ಪಂಚಾಯಿತಿ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು, ಜನರು ಸ್ವಾಗತ
ಪಟ್ಟಣದ ಸಮೀಪ ಇರುವ ಬಂಟೇನಹಳ್ಳಿ ಗ್ರಾಮ ಪಂಚಾಯಿತಿಗೆ ಸಂವಿಧಾನ ಜಾಗೃತಿ ಜಾಥಾ ಆಗಮಿಸಿದ ಸಂದರ್ಭದಲ್ಲಿ ಪಂಚಾಯಿತಿ ಎಲ್ಲಾ ಜನಪ್ರತಿನಿಧಿಗಳು ಮತ್ತು ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು ಸ್ವಾಗತ ಕೋರಿದರು.
೭೫ ನೇ ಗಣರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರ, ಹಾಸನ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ ಬೇಲೂರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಂವಿದಾನ ಜಾಗೃತಿ ಜಾಥಾ ಬೇಲೂರು ತಾಲೂಕಿನಲ್ಲಿ ಸದ್ಯ ಸಂಚರಿಸುವ ಮೂಲಕ ಜಾಗೃತಿ ಅಭಿಯಾನ ಕೈಗೊಂಡಿದೆ. ಬಂಟೇನಹಳ್ಳಿ ಮುಖ್ಯ ರಸ್ತೆಗೆ ಡಾ.ಅಂಬೇಡ್ಕರ್ ಭಾವಚಿತ್ರ ಮತ್ತು ಸಂವಿಧಾನ ಆಶಯಗಳನ್ನು ಒಳಗೊಂಡ ಜಾಥಾ ಗ್ರಾಮಕ್ಕೆ ಆಗಮಿಸಿಸುತ್ತಿದ್ದಂತೆ ಡೋಲು, ವಾದ್ಯ ಮತ್ತು ಸ್ತ್ರೀಯರಿಂದ ಪೂರ್ಣಕುಂಭದ ಮೂಲಕ ವಿಶೇಷವಾಗಿ ಸ್ವಾಗತಿಸಿದರು.ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಕ್ಕಬ್ಯಾಡಿಗೆರೆ ಮಂಜುನಾಥ್ ಮತ್ತು ಉಪಾಧ್ಯಕ್ಷೆ ಜಯಮ್ಮ, ಗ್ರಾಮ ಪಂಚಾಯಿತಿ ಪಿಡಿಓ ರಾಜಶೇಖರ್, ರಾಷ್ಟçಪತಿ ಪದಕ ವಿಜೇತ ಶಿಕ್ಷಕ ಕಲ್ಲೇಶ್, ಸದಸ್ಯ ದಾಸಪ್ಪ ಸೇರಿದಂತೆ ಇತರರು ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನದ ಮೂಲಕ ಗೌರವ ಸಲ್ಲಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಕ್ಕಬ್ಯಾಡಿಗೆರೆ ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಮಹಾದೇವಪ್ಪ ಸಂವಿದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಇಡೀ ರಾಜ್ಯದಲ್ಲಿ ಜಾಗೃತಿ ನಡೆಸಲು ಅನುವು ಮಾಡಿದ್ದಾರೆ. ಇತ್ತೀಚಿನ ದಿನದಲ್ಲಿ ಕೆಲವರು ರಾಜಕೀಯ ದುರುದ್ದೇಶಕ್ಕಾಗಿ ಸಂವಿಧಾನದ ಬಗ್ಗೆ ಇಲ್ಲ-ಸಲ್ಲದ ಹೇಳಿಕೆ ನೀಡಿವುದು ನಿಜಕ್ಕೂ ಶೋಚನೀಯ, ಮೊದಲು ಸಂವಿಧಾನವನ್ನು ಸಂಪೂರ್ಣವಾಗಿ ಆರ್ಥ ಮಾಡಿಕೊಳ್ಳಬೇಕಿದೆ ಎಂದರು.