಲ್ಲಿ ಖಾಸಗಿ ದೂರು ಸಲ್ಲಿಸುವ ಮೂಲಕ ಜೈಲಿಗೆ ಅಟ್ಟುವ ಹುನ್ನಾರ ನಡೆಸಿತ್ತು ಎಂದರು. ಆದರೆ ಇದಕ್ಕೆ ಅವಕಾಶ ನೀಡದೆ ನ್ಯಾಯಾಲಯ ಕೇಸನ್ನು ವಜಾಗೊಳಿಸುವ ಮೂಲಕ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. ನ್ಯಾಯಾಲಯದ ತೀರ್ಪು ಕಾಂಗ್ರೆಸ್ ಕಾರ್ಯಕರ್ತರಿಗೆ ಬಲ ತುಂಬಿದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬಲವಾಗಿ ನಮ್ಮ ನಾಯಕರೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಹುರಿದುಂಬಿಸಿದೆ ಎಂದರು.

ನರೇಗ ಹೆಸರು ಬದಲಾವಣೆಗೆ ವಿರೋಧ

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ವಕೀಲ ನಾರಾಯಣಸ್ವಾಮಿ ಮಾತನಾಡಿ, ಎಂ ನರೇಗಾದ ಸ್ಥಾನದಲ್ಲಿ ತರಲು ಕೇಂದ್ರ ಸರ್ಕಾರ ಉದ್ದೇಶಿಸಿರುವ ಗ್ರಾಮೀಣ ಉದ್ಯೋಗ ಮಸೂದೆ ವಿಬಿ- ಜಿ ರಾಮ್ ಜಿ ಎಂದು ಮರುನಾಮಕರಣ ಮಾಡುತ್ತಿರುವುದು ಸರಿ ಅಲ್ಲ, ಇದು ಹಕ್ಕು-ಆಧಾರಿತ ಕಲ್ಯಾಣ ಯೋಜನೆಯೊಂದನ್ನು ಕೆಡವಲು, ಮಹಾತ್ಮಾ ಗಾಂಧಿಯ ಪರಂಪರೆಯನ್ನು ಅಳಿಸಿಹಾಕಲು ಹಾಗೂ ಕಾರ್ಮಿಕರ ಹಕ್ಕುಗಳು ಮತ್ತು ಕೇಂದ್ರ ಸರಕಾರದ ಜವಾಬ್ದಾರಿಯನ್ನು ತೊಡೆದುಹಾಕಲು ಬಿಜೆಪಿ-ಆರ್ ಎಸ್ಎಸ್ ನಡೆಸಿರುವ ಪಿತೂರಿಯಾಗಿದೆ ಎಂದು ಅದು ಆರೋಪಿಸಿದರು.ಜಿಲ್ಲಾ ಗ್ಯಾರಂಟಿಗಳ ಅನುಷ್ಟಾನದ ಅಧ್ಯಕ್ಷ ಯಲುವಹಳ್ಳಿ ರಮೇಶ್ ಮಾತನಾಡಿ, ಪಾರ್ಲಿಮೆಂಟ್‌ನ ವಿರೋಧಪಕ್ಷನ ನಾಯಕ ರಾಹುಲ್‌ಗಾಂಧಿ ಅವರು ಯಶಸ್ಸು ಗಳಿಸುತ್ತಿರುವುದನ್ನು ಸಹಿಸಿ ಕೊಳ್ಳಲಾಗದೆ ಬಿಜೆಪಿ ನ್ಯಾಯಾಲಯದ ಮೂಲಕ ನಮ್ಮ ನಾಯಕರ ಮೇಲೆ ಒತ್ತಡ ಹೇರಲು ಮುಂದಾಗಿತ್ತು. ಆದರೆ ನ್ಯಾಯಾಲಯ ಅದಕ್ಕೆ ಆಸ್ಪದ ನೀಡದೆ, ಬಿಜೆಪಿಯ ಹುನ್ನಾರವನ್ನು ಛಿದ್ರಗೊಳಿಸಿದೆ ಎಂದರು.

ಕಾಂಗ್ರೆಸ್‌ ಬಲಪಡಿಸಲು ಪ್ರೇರಣೆ

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ್ ಅಚ್ಚು ಮಾತನಾಡಿ, ಇದುವರೆಗೂ ಪಕ್ಷದ ವಿರುದ್ದ ಇಲ್ಲಸಲ್ಲದ ಹೇಳಿಕೆ ನೀಡಿ, ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಕೆಲಸ ಮಾಡುತಿದ್ದ ಬಿಜೆಪಿ,ಇನ್ನ ಮುಂದೆ ಇದು ನಡೆಯದೆ ಎಂಬುದನ್ನು ಮನಗಂಡು, ನ್ಯಾಯಾಲಯದ ಮೂಲಕ ಕಾಂಗ್ರೆಸ್ ಪಕ್ಷದ ಬೆಳೆವಣಿಗೆಯನ್ನು ಕುಂಠಿತಗೊಳಿಸಲು ಪ್ರಯತ್ನಿಸಿತ್ತು. ಕೋರ್ಟ್‌ ತೀರ್ಪು ಬಿಜೆಪಿಯ ದ್ವೇಷ ಕಾರಣಕ್ಕೆ ತಡೆಯೊಡ್ಡಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಿ ಹೋರಾಟ ನಡೆಸಲು ಇದು ಪ್ರರೇಣೆ ನೀಡಿದೆ ಎಂದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷಿತ್ ರೆಡ್ಡಿ, ನಾಗಭೂಷಣ್, ಮುಖಂಡರಾದ ಅಡ್ಡಗಲ್ ಶ್ರೀಧರ್,ಲಾಯರ್ ಮುನೇಗೌಡ,ಎಂ.ವಿ.ಕೃಷ್ಣಪ್ಪ. ನಾಯನಹಳ್ಳಿ ನಾರಾಯಣಸ್ವಾಮಿ, ಕುಪೇಂದ್ರ, ಡ್ಯಾನ್ಸ್ ಶ್ರೀನಿವಾಸ್, ನಾಗೇಶ್, ವಿನಯ್ ಬಂಗಾರಿ, ಉಮೇಶ್, ಶ್ರೀನಿವಾಸ್, ಯಾಸ್ಮೀನ್ ತಾಜ್, ಅಣ್ಣಮ್ಮ,ತುಳಸಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ