ಶಿರಸಿ: ಪಕ್ಷದ ವಿರುದ್ಧ ಪಿತೂರಿ ಮಾಡಿ ಪಕ್ಷಕ್ಕೆ ಹಾನಿ ಮಾಡುವವರನ್ನು ಕ್ಷಮಿಸುವುದಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ನಗರದ ದೀನದಯಾಳ ಭವನದಲ್ಲಿ ಹಮ್ಮಿಕೊಂಡ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ, ಪಕ್ಷ ವಹಿಸಿದ ಸಂಘಟನಾತ್ಮಕ ಕೆಲಸಗಳ ಜತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಎಕ್ಕ ಕಾರ್ಯಕರ್ತರು ಒಂದಾಗಿ ಮಾಡಬೇಕು ಎಂದು ಹೇಳಿದರು.ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ ಮಾತನಾಡಿ, ಪಕ್ಷದ ಕಾರ್ಯಕರ್ತರಾದ ಮೇಲೆ ಜನರು ನಮ್ಮನ್ನು ಸಮಾಜದಲ್ಲಿ ಗುರುತಿಸುವಂತಾಗಿದೆ. ಪಕ್ಷ ನಮಗೆ ಎಲ್ಲವನ್ನೂ ನೀಡಿದೆ, ನಾವು ಪಕ್ಷದ ಸಂಘಟನೆಗೆ ಸಮಯವನ್ನು ನೀಡಿ ಬಲಗೊಳಿಸೋಣ ಎಂದರು.ರಾಜ್ಯ ಸರ್ಕಾರವು ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ರಸ್ತೆಗಳ ಹೊಂಡಗಳನ್ನು ತುಂಬಲೂ ಈ ಸರ್ಕಾರದ ಬಳಿ ಹಣ ಇಲ್ಲ. ಬಿಜೆಪಿ ಆಡಳಿತ ಇರುವ ಶಿರಸಿ ನಗರಸಭೆಯಲ್ಲಿ ಅಧಿಕಾರಿಗಳ ಜೊತೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಯಾವುದೇ ಜನಪರ ಕೆಲಸ ಆಗುತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳನ್ನು ಮುಂದಿಟ್ಟು ಬಿಜೆಪಿ ವಿರುದ್ಧ ಪಿತೂರಿ ಮಾಡಿ ಅಪಪ್ರಚಾರ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇಂತಹ ಸುಳ್ಳಿನ ಅಪಪ್ರಚಾರ ಸಜ್ಜನ ಶಿರಸಿ ಮಹಾಜನತೆ ನಂಬುವುದಿಲ್ಲ. ರಾಜ್ಯ ಸರ್ಕಾರದ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಬಿಜೆಪಿ ಮೇಲೆ ಅಪಪ್ರಚಾರ ಮಾಡುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಂದಿನ ದಿನಗಳಲ್ಲಿ ಜನತೆಯ ಮುಂದೆ ಇಟ್ಟು ಹೋರಾಟ ಮಾಡಲಾಗುವುದು ಎಂದು ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಿವೃತ್ತ ಯೋಧ ಅನಂತ ಭಟ್ಟ ಬೋಪ್ಪನಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಮಂಡಲ ಪ್ರಭಾರ ಚಂದ್ರಕಲಾ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್ ನಾಯ್ಕ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಚೇರ್ಮನ್ ರಾಘವೇಂದ್ರ ಶೆಟ್ಟಿ, ಮೋರ್ಚಾ ಅಧ್ಯಕ್ಷರು, ಮಂಡಲ ಪದಾಧಿಕಾರಿಗಳು, ನಗರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಹಾದಿಮನಿ ನಿರೂಪಿಸಿದರು. ಉಷಾ ನಾಯ್ಕ ವಂದಿಸಿದರು.