ರಾಮನಗರ: ದೇಶದಲ್ಲಿ ಜಾತೀಯತೆ ಮತ್ತು ಕೋಮುವಾದದ ಜೊತೆಗೆ, ಸಂವಿಧಾನ ವಿರೋಧಿ ಮನಸ್ಥಿತಿ ಹೆಚ್ಚಾಗುತ್ತಿವೆ. ಇದರ ವಿರುದ್ಧ ಸಂವಿಧಾನ ಪ್ರಜ್ಞೆ ಮತ್ತು ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡು ಹೋರಾಡಬೇಕಿದೆ ಎಂದು ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಹೇಳಿದರು.
ಹೊಸ ವರ್ಷಾರಂಭದಲ್ಲಿ ದೇಶಾದ್ಯಂತ ಕೋರೆಗಾಂವ್ ವಿಜಯೋತ್ಸವ ಆಚರಿಸುತ್ತೇವೆ. ಪೇಶ್ವೆ ಸೈನ್ಯವನ್ನು ಸಿದ್ದನಾಕ ನೇತೃತ್ವದ ಮಹರ್ ಸೈನಿಕರು ಧೂಳಿಪಟ ಮಾಡಿದ ಕದನ ಶೋಷಿತರ ದಿಗ್ವಿಜಯವಾಗಿದೆ. ಆದರೆ, ಇಂದು ಹೆಚ್ಚುತ್ತಿರುವ ಪೇಶ್ವೆಗಳ ವಿರುದ್ಧ ಹೋರಾಡಬೇಕಾದ ಸಿದ್ದನಾಕರಂತಹ ಸೈನಿಕರು ಕಡಿಮೆಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಮಹಿಳೆಯರಿಗೆ ಈ ಕಾಲದಲ್ಲೇ ಸರಿಸಮಾನವಾದ ಸ್ಥಾನಮಾನ ನೀಡಲು ಸಮಾಜ ಪೂರ್ತಿ ಅಣಿಯಾಗಿಲ್ಲ. ಅಂತಹದ್ದರಲ್ಲಿ 180 ವರ್ಷಗಳ ಹಿಂದೆಯೇ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸ್ವಾವಲಂಬನೆಗಾಗಿ ಸಾವಿತ್ರಿಬಾಯಿ ಫುಲೆ ಅವರು ಕ್ರಾಂತಿ ಮಾಡಿದರು. ಇಂದು ಹೆಣ್ಣು ಮಕ್ಕಳು ಸರಿಸಮಾನವಾದ ಶಿಕ್ಷಣ ಪಡೆದು, ಹಲವು ವಿಷಯಗಳಲ್ಲಿ ಸ್ವಾವಲಂಬನೆ ಸಾಧಿಸಿದ್ದರೆ, ಅದಕ್ಕೆ ಫುಲೆ ಅವರ ಹೋರಾಟ, ತ್ಯಾಗ ಹಾಗೂ ಕ್ರಾಂತಿ ಕಾರಣ. ಸಮಿತಿಯು ನೌಕರರ ಹಿತಾಸಕ್ತಿ ಕಾಯ್ದುಕೊಳ್ಳುತ್ತಾ, ಅಂಬೇಡ್ಕರ್ ಆಶಯದ ಹಾದಿಯಲ್ಲಿ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಸಮಿತಿಗೆ ಅಗತ್ಯವಿರುವ ಕಚೇರಿಯನ್ನು ನಗರದಲ್ಲಿ ಒದಗಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.ಪ್ರಾಸ್ತಾವಿಕ ಮಾತುಗಳನ್ನಾಡಿದ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್. ಜೈಪ್ರಕಾಶ್, ಸಮಿತಿಯು 19 ವರ್ಷಗಳಿಂದ ನೌಕರರ ಹಿತ ಕಾಯುತ್ತಿದೆ. ಸಮಿತಿಯಲ್ಲಿ ಎಲ್ಲರೂ ಸಮಾನರಾಗಿದ್ದು, ಅದೇ ಭಾವನೆಯೊಂದಿಗೆ ಸಂಘಟಿತರಾಗಿ ಸಮುದಾಯದ ಕಲ್ಯಾಣಕ್ಕೆ ಶ್ರಮಿಸೋಣ. ಎಲ್ಲರೂ ಸಹಕಾರ ಕೊಟ್ಟರೆ ಮುಂದೆ ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ. ಕುಮಾರ್ ಎಚ್.ಎಸ್, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ನಾಗರಾಜು, ಹಿರಿಯ ಪಶು ವೈದ್ಯಾಧಿಕಾರಿ ಡಾ. ಗಿರೀಶ್ ಎಸ್, ಕರ್ನಾಟಕ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ನಾಗರಾಜು, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ವಿಜಯಕುಮಾರ್, ಕೋಶಾಧ್ಯಕ್ಷ ಶಿವರುದ್ರಯ್ಯ, ಉಪಾಧ್ಯಕ್ಷ ಕೆಂಪಸಿದ್ದಯ್ಯ, ಮೋಹನ್, ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ನಾಗರಾಜು, ಗೌರವ ಸಲಹೆಗಾರರಾದ ಗವಿಯಯ್ಯ, ಸಿ.ಸಿದ್ದರಾಜು, ರಾಮನಗರ ತಾಲೂಕು ಅಧ್ಯಕ್ಷ ಎಂ.ಪುರುಷೋತ್ತಮ, ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕರಿಗೆ ಸನ್ಮಾನ:ರಾಮನಗರ ತಾಲೂಕಿನ ಜೋಡಿಕರೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಜಯಮಾಲ, ಟ್ರೂಪ್ಲೈನ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉರ್ದು ಶಿಕ್ಷಕಿ ಸುಮೇರಾ ಬೇಗಂ, ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಇಂದ್ರಮ್ಮ, ಹೊಸದುರ್ಗದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಸಮಿತಾ, ಹಾರೋಹಳ್ಳಿ ತಾಲೂಕಿನ ಗಬ್ಬಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮುನಿಕೆಂಪಮ್ಮ ಹಾಗೂ ಮಾಗಡಿಯ ಸರ್ಕಾರಿ ಬಾಲಕಿಯರ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕಿ ಉಮಾದೇವಿ ಅವರನ್ನು ಸನ್ಮಾನಿಸಲಾಯಿತು.
ಮಹನೀಯರ ಹೋರಾಟದ ಫಲ ಹಾಗೂ ಅಂಬೇಡ್ಕರ್ ಸಂವಿಧಾನದ ಕಾರಣ ಇಂದು ನಾವು ಎಲ್ಲರಂತೆ ಸರಿಸಮಾನರಾಗಿ ಬದುಕುತ್ತಿದ್ದೇವೆ. ಮಹನೀಯರ ಆದರ್ಶದ ಹಾದಿಯಲ್ಲಿ ಶೋಷಿತರು ಸಂಘಟಿತರಾಗಿ, ದನಿ ಇಲ್ಲದವರ ಧ್ವನಿಯಾಗಬೇಕು.
19ಕೆಆರ್ ಎಂಎನ್ 2.ಜೆಪಿಜಿ