ಗ್ಯಾರಂಟಿಗಾಗಿ ರಸ್ತೆಯಲ್ಲಿ ಓಡಾಡುವವರಿಗೂ ಕಾಂಗ್ರೆಸ್ ಬರೆ: ಸುನಿಲ್ ಕುಮಾರ್

KannadaprabhaNewsNetwork |  
Published : Aug 24, 2024, 01:16 AM IST
ಸುನಿಲ್‌ ಕುಮಾರ್‌ | Kannada Prabha

ಸಾರಾಂಶ

ಬೆಳ್ಮಣ್ ಟೋಲ್ ಸಂಗ್ರಹ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಎರಡು ದಿನದ ಹಿಂದೆ ಪ್ರತಿಭಟನೆ ನಡೆದಿತ್ತು. ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲೆ ಪ್ರತಿಭಟನೆ ನಡೆದಿತ್ತು. ಇದನೆಲ್ಲ ಗಮನಿಸುವಾಗ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕೋಮಾ ಸ್ಥಿತಿಗೆ ತಲುಪಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಸುನಿಲ್‌ ಕುಮಾರ್‌ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳಿಗಾಗಿ ಹಣಕಾಸು ಹೊಂದಾಣಿಕೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿತ್ತು. ಈಗ ರಸ್ತೆಯಲ್ಲಿ ಓಡಾಡುವರಿಂದಲೂ ಸುಂಕ ವಸೂಲಾತಿಗೆ ಇಳಿದಿದ್ದು, ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿದೆ. ರಸ್ತೆಯಲ್ಲಿ ಓಡಾಡುವವರಿಗೂ ಬರೆ ಎಳೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.

ಬೆಳ್ಮಣ್ ಟೋಲ್ ಸಂಗ್ರಹ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಎರಡು ದಿನದ ಹಿಂದೆ ಪ್ರತಿಭಟನೆ ನಡೆದಿತ್ತು. ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲೆ ಪ್ರತಿಭಟನೆ ನಡೆದಿತ್ತು. ಇದನೆಲ್ಲ ಗಮನಿಸುವಾಗ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕೋಮಾ ಸ್ಥಿತಿಗೆ ತಲುಪಿದೆ ಎನ್ನುವುದು ಗೊತ್ತಾಗುತ್ತದೆ. ಕಾಂಗ್ರೆಸ್‌ನ ಮಾಜಿ ಜನಪ್ರತಿನಿಧಿಗಳು, ಸ್ಥಳೀಯ ನಾಯಕರು, ಕಾರ್ಯಕರ್ತರು ಎಲ್ಲರು ಗೊಂದಲದಲ್ಲಿದ್ದು, ಯಾರಿಗೆ ಮನವಿ ಕೊಡುವುದು ಎನ್ನುವುದು ಸಹ ತಿಳಿಯದ ಸ್ಥಿತಿ ಈಗ ಕಾಂಗ್ರೆಸಿಗರಿಗೆ ಬಂದಿದೆ. ತಮ್ಮದೇ ಸರ್ಕಾರ ಆಡಳಿತದಲ್ಲಿದೆ ಎನ್ನುವ ಗೊಡವೆಯೂ ಕಾಂಗ್ರೆಸಿಗರಿಗಿಲ್ಲ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೋಲ್ ಸಂಗ್ರಹ ವಿಚಾರ ಪ್ರಸ್ತಾಪವಾಗಿ ಅದಕ್ಕೆ ವಿರೋಧ ವ್ಯಕ್ತವಾದಾಗ ಸ್ಥಳೀಯರ ಅಭಿಪ್ರಾಯ ಪಡೆದು, ವಿಶ್ವಾಸಕ್ಕೆ ತೆಗೆದುಕೊಂಡು ಟೋಲ್ ಸಂಗ್ರಹ ನಿರ್ಧಾರ ವಾಪಸ್ ಪಡೆಯುವಂತೆ ಮಾಡಲಾಗಿತ್ತು. ಟೋಲ್ ಸಂಗ್ರಹಕ್ಕೆ ತಡೆ ತರಲಾಗಿತ್ತು. ಈ ಸರ್ಕಾರ ಈ ಕೂಡಲೇ ಪಡುಬಿದ್ರಿ- ಕಾರ್ಕಳ ನಡುವೆ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ನಿರ್ಧಾರ ಕೈ ಬಿಡುವಂತೆ ಅವರು ಆಗ್ರಹಿಸಿದ್ದಾರೆ.

ವಿರೋಧದ ನಡುವೆಯೂ ಜಾರಿಗೆ ಮುಂದಾದರೆ ಮುಂದೆ ತೀವ್ರ ಪ್ರತಿರೋಧ ಎದುರಿಸಬೇಕಾದಿತು ಎಂದು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ