ನಾಲ್ಕು ಅವಧಿಗೆ ಸಂಸದರಾಗಿ ಕ್ಷೇತ್ರದ ಜನತೆ ನಿರೀಕ್ಷೆಯನ್ನೇ ಹುಸಿ ಮಾಡಿದ ಪಕ್ಷದ ಸಂಸದರನ್ನು ಬದಲಿಸಬೇಕು. ಇಲ್ಲದಿದ್ದರೆ ದಾವಣಗೆರೆ ಕ್ಷೇತ್ರ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.
- 20 ವರ್ಷ ಸಂಸದರಾಗಿ ಏನೂ ಅಭಿವೃದ್ಧಿ ಕೈಗೊಂಡಿಲ್ಲ: ಸಿದ್ದೇಶ್ವರ ವಿರುದ್ಧ ಡಾ.ಪ್ರಭಾ ಮಲ್ಲಿಕಾರ್ಜುನ ವಾಗ್ದಾಳಿ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಾಲ್ಕು ಅವಧಿಗೆ ಸಂಸದರಾಗಿ ಕ್ಷೇತ್ರದ ಜನತೆ ನಿರೀಕ್ಷೆಯನ್ನೇ ಹುಸಿ ಮಾಡಿದ ಪಕ್ಷದ ಸಂಸದರನ್ನು ಬದಲಿಸಬೇಕು. ಇಲ್ಲದಿದ್ದರೆ ದಾವಣಗೆರೆ ಕ್ಷೇತ್ರ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಹರಪನಹಳ್ಳಿ ತಾಲೂಕಿನ ನಿಚ್ಚವ್ವನಹಳ್ಳಿ, ಕಡಬಗೆರೆ, ಸಾಸ್ವಿಹಳ್ಳಿ, ಮತ್ತಿಹಳ್ಳಿ, ಮೈದೂರು, ನಂದಿಬೇವೂರು, ಚಿಗಟೇರಿ, ಬಳಿಗನೂರು, ಬೆಣ್ಣೆಹಳ್ಳಿ ಗ್ರಾಮ ಹಾಗೂ ಹರಪನಹಳ್ಳಿ ಪಟ್ಟಣದಲ್ಲಿ ಶುಕ್ರವಾರ ರೋಡ್ ಶೋ, ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ದಾವಣಗೆರೆ ಕ್ಷೇತ್ರದ ಬದಲಾವಣೆಗಾಗಿ ತಮಗೆ ಬೆಂಬಲಿಸಿ, ಮತ ನೀಡುವ ಮೂಲಕ ಗೆಲ್ಲಿಸಿ ಎಂದು ಕೋರಿದರು.
ಹಾಲಿ ಸಂಸದರು ಈ ಭಾಗದ ಯಾವುದೇ ಸಮಸ್ಯೆಗೂ ಸ್ಪಂದಿಸದೇ ಕಾಲಹರಣ ಮಾಡಿದ್ದಾರೆ. ಇಂತಹ ಸಂಸದರನ್ನು ಸ್ವತಃ ಬಿಜೆಪಿಯೇ ಬದಲಾಯಿಸಿ, ಅದೇ ಸಂಸದರ ಕುಟುಂಬಕ್ಕೆ ಮಣೆ ಹಾಕಿದೆ. ಸ್ವತಃ ಬಿಜೆಪಿಯೇ ಬದಲಿಸದ ಕುಟುಂಬವನ್ನು ಮತದಾರರಾದ ನೀವು ಬದಲಾವಣೆ ಮಾಡಬೇಕು ಎಂದು ತಿಳಿಸಿದರು.
ಎಲ್ಲ ಸಮುದಾಯಕ್ಕೂ ಕಾಂಗ್ರೆಸ್ ಸಾಕಷ್ಟು ಅನುಕೂಲ ಕಲ್ಪಿಸಿದೆ. ಇದನ್ನು ಪ್ರತಿಯೊಬ್ಬರೂ ಮನಸ್ಸಿನಲ್ಲಿಟ್ಟುಕೊಂಡು ಮೇ 7ರಂದು ಕಾಂಗ್ರೆಸ್ ಪಕ್ಷದ ಹಸ್ತ ಗುರುತಿಗೆ ಮತ ನೀಡಬೇಕು. ಗ್ಯಾರಂಟಿ ಯೋಜನೆಯಡಿ ಹರಪನಹಳ್ಳಿ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ₹164 ಕೋಟಿ ಹಣ ಫಲಾನುಭವಿಗಳಿಗೆ ವಿತರಿಸಲಾಗಿದೆ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚನ್ಯಾಯ ಪಚ್ಚೀಸ್ ಗ್ಯಾರಂಟಿ’ ಭರವಸೆ ನೀಡಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರು., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗ ಜಾರಿ, ನರೇಗಾ ಕೂಲಿ ಹಣವನ್ನು ₹400ಕ್ಕೆ ಹೆಚ್ಚಳ ಸೇರಿದಂತೆ ಹಲವು ಭರವಸೆ ಈಡೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಸಂಸದ ಜಿ.ಎಂ. ಸಿದ್ದೇಶ್ವರರಿಂದ ನಮ್ಮ ಭಾಗಕ್ಕೆ ಏನೂ ಉಪಯೋಗವಾಗಿಲ್ಲ. ಡಾ.ಪ್ರಭಾ ಮಲ್ಲಿಕಾರ್ಜುನ ಸಾಮಾಜಿಕ ಕಳಕಳಿ ವ್ಯಕ್ತಿತ್ವದವರು. ಈ ಕ್ಷೇತ್ರವನ್ನು ಪ್ರತಿನಿಧಿಸಿದರೆ ಹರಪನಹಳ್ಳಿ ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಹಿರಿಯ ಮುಖಂಡ ಅರಸೀಕೆರೆ ಎನ್.ಕೊಟ್ರೇಶ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ವಿ.ಅಂಜಿನಪ್ಪ, ಕುಬೇರಪ್ಪ ಬಿ.ಕೆ.ಪ್ರಕಾಶ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.
- - - -3ಕೆಡಿವಿಜಿ17, 18:
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹರಪನಹಳ್ಳಿ ತಾಲೂಕಿನಲ್ಲಿ ಶುಕ್ರವಾರ ಪ್ರಚಾರ ಕೈಗೊಂಡರು. ಶಾಸಕಿ ಲತಾ ಮಲ್ಲಿಕಾರ್ಜುನ, ಅರಸೀಕೆರೆ ಎನ್.ಕೊಟ್ರೇಶ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.