ವೀರಶೈವ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ । ಶಾಸಕ ಎಚ್.ಟಿ.ಮಂಜು ಅಭಯ
ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಆಡಳಿತ ಪಕ್ಷದ ಸಹಕಾರ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶಾಸಕ ಎಚ್.ಟಿ. ಮಂಜು ಹೇಳಿದರು.
ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಾನು ವಿಪಕ್ಷ ಶಾಸಕನಾಗಿದ್ದರೂ ಎದೆಗುಂದದೆ ಜನರು ನೀಡಿದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಕ್ಷೇತ್ರದ ನೀರಾವರಿ ಸಮಸ್ಯೆಗಳು, ರಸ್ತೆ ಮತ್ತಿತರರ ಅಭಿವೃದ್ಧಿ ಕಾಮಗಾರಿಗಳು, ಪಟ್ಟಣದ ಒಳಚರಂಡಿ ಯೋಜನೆ, ಹೇಮಾವತಿ ಬಡಾವಣೆ ನಿವಾಸಿಗಳ ಅಕ್ರಮ-ಸಕ್ರಮ ಸೇರಿದಂತೆ ಕ್ಷೇತ್ರದ ಸಮಸ್ಯೆಗಳನ್ನು ಎಲ್ಲಿ ಮಂಡಿಸಬೇಕೋ ಅಲ್ಲಿ ಮಂಡಿಸಿ ಸರ್ಕಾರದ ಗಮನ ಸೆಳೆದಿದ್ದೇನೆ ಎಂದರು.
ಚುನಾವಣಾ ಪೂರ್ವದಲ್ಲಿ ತಾಲೂಕಿನ ವೀರಶೈವ ಸಮಾಜ ನನಗೆ ನೀಡಿದ ಭರವಸೆಯನ್ನು ಹುಸಿಗೊಳಿಸದಂತೆ ನನ್ನ ಗೆಲುವಿಗೆ ಸಹಕರಿಸಿದೆ. ಇದಕ್ಕಾಗಿ ನಾನು ವೀರಶೈವ ಸಮುದಾಯಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದರು.ಪ್ರತಿಭೆ ಸಾಧಕನ ಸ್ವತ್ತು. ಪ್ರತಿಯೊಂದು ಸಮಾಜದಲ್ಲಿಯೂ ಪ್ರತಿಭಾನ್ವಿತರಿದ್ದಾರೆ. ಸಮುದಾಯ ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸುವ ಕೆಲಸವಾಗಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ಮಾನಸಿಕವಾಗಿ ಗಟ್ಟಿಯಾಗಿದ್ದಾರೆ. ಅವರನ್ನು ಸಮಾಜಮುಖಿಯನ್ನಾಗಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.
ಶರಣ ಸಮಾಜ ಬಸವ ಮಾರ್ಗದಲ್ಲಿ ಮುನ್ನಡೆಯಬೇಕು. ನಮಗೆ ಎಲ್ಲಾ ಸಮುದಾಯಗಳ ಪ್ರೀತಿಗೆ ಭಾಜನರಾದ ಸಿದ್ದಗಂಗೆಯ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳು ಆದರ್ಶವಾಗಬೇಕು. ದೈವ ಸ್ಮರಣೆಯಿಂದ ನಮ್ಮ ಮನಸ್ಸನ್ನು ನಾವು ಸಮತೋಲನದಲ್ಲಿಟ್ಟುಕೊಳ್ಳಲು ಸಾಧ್ಯ ಎಂದು ತಿಳಿಸಿದರು.ವೀರಶೈವ ಸಮಾಜದ ಬಸವ ಭವನ ನಿರ್ಮಾಣಕ್ಕೆ ಜಾಗದ ಕೋರಿಕೆಯಿಟ್ಟಿದೆ. ರೈತ ಸಮುದಾಯಕ್ಕೂ ಅನ್ಯಾಯವಾಗದಂತೆ ಸರ್ವೆ ನಂ 287 ರ ಸರ್ಕಾರಿ ಜಾಗದಲ್ಲಿ ವೀರಶೈವ ಮಹಾಸಭಾಕ್ಕೆ ಜಾಗ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಕಾಪನಹಳ್ಳಿ ಸ್ವತಂತ್ರ ಸಿದ್ದಲಿಂಗೇಶ್ವರ ಗವೀಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜ ಎಲ್ಲರಿಗೂ ಸೇರಿದ್ದು. ಸಮಾಜದ ಅಭಿವೃದ್ದಿಗೆ ಎಲ್ಲರೂ ಒಗ್ಗೂಡಬೇಕು. ಶರಣ ಮಾರ್ಗವನ್ನು ಅರಿತು ನಡೆಯಬೇಕು. ನಮ್ಮ ಮಕ್ಕಳಿಗೆ ವಚನ ಧರ್ಮಸಾರದ ಅರಿವು ಮೂಡಿಸಿ ಶರಣ ಪಥದಲ್ಲಿ ಸಾಗುವಂತೆ ಮಾಡಬೇಕು. ಯುವಕರಿಗೆ ಲಿಂಗಧಾರಣೆ ಮಹತ್ವವನ್ನು ತಿಳಿಸಿ ಲಿಂಗಧಾರಣೆ ಮಾಡಿಸುವಂತೆ ಕರೆ ನೀಡಿದರು.ತಾಲೂಕು ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ವಿ.ಎಸ್. ಧನಂಜಯ ಸಮಾಜದ ಸಮಸ್ಯೆಗಳ ಕುರಿತು ತಿಳಿಸಿದರು. ಕಳೆದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಯಲ್ಲಿ ಅತೀ ಹೆಚ್ಚು ಅಂಕ ಪಡೆದ ವೀರಶೈವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಗೌರವಿಸಲಾಯಿತು.
ಸಮಾರಂಭದಲ್ಲಿ ಪುರ ಗ್ರಾಮದ ಮಲೆಮಹದೇಶ್ವರ ದೇವಾಲಯದ ಬಸಪ್ಪಶಾಸ್ತ್ರಿ, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಮ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಮುಖಂಡರಾದ ಸಾಸಲು ನಾಗೇಶ್, ಚೌಡಸಮುದ್ರ ರುದ್ರಪ್ಪ, ಅಕ್ಕಿಹೆಬ್ಬಾಳು ಬಸವಲಿಂಗಪ್ಪ, ಕೆ.ಎಸ್.ರಾಜೇಶ್, ಉಪನ್ಯಾಸಕ ಮಹೇಶ್, ಯುಗಚಗುಪ್ಪೆ ಶಿವಪ್ಪ, ಮಾದೇಶ್, ಜಯನಂದಿನಿ, ವೀರಶೈವ ಮಹಾಸಭಾ ಘಟಕದ ಕಾರ್ಯದರ್ಶಿ ಬಿ.ಎಸ್.ಈರಪ್ಪ ಸೇರಿದಂತೆ ಹಲವರು ಇದ್ದರು.-----
ಕೆ.ಆರ್.ಪೇಟೆ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಚ್.ಟಿ. ಮಂಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದರು.