ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಭಾನುವಾರ ಎಡಿಬಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಎನ್ಸಿಸಿ ಕಮಾಂಡರ್ ಸೂಚನೆ ಮೇರೆಗೆ ವಿದ್ಯಾರ್ಥಿಗಳಿಗೆ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆಯುತ್ತಿರುವ ಆಪರೇಷನ್ ಸಿಂದೂರ ಸೇವೆ ಜಾಗೃತಿ ಅಭಿಯಾನದ ಶಿಬಿರ ಜರುಗಿತು.
ಈ ಶಿಬಿರದಲ್ಲಿ ಎನ್ ಸಿಸಿ ಅಧಿಕಾರಿ ಡಾ.ಬಸವಲಿಂಗಪ್ಪ ಕಲ್ಮನಿ ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ದ ನಡೆದರೆ ಅಗತ್ಯ ಸೇವೆಗೆ ಆರ್ಮಿ ಗೈಡ್ ಲೈನ್ಸ್ ಪ್ರಕಾರ ತಾವುಗಳೆಲ್ಲರೂ ಸೆಕೆಂಡ್ ಲೈನ್ ಡಿಫೆನ್ಸ್ ಸೇವಕರಾಗಿ ದೇಶ ಸೇವೆಗೆ ಹೋಗಲು ಸನ್ನದ್ಧರಾಗಬೇಕೆಂದು ಕರೆ ನೀಡಿದರು.ಆಗ ಯುದ್ಧ ಸೇವೆಯ ಸೇವಕರಾಗಿ ಸ್ವಇಚ್ಚೆಯಿಂದ 50 ಎನ್ಸಿಸಿ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸುವುದರ ಜೊತೆಗೆ ಒಪ್ಪಿಗೆ ಪತ್ರ ನೀಡಿದರು.
ಭಾರತ ಪಾಕಿಸ್ತಾನ ನಡುವೆ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಭಾರತೀಯ ಸೈನಿಕರಿಗೆ ಶಕ್ತಿ ಮತ್ತು ಆಯುಷ್ಯಕ್ಕಾಗಿ ಭಾರತೀಯ ಕಿಸಾನ್ ಸಂಘದ ಸದಸ್ಯ ಎಂ.ಬಿ. ಬಸವರಾಜ ನೇತೃತ್ವದಲ್ಲಿ ಗ್ರಾಮದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ವಾಯುಸೇನೆ ಉಗ್ರರ ನೆಲೆ ಮೇಲೆ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆಸಿದ ದಾಳಿಯಲ್ಲಿ ಭಾರತೀಯ ಸೈನಿಕರು ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡಿ ಮಟ್ಟ ಹಾಕಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರ ಉತ್ಪಾದನೆ ಮಾಡುವ ಕೇಂದ್ರವಾಗಿದೆ. ಇದು ಪ್ರಪಂಚಕ್ಕೆ ಅಪಾಯಕಾರಿಯಾಗಿದೆ. ಇದನ್ನು ಮಟ್ಟ ಹಾಕಲು ನಮ್ಮ ಭಾರತೀಯ ಸೇನೆಯು ನಡೆಸಿರುವ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸುವ ಮೂಲಕ ಶಕ್ತಿ ಪ್ರದರ್ಶನದ ಜತೆಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಈ ಮೂಲಕ ಭಯೋತ್ಪಾದನೆಯಿಂದ ಭಾರತದ ಶಾಂತಿಗೆ ಧಕ್ಕೆ ತರಲು ಯತ್ನಿಸಿದರೆ ಪಾಪಿ ಪಾಕಿಸ್ತಾನಕ್ಕೆ ಉಳಿಗಾಲ ಇಲ್ಲ ಎಂಬ ಸಂದೇಶ ರವಾನಿಸಿದೆ ಎಂದರು.ಈ ಸಂದರ್ಭದಲ್ಲಿ ಡಿ.ಕೊಟ್ರೇಶ, ಕೊಟ್ರಪ್ಪ, ನಾಗರಾಜ್, ಅಶೋಕ,ಬುಶಪ್ಪ, ಎಂ.ಈಶಪ್ಪ ಸೇರಿದಂತೆ ಇತರರಿದ್ದರು.